ದಾರ್ಶನಿಕರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಿ: ಉಡುಪಿ ಅಪರ ಜಿಲ್ಲಾಧಿಕಾರಿ
ಉಡುಪಿ : ಸಾಧಕರು, ದಾರ್ಶನಿಕರ ತತ್ವ, ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳುವುದ ರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಭಗೀರಥ ಮಹರ್ಷಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಹೇಮರೆಡ್ಡಿ ಮಲ್ಲಮ್ಮ ಅಚಲವಾದ ವಿಶ್ವಾಸ, ತಾಳ್ಮೆಯಿಂದ ತನ್ನ ಕುಟುಂಬ ದವರ ಮನಸ್ಸನ್ನು ಗೆಲ್ಲುವುದರ ಜೊತೆಗೆ ಅವರ ಮನ ಪರಿವರ್ತನೆ ಮಾಡಿ ಸಮಾಜದಲ್ಲಿ ಬದಲಾವಣೆಯನ್ನು ತಂದು ಸಮಾಜ ಸುಧಾರಣೆ ಮಾಡಿದರು ಎಂದರು.
ತನ್ನ ಭಕ್ತಿ ಕಾಯಕದಿಂದ ಮನೆ ಮಾತಾಗಿದ್ದ ಮಲ್ಲಮ್ಮ, ಕೌಟುಂಬಿಕ ಕಷ್ಟಗಳನ್ನು ಮೆಟ್ಟಿನಿಂತು ಆದರ್ಶ ಮೌಲ್ಯ ಗಳನ್ನು ಬದುಕಿನಲ್ಲಿ ರೂಢಿಸಿಕೊಂಡು, ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಶಿವಶರಣೆ ನಮ್ಮೆಲ್ಲರಿಗೆ ಮಾದರಿ ಎಂದರು.
ಭಗೀರಥ ಮಹರ್ಷಿಯು ತನ್ನ ಸತತ ಪ್ರಯತ್ನದಿಂದ ಶಿವನ ಜಟೆಯಲ್ಲಿದ್ದ ಗಂಗೆಯನ್ನು ಧರೆಗೆ ತಂದನು. ಭಗೀರಥ ಪ್ರಯತ್ನ ಎಂಬ ನುಡಿಗಟ್ಟು ಸ್ಪೂರ್ತಿಯ ಸೆಲೆಯಾಗಿದೆ. ಗುರುಭಕ್ತಿ, ಶ್ರದ್ಧೆ, ಏಕಾಗ್ರತೆ ಹಾಗೂ ತಪೋನಿಷ್ಠೆಗೆ ಭಗೀರಥ ಮಹರ್ಷಿ ಆದರ್ಶರಾಗಿದ್ದು, ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ನುಡಿದರು.
ಉಡುಪಿ ಚಿತ್ರಕಲಾ ಶಾಲೆಯ ಪ್ರಾಂಶುಪಾಲ ನಿರಂಜನ್ ಯು.ಸಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಭಗೀರಥ ಮಹರ್ಷಿಯ ಕುರಿತು ಉಪನ್ಯಾಸ ನೀಡಿದರು. ಸಮಾಜದ ಮುಖಂಡ ಸಿದ್ಧಬಸಯ್ಯ ಸ್ವಾಮಿ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ ಜೀವನಚರಿತ್ರೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ನೆಹರೂ ಯುವ ಕೇಂದ್ರದ ಸಮನ್ವಯ ಅಧಿಕಾರಿ ವಿಲ್ಫ್ರೆಡ್ ಡಿ ಸೋಜಾ, ವಾರ್ತಾಧಿಕಾರಿ ಮಂಜುನಾಥ್ ಬಿ, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.