ಮಾನವ ಸೇವೆಯೇ ನಾರಾಯಣನ ಸೇವೆ: ಸಚಿವೆ ನಿರ್ಮಲಾ ಸೀತಾರಾಮನ್
ಉಡುಪಿ : ಮಾನವನ ಸೇವೆಯೇ ನಾರಾಯಣನ ಸೇವೆ. ಮಾನವ ಕಲ್ಯಾಣದ ಗುರಿಯ ಹಾದಿಯಲ್ಲಿ ಮಾನವನ ಸೇವೆಯೇ ಬದುಕಿನ ಧ್ಯೇಯವಾಗಬೇಕು ಎಂದು ಕೇಂದ್ರ ಹಣಕಾಸು ಹಾಗೂ ಸಾಂಸ್ಥಿಕ ವ್ಯವಹಾರ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅವರು ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ ವತಿಯಿಂದ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ಶ್ರೀವಿಶ್ವೇಶತೀರ್ಥ ಸೇವಾಧಾಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕರಾವಳಿ ಗುಣಮಟ್ಟದ ಶಿಕ್ಷಣದ ಹಬ್ ಆಗಿದ್ದು ಜನತೆ ಉದ್ಯಮಶೀಲರಾಗಿದ್ದಾರೆ, ಇಲ್ಲಿ ಅವಕಾಶ ವಂಚಿತರಿಗೂ ಪಾಲು ಸಿಗಬೇಕು ಎಂದರು.
ಉಡುಪಿ ಶ್ರೀಕೃಷ್ಣಮಠದ ಹಾಗೂ ವಿಶೇಷವಾಗಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರೊಂದಿಗಿನ ತಮ್ಮ ಸಂಬಂಧವನ್ನು ಸ್ಮರಿಸಿಕೊಂಡ ನಿರ್ಮಲಾ ಸೀತಾರಾಮನ್, ಹಿಂದೂ ಧರ್ಮಕ್ಕಾಗಿ ಶ್ರೀವಿಶ್ವೇಶತೀರ್ಥರ ತ್ಯಾಗ, ಕೊಡುಗೆಗಳನ್ನು ಸ್ಮರಿಸಿದರು.
ಪೇಜಾವರ ಮಠದ ಆಡಳಿತಕ್ಕೆ ಸೇರಿದ ಅನಾಥ ಮಕ್ಕಳ ಆಶ್ರಯ ಧಾಮ ಶ್ರೀಕೃಷ್ಣ ಬಾಲಕನಿಕೇತನದಲ್ಲಿರುವ ಚೈಲ್ಡ್ ಹೆಲ್ಪ್ಲೈನ್ ಮೂಲಕ ತೊಂದರೆಯಲ್ಲಿರುವ ಮಕ್ಕಳಿಗೆ ನೀಡುತ್ತಿರುವ ನೆರವನ್ನು ಶ್ಲಾಘಿಸಿದರು.
ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥರು ಆಶೀರ್ವಚನ ನೀಡಿ, ಗರ್ಭಗುಡಿಯಲ್ಲಿರುವ ಪ್ರತಿಮೆ ಮಾತ್ರವಲ್ಲದೆ ಸಮಾಜದ ಪ್ರತಿಯೊಬ್ಬರಲ್ಲೂ ನಮ್ಮ ಗುರುಗಳು ದೇವರನ್ನು ಕಂಡಿದ್ದಾರೆ. ಅವಕಾಶ ವಂಚಿತ ಮಕ್ಕಳು ದಾರಿ ತಪ್ಪಿ, ಸಮಾಜ ಕಂಟಕರಾಗದೆ ಸಮಾಜದ ಆಸ್ತಿಯಾಗಲು ಶ್ರೀಕೃಷ್ಣ ಬಾಲನಿಕೇತನ ಸ್ಥಾಪಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಅವಕಾಶ ವಂಚಿತ ಮಕ್ಕಳ ಸರ್ವತೋಮುಖ ಅಭಿವೃದ್ಧಿ, ದೇಶದ ಉತ್ತಮ ಪ್ರಜೆಯಾಗಿಸಲು ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಪೇಜಾವರಶ್ರೀಗಳ ಸಂಕಲ್ಪ ಶ್ಲಾಘನೀಯ. ಮಕ್ಕಳು, ಮಹಿಳೆಯರಿಗೆ ಅಗತ್ಯ ಬಿದ್ದಾಗ ಕೌನ್ಸಿಲಿಂಗ್ ನೆರವು ಸಿಗಬೇಕು ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಮುರಲಿ ಕಡೆಕಾರ್ ಅವರಿಗೆ ಬಾಲ ವಾತ್ಸಲ್ಯ ಸಿಂಧು ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಲಕ್ಷ್ಮೀನಾರಾಯಣ್, ಶ್ರೀಕೃಷ್ಣ ಸೇವಾಧಾಮ ಟ್ರಸ್ಟಿನ ಉಪಾಧ್ಯಕ್ಷ ಪ್ರೊ. ಕಮಲಾಕ್ಷ ಉಪಸ್ಥಿತರಿದ್ದರು.
ಶ್ಯಾಮಲಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟ್ನ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು.
ಸ್ಪರ್ಧೆ ಬಗ್ಗೆ ಪಕ್ಷ ನಿರ್ಧಾರ
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಲು ಸಚಿವೆ ಯಾವುದೇ ಉತ್ಸುಕತೆ ತೋರಿಸಲಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಮತ್ತೆ ಕರ್ನಾಟಕದಿಂದ ಇಲ್ಲಾ ಅನ್ಯ ರಾಜ್ಯದಿಂದ ಸ್ಪರ್ಧಿಸುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸಿ, ಪಕ್ಷ ಹಾಗೂ ವರಿಷ್ಠರು ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ನುಡಿದರು.