‘ಬುಲ್ಲಿ ಬಾಯಿ ಆ್ಯಪ್’ ಪ್ರಕರಣ: ಮೂವರು ವಿದ್ಯಾರ್ಥಿಗಳಿಗೆ ಜಾಮೀನು
ಮುಂಬೈ, ಎ.19: ಮುಸ್ಲಿಂ ಮಹಿಳೆಯರನ್ನು ಹರಾಜಿಗಿಟ್ಟಿದ್ದ ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಮೂವರು ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರು ಮಾಡಿರುವ ಇಲ್ಲಿಯ ಬಾಂದ್ರಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ಅವರ ‘ಅಪಕ್ವ ವಯಸ್ಸು ಮತ್ತು ತಿಳುವಳಿಕೆ’ಯನ್ನು ಹೆಚ್ಚು ತಿಳುವಳಿಕೆ ಹೊಂದಿದ್ದ ಇತರ ಆರೋಪಿಗಳು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಎತ್ತಿ ಹಿಡಿದಿದೆ.
ಆರೋಪಿಗಳಾದ ವಿಶಾಲಕುಮಾರ ಝಾ,ಶ್ವೇತಾಸಿಂಗ್ ಮತ್ತು ಮಯಾಂಕ್ ಅಗರವಾಲ್ ಅವರಿಗೆ ಎ.12ರಂದು ಜಾಮೀನು ಮಂಜೂರು ಮಾಡಿರುವ ನ್ಯಾ.ಕೆ.ಸಿ.ರಜಪೂತ ಅವರು,ಇತರ ಆರೋಪಿಗಳಾದ ಓಂಕಾರೇಶ್ವರ ಠಾಕೂರ್ ಮತ್ತು ನೀರಜ ಸಿಂಗ್ ಅವರಿಗೆ ಜಾಮೀನು ನಿರಾಕರಿಸಿದ್ದಾರೆ.
ಸಾಧ್ಯವಾದರೆ,ಸಾಮಾಜಿಕ ಜಾಲತಾಣಗಳಲ್ಲಿ ನಡವಳಿಕೆ ಸೇರಿದಂತೆ ಸಾಮಾಜಿಕ ನಡವಳಿಕೆಯ ಕುರಿತು ತಮ್ಮ ಮಕ್ಕಳನ್ನು ಸಮಾಲೋಚನೆಗೆ ಒಳಪಡಿಸುವಂತೆ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಆರೋಪಿಗಳ ಪೋಷಕರಿಗೆ ನ್ಯಾಯಾಲಯವು ಸೂಚಿಸಿದೆ.
ಈ ಹಿಂದೆ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯಗಳು ಅವರಿಗೆ ಜಾಮೀನು ನಿರಾಕರಿಸಿದ್ದವು. ಪೊಲೀಸರು ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದ ಬಳಿಕ ಆರೋಪಿಗಳು ಹೊಸದಾಗಿ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು.