ಭಾರತದ ಆರ್ಥಿಕ ಶಕ್ತಿಯನ್ನು ವಿಶ್ವಕ್ಕೆ ಪ್ರತಿಬಿಂಬಿಸಲಾಗುವುದು: ಸಿಎಂ ಬೊಮ್ಮಾಯಿ
ಬೆಂಗಳೂರು, ಮೇ 19: ಭಾರತ ಬಹುದೊಡ್ಡ ಆರ್ಥಿಕ ಶಕ್ತಿ. ಈ ಅಂಶವನ್ನು ವಿಶ್ವಕ್ಕೆ ಪ್ರತಿಬಿಂಬಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ದಾವೋಸ್ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಗೆ ಸಂಬಂಧಿಸಿದಂತೆ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂμï ಗೋಯಲ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿ ಮಾತನಾಡಿದರು.
ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾರತಕ್ಕೆ ಹೂಡಿಕೆಯನ್ನು ಆಕರ್ಷಿಸುವುದಲ್ಲದೆ, ದೇಶದ ಪರಿಸರ ಮತ್ತು ವಾತಾವರಣವನ್ನು ಪ್ರತಿಬಿಂಬಿಸಬೇಕಿದೆ. ಭಾರತ ಮತ್ತು ಕರ್ನಾಟಕದ ಆರ್ಥಿಕ ಮತ್ತು ಕೈಗಾರಿಕಾ ನೀತಿಗಳು ನಮ್ಮ ಶಕ್ತಿ. ಪರಿಸರ ಹಾಗೂ ಆರ್ಥಿಕತೆ ಜೊತೆಯಾಗಿಯೇ ಹೋಗುತ್ತವೆ. ಆದ್ದರಿಂದ ಈ ಅಂಶಗಳನ್ನು ದಾವೋಸ್ನಲ್ಲಿ ಎತ್ತಿಹಿಡಿಯಲಾಗುವುದು ಎಂದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ, ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಉಪಸ್ಥಿತರಿದ್ದರು.