ಬಿಜೆಪಿಯ ತಜೀಂದರ್ ಪಾಲ್ ಸಿಂಗ್ ಬಗ್ಗಾರನ್ನು ಜುಲೈ 5 ರವರೆಗೆ ಬಂಧಿಸುವಂತಿಲ್ಲ: ಪಂಜಾಬ್ -ಹರ್ಯಾಣ ಹೈಕೋರ್ಟ್
ಹೊಸದಿಲ್ಲಿ: ಬಿಜೆಪಿಯ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾರನ್ನು ಜುಲೈ 5 ರವರೆಗೆ ಬಂಧಿಸುವಂತಿಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ ಎಂದು NDTV ವರದಿ ಮಾಡಿದೆ.
ಶುಕ್ರವಾರ ಪಂಜಾಬ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬಗ್ಗಾ ಅವರನ್ನು ಕುರುಕ್ಷೇತ್ರದಲ್ಲಿ ಹರ್ಯಾಣ ಪೊಲೀಸರು ತಡೆದಿದ್ದರು. ಬಳಿಕ ದಿಲ್ಲಿ ಪೊಲೀಸರು ಪಂಜಾಬ್ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಸುವುದರೊಂದಿಗೆ ಮೂರು ರಾಜ್ಯಗಳ ಪೊಲೀಸರು ಈ ಎಲ್ಲ ನಾಟಕೀಯ ಬೆಳವಣಿಗೆಯಲ್ಲಿ ಭಾಗಿಯಾದರು.
ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರಿಗೆ ಮಂಗಳವಾರ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ನಿಂದ ರಿಲೀಫ್ ಸಿಕ್ಕಿದೆ.
ಕಳೆದ ವಾರ ಮೊಹಾಲಿ ನ್ಯಾಯಾಲಯವು ತನ್ನ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್ಗೆ ತಡೆ ಕೋರಿ ಬಗ್ಗಾ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಕಳೆದ ತಿಂಗಳು ಪಂಜಾಬ್ ಪೊಲೀಸರು ಬಗ್ಗಾ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ವಾರಂಟ್ ಆಗಿದೆ. ಅವರಿಗೆ ಆರಂಭದಲ್ಲಿ ಮೇ 10 ರವರೆಗೆ ರಿಲೀಫ್ ನೀಡಲಾಗಿದ್ದು, ಅದನ್ನು ಇಂದು ವಿಸ್ತರಿಸಲಾಗಿದೆ.
ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ದ್ವೇಷವನ್ನು ಉತ್ತೇಜಿಸುವುದು ಹಾಗೂ ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪಂಜಾಬ್ ಪೊಲೀಸರು ತಜಿಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೊಹಾಲಿ ನಿವಾಸಿ ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.