ಭ್ರಷ್ಟಾಚಾರ ಮುಚ್ಚಿ ಹಾಕಲು ಕೋಮು ವಿವಾದ ಸೃಷ್ಠಿ: ಧ್ರುವನಾರಾಯಣ್
ಉಡುಪಿ : ಮಸೀದಿಗಳಲ್ಲಿ ದಶಕಗಳಿಂದ ಧ್ವನಿವರ್ಧಕ ಸೇರಿದಂತೆ ವಿವಿಧ ರೀತಿಯ ಆಚರಣೆ ಯಾವ ರೀತಿ ನಡೆಯುತ್ತಿತ್ತೊ ಅದುವೇ ಮುಂದು ವರೆಯಲಿ. ಇವರು ದೇವಸ್ಥಾನಗಳಲ್ಲಿ ಭಜನೆ ಮಾಡಲಿ. ಯಾರು ಬೇಡ ಹೇಳುತ್ತಾರೆ. ಅವರ ಧರ್ಮ ಆಚರಣೆ ಅವರು ಮಾಡುತ್ತಾರೆ. ಅದನ್ನು ತಡೆಯಲು ನಾವು ಯಾರು. ಬಿಜೆಪಿ ಯವರು ತಮ್ಮ ಆಡಳಿತದಲ್ಲಿನ ಭ್ರಷ್ಟಾಚಾರ ಮುಚ್ಚಿ ಹಾಕಲು ಹಿಜಾಬ್ ಸೇರಿದಂತೆ ಕೋಮು ವಿವಾದಗಳನ್ನು ಸೃಷ್ಠಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇನ್ನೊಂದೆಡೆ ಬಿಜೆಪಿ ಸರಕಾರ ಜನಪರ ಕಾರ್ಯಕ್ರಮ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲದೆ ವ್ಯಾಪಾಕ ಭ್ರಷ್ಟಾಚಾರದಲ್ಲಿ ಸರಕಾರ ತೊಡಗಿದೆ. ಆದರೆ ಇವತ್ತು ಸರ್ವ ಜನಾಂಗಗಳ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಅಶಾಂತಿ ಮೂಡಿ ಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ದೂರಿದರು.
ಮುತಾಲಿಕ್ ಅವರಿಗೆ ರಾಮ ಮಂದಿರ, ದೇವಸ್ಥಾನಗಳಲ್ಲಿ ಭಜನೆ ಮಾಡ ಬಾರದು ಎಂದು ಹೇಳಿದವರು ಯಾರು? ಇವರಿಗೆ ಈಗ ಭಜನೆ ಮಾಡಲು ಮನಸ್ಸು ಆಗಿದೆಯೇ? ಬೇರೆ ಧರ್ಮದವರು ಭಜನೆ ಮಾಡಬೇಡಿ ಎಂದು ಹೇಳಿದ್ದಾರೆಯೇ? ಅವರ ಧರ್ಮದ ಆಚರಣೆ ಅವರು ಮಾಡುತ್ತಾರೆ, ನಮ್ಮ ಧರ್ಮವನ್ನು ನಾವು ಆಚರಿಸುತ್ತೇವೆ. ಧರ್ಮಧರ್ಮಗಳ ಮಧ್ಯೆ ಕಂದಕ ಮೂಡಿ ಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.
ಬಹುಸಂಖ್ಯಾತ ಕ್ರೈಸ್ತ ಧರ್ಮದವರು ಇರುವ ಅಮೆರಿಕಾದಲ್ಲಿ ಅನೇಕ ದೇವ ಸ್ಥಾನಗಳಿವೆ. ಇಸ್ಲಾಮಿಕ್ ದೇಶವಾಗಿರುವ ಅರಬ್ ರಾಷ್ಟ್ರಗಳಲ್ಲಿ ಲಕ್ಷಾಂತರ ಹಿಂದುಗಳು ವಾಸ ಮಾಡುತ್ತಿದ್ದಾರೆ. ಅಲ್ಲಿ ಹಿಂದುಗಳಿಗೆ ಯಾರದರೂ ತೊಂದರೆ ಕೊಟ್ಟಿದ್ದಾರೆಯೇ. ನಮ್ಮ ದೇಶದಲ್ಲಿ ಈ ರೀತಿ ಯಾಕೆ. ಭಾರತ ಜಾತ್ಯತೀತ ದೇಶವೇ ಹೊರತು ಒಂದು ಧರ್ಮ, ಜಾತಿ, ಭಾಷೆಗೆ ಸೀಮಿತವಾದ ದೇಶ ಅಲ್ಲ ಎಂದು ಅವರು ಹೇಳಿದರು.