ಪಾಕ್ ಏಜಂಟ್ಗೆ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ವಾಯು ಪಡೆ ಕಚೇರಿ ಸಿಬ್ಬಂದಿ ದೇವೇಂದರ್ ನಾರಾಯಣ್ ಶರ್ಮ ಬಂಧನ
ಹೊಸದಿಲ್ಲಿ,ಮೇ 12: ಪಾಕಿಸ್ತಾನದ ಮಹಿಳಾ ಏಜೆಂಟ್ಗೆ ವರ್ಗೀಕೃತ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ಭಾರತೀಯ ವಾಯುಪಡೆ (ಐಎಎಫ್)ಯ ಸಾರ್ಜಂಟ್ ಓರ್ವನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೇನಾ ಸಿಬ್ಬಂದಿಗಳು,ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳನ್ನು ಸೋರಿಕೆ ಮಾಡುವಂತೆ ಪಾಕಿಸ್ತಾನಿ ಮಹಿಳೆಯೋರ್ವಳು ತನ್ನನ್ನು ಹನಿಟ್ರಾಪ್ನಲ್ಲಿ ಸಿಲುಕಿಸಿದ್ದಳು ಎಂದು ಆರೋಪಿ ದೇವೇಂದ್ರ ನಾರಾಯಣ ಶರ್ಮಾ (32) ಹೇಳಿಕೊಂಡಿದ್ದು, ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಶರ್ಮಾ ದಿಲ್ಲಿಯ ಸುಬ್ರತೊ ಪಾರ್ಕ್ನಲ್ಲಿರುವ ವಾಯುಪಡೆಯ ದಾಖಲೆಗಳ ಕಚೇರಿಯಲ್ಲಿ ಆಡಳಿತ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಕಾನ್ಪುರ ಮೂಲದ ಈತನನ್ನು ಮೇ 6ರಂದು ದಿಲ್ಲಿಯ ಧೌಲಾ ಕುವಾಂ ಪ್ರದೇಶದಿಂದ ಬಂಧಿಸಲಾಗಿದೆ.
ಶರ್ಮಾ ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಪಾಕ್ ಮಹಿಳೆಗೆ ಮಾಹಿತಿಗಳನ್ನು ಸೋರಿಕೆ ಮಾಡಿದ್ದ. ಆತ ಕಂಪ್ಯೂಟರ್ಗಳು ಮತ್ತು ಇತರ ಕಡತಗಳಿಂದ ಮಾಹಿತಿಗಳನ್ನು ರಹಸ್ಯವಾಗಿ ಪಡೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
‘ಶರ್ಮಾ ಮಹಿಳೆಯನ್ನು ಫೇಸ್ಬುಕ್ನಲ್ಲಿ ಭೇಟಿಯಾಗಿದ್ದ ಮತ್ತು ಆಕೆ ನಂತರ ಆತನೊಂದಿಗೆ ಸ್ನೇಹವನ್ನು ಬೆಳೆಸಿಕೊಂಡಿದ್ದಳು. ಮಾಹಿತಿಗಾಗಿ ಆಕೆ ಶರ್ಮಾಗೆ ಆಗಾಗ್ಗೆ ಕರೆಗಳನ್ನು ಮಾಡುತ್ತಿದ್ದಳು. ಐಎಎಫ್ ರಾಡಾರ್ಗಳ ನೆಲೆಗಳು,ಹಿರಿಯ ಅಧಿಕಾರಿಗಳ ನಿಯೋಜನೆ ಮತ್ತು ಅವರ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳಲು ಆಕೆ ಪ್ರಯತ್ನಿಸುತ್ತಿದ್ದಳು. ನಾವು ಶರ್ಮಾನ ಪತ್ನಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ್ದು,ಅನುಮಾನಾಸ್ಪದ ವಹಿವಾಟುಗಳು ಕಂಡು ಬಂದಿವೆ. ಮಹಿಳೆಯು ಬಳಸಿದ್ದ ನಂಬರ್ಗಳು ನಮಗೆ ಲಭಿಸಿವೆ ಮತ್ತು ಆಕೆಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ’ಎಂದೂ ಪೊಲೀಸರು ತಿಳಿಸಿದರು.
ಶರ್ಮಾನ ಬಳಿಯಿಂದ ವಿದ್ಯುನ್ಮಾನ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವನ್ನು ಪೊಲೀಸರು ಶಂಕಿಸಿದ್ದಾರೆ.
ಶರ್ಮಾ ಸೋರಿಕೆಯಾದ ಮಾಹಿತಿಗಳನ್ನು ಮಾರಾಟ ಮಾಡುತ್ತಿದ್ದ ಎಂದೂ ಪೊಲೀಸರು ಆರೋಪಿಸಿದ್ದಾರೆ.