ಜೂಜಾಟಕ್ಕೆ ಅನುಮತಿ ನೀಡುವುದಾಗಿ ವಂಚಿಸಿದ ಆರೋಪ: ಸಾಮಾಜಿಕ ಕಾರ್ಯಕರ್ತ ವಶಕ್ಕೆ
ಬೆಂಗಳೂರು, ಮೇ 16:ಜೂಜಾಟ ಕ್ಲಬ್ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೊವೊಂದು ವೈರಲ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ರಮೇಶ್ ಎಂಬುವರು ನೀಡಿದ ದೂರಿನ ಅನ್ವಯ ಮೊಕದ್ದಮೆ ದಾಖಲಾಗಿದೆ.
ಇನ್ನೂ, ಒಂದು ತಿಂಗಳ ಹಿಂದೆ ಮಾಗಡಿ ರಸ್ತೆಯ ಕ್ಲಬ್ವೊಂದರಲ್ಲಿ ಜೂಜಾಟ ಕ್ಲಬ್ ಮಾಲಕರ ಸಭೆ ನಡೆಸಿದ್ದ ಅಡಿಗ, ಈ ವೇಳೆ ತನ್ನ ಹೆಸರಲ್ಲಿ ಕ್ಲಬ್ ಇದ್ದರೆ ಯಾರು ದಾಳಿ ಮಾಡಲ್ಲ. ಇದಕ್ಕಾಗಿ ಪ್ರತಿ ತಿಂಗಳು 50 ಸಾವಿರ ನೀಡಬೇಕು ಎಂದು ಹೇಳಿದ್ದ ಎನ್ನಲಾಗಿದೆ.
ಆದರೆ, ಇದಕ್ಕೆ ರಮೇಶ್ ಹಾಗೂ ಶ್ರೀನಿವಾಸ್ ಎಂಬುವರು ಒಪ್ಪಿರಲಿಲ್ಲ. ಹೀಗಾಗಿ, ನನ್ನ ಸಹಕಾರವಿಲ್ಲದೆ ಹೇಗೆ ಕ್ಲಬ್ ನಡೆಸುತ್ತೀರಿ ಎಂದು ಬೆದರಿಕೆ ಹಾಕಿದ್ದಲ್ಲದೇ, ಪಿಸ್ತೂಲ್ ತೋರಿಸಿ ನಾನು ಅರ್ಧ ಗಂಟೆಯಲ್ಲಿ ಕ್ಲಬ್ ಬಂದ್ ಮಾಡಿಸುತ್ತೇನೆ ಎಂದು ಶ್ರೀನಿವಾಸ್ ಬಳಿ 50 ಸಾವಿರ ತೆಗೆದುಕೊಂಡು ಹೋಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.