ಕಟಪಾಡಿಯಲ್ಲಿ ಮಕ್ಕಳ ಬೇಸಿಗೆ ಶಿಬಿರ
ಕಾಪು : ಕಟಪಾಡಿಯ ಪ್ರಥಮ ಮ್ಯಾಜಿಕ್ ವರ್ಲ್ಡ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರವು ಕಟಪಾಡಿಯ ಎಸ್ವಿಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಮ್ಯಾಜಿಕ್ ಮೂಲಕ ಶಿಬಿರವನ್ನು ಉದ್ಘಾಟಿಸಿದ ಎಸ್ವಿಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಸತ್ಯಂದ್ರ ಪೈ ಮಾತನಾಡಿ, ಮಕ್ಕಳ ಪ್ರತಿಭೆ ಬೆಳಗಲು ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಪ್ರತೀ ತಿಂಗಳಿಗೊಮ್ಮೆ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಶಿಬಿರದಲ್ಲಿ ಚಿತ್ರಕಲೆ ಬಗ್ಗೆ ಪ್ರಸಾದ ರಾವ್ ಉಡುಪಿ, ಮುಖವಾಡ ತಯಾರಿ ಬಗ್ಗೆ ರಮೇಶ್ ಬಂಟಕಲ್, ಮ್ಯಾಜಿಕ್- ಪ್ರಥಮ್ ಕಾಮತ್, ಅಭಿನಯ- ನಾಗೇಶ್ ಕಾಮತ್, ಕ್ಲೇಮಾಡ್ಲಿಂಗ್, ಕ್ರಾಫ್ಟ್, ಟ್ಯಾಟೂ ಬಗ್ಗೆ- ಮುಸ್ತಫಾ, ರಂಗೋಲಿ ಆರ್ಟ್ ಬಗ್ಗೆ ಸೂರ್ಯ ಪುರೋಹಿತ್ ಕಾರ್ಕಳ ತರಬೇತಿಯನ್ನು ನೀಡಿದರು.
ಸಮಾರೋಪ ಸಮಾರಂಭದಲ್ಲಿ ಎಸ್ವಿಎಸ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ದೇವೇಂದ್ರ ನಾಯಕ್ ಮಕ್ಕಳಿಗೆ ಶುಭಹಾರೈಸಿದರು. ಸುಮಾರು ೨೨ ಮಂದಿ ಮಕ್ಕಳು ಭಾಗವಹಿಸಿದ ಶಿಬಿರವನ್ನು ಮ್ಯಾಜಿಕ್ ವರ್ಲ್ಡ್ನ ಪ್ರಥಮ ಕಾಮತ್, ನಾಗೇಶ್ ಕಾಮತ್, ಸುಜಾತ ಕಾಮತ್ ಕಟಪಾಡಿ ಆಯೋಜಿಸಿದ್ದರು.