"ಶಿವಲಿಂಗ ದೊರಕಿದೆ ಎನ್ನಲಾದ ಸ್ಥಳ ರಕ್ಷಿಸಬೇಕು, ಮುಸ್ಲಿಮರ ನಮಾಝ್ ಗೆ ತೊಂದರೆಯಾಗಬಾರದು"
ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಧೀಶರ ಹೇಳಿಕೆ
ಹೊಸದಿಲ್ಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಪ್ರಕರಣವು ಸದ್ಯ ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿ ಆದೇಶ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.
ಪ್ರಕರಣದ ವಿಚಾರಣೆಯನ್ನು ಮುಂದೂಡಿ ಆದೇಶ ನೀಡಿದ ನ್ಯಾಯಪೀಠವು, "ಶಿವಲಿಂಗ ದೊರಕಿದೆ ಎನ್ನಲಾದ ಸ್ಥಳವನ್ನು ಸಂರಕ್ಷಿಸಬೇಕು ಅದರೊಂದಿಗೆ, ಮುಸ್ಲಿಮರಿಗೆ ನಮಾಝ್ ಹಾಗೂ ಅವರ ಇತರ ಧಾರ್ಮಿಕ ಕಾರ್ಯಗಳನ್ನು ನಡೆಸಲು ಯಾವುದೇ ತೊಂದರೆಯಾಗಬಾರದು" ಎಂದಿದೆ.
ಮಸೀದಿ ಆಡಳಿತ ಸಮಿತಿಯ ಪರ ವಕೀಲರು, ಅದು ಶಿವಲಿಂಗವಲ್ಲ, ಮಸೀದಿಯ ವಝೂಖಾನಾ ಅಥವಾ ಶುದ್ಧೀಕರಣ ಟ್ಯಾಂಕ್ ನಲ್ಲಿರುವ ಕಲ್ಲಿನ ಕಾರಂಜಿಯ ಒಂದು ಭಾಗವಾಗಿದೆ ಎಂದು ಹೇಳಿದರು. ಐವರು ಹಿಂದೂ ಮಹಿಳೆಯರನ್ನು ಪ್ರತಿನಿಧಿಸುತ್ತಿರುವ ವಕೀಲರು ಮಸೀದಿಯ ಸಂಕೀರ್ಣದೊಳಗಿನ ತೊಟ್ಟಿಯನ್ನು ಬರಿದಾಗಿಸಿದ ನಂತರ ಶಿವಲಿಂಗ ಪತ್ತೆಯಾಗಿದೆ ಎಂದು ಆರೋಪಿಸಿದ ಸ್ಥಳದಲ್ಲಿ ದೈನಂದಿನ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು. ವಾರಣಾಸಿ ನ್ಯಾಯಾಲಯವು ಅವರ ಮನವಿಯನ್ನು ಅಂಗೀಕರಿಸಿತು ಮತ್ತು ಮಸೀದಿಯ ಒಂದು ಭಾಗವನ್ನು ಸೀಲ್ ಮಾಡಲು ಆದೇಶಿಸಿತ್ತು.
ಹೀಗಿದ್ದರೂ, ಮಂಗಳವಾರ, "ಸಂಪೂರ್ಣ ಅರ್ಜಿಯನ್ನು ಅನುಮತಿಸುವ ಮೂಲಕ ವಾರಣಾಸಿ ನ್ಯಾಯಾಲಯವು ಅರ್ಜಿದಾರರ ವಕೀಲರು ಮಾಡಿದ ಎಲ್ಲಾ ಬೇಡಿಕೆಗಳನ್ನು ಪರಿಣಾಮಕಾರಿಯಾಗಿ ಪುರಸ್ಕರಿಸಿದೆ" ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.