ಸ್ವಂತ ಮನೆಗಾಗಿ ಎಸೆಸೆಲ್ಸಿಯಲ್ಲಿ 625 ಅಂಕ ಪಡೆದ ಏಕತಾ
ಶಾಸಕರ ಮಾತನ್ನು ಸವಾಲಾಗಿ ಸ್ವೀಕರಿಸಿದ ಮೈಸೂರಿನ ವಿದ್ಯಾರ್ಥಿನಿ
ವಿದ್ಯಾರ್ಥಿನಿ ಎಂ.ಜಿ.ಏಕತಾ
ಮೈಸೂರು,ಮೇ.19: 'ಏಳನೇ ತರಗತಿಯಲ್ಲಿ ಓದುವಾಗ ನಮ್ಮ ಶಾಲೆಗೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿದ್ದರು. ಅಂದು ಸರ್ಕಾರಿ ಶಾಲೆಗಳಲ್ಲಿ ಓದುವ, ಸ್ವಂತ ಮನೆ ಇಲ್ಲದ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದರೆ ಮನೆ ಕೊಡುವುದಾಗಿ ಹೇಳಿದ್ದರು. ಶಾಸಕರ ಮಾತನ್ನು ಸವಾಲಾಗಿ ಆಗಿ ಸ್ವೀಕರಿಸಿದೆ. 625 ಅಂಕಗಳನ್ನು ಪಡೆದೆ' ಎಂದು ವಿದ್ಯಾರ್ಥಿನಿ ಎಂ.ಜಿ.ಏಕತಾ ಸಂತಸ ವ್ಯಕ್ತಪಡಿಸಿದರು.
ಮೈಸೂರಿನ (Mysuru) ಸರ್ಕಾರಿ ಆದರ್ಶ ವಿದ್ಯಾಲಯದ (ಕೇಂದ್ರ ಪ್ರಾಯೋಜಿತ) ವಿದ್ಯಾರ್ಥಿನಿ ಏಕತಾ ಎಂ.ಜಿ. ಮಧ್ಯಮ ಕುಟುಂಬದ ಹೆಣ್ಣು ಮಗಳು. ತಂದೆ ಎಂ.ಸಿ.ಗಣಪತಿ ಎಲ್ಐಸಿ ಏಜೆಂಟ್, ತಾಯಿ ಗೃಹಿಣಿ ಎಂ.ಎಸ್.ಗಂಗಮ್ಮ. 'ನಾವು ಈಗಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ . ಪೂರ್ಣ ಅಂಕ ಪಡೆದರೆ ಸ್ವಂತ ಮನೆ ಸಿಗುತ್ತದೆಂಬ ಆಸೆಯಲ್ಲಿ ಓದಿದೆ, ಗುರಿ ತಲುಪಿದೆ' ಎಂದಳು ಏಕತಾ.
ಪ್ರಾಥಮಿಕ ಶಿಕ್ಷಣವನ್ನು ಐಸಿಎಸ್ ಪಠ್ಯಕ್ರಮದಲ್ಲಿ ಪ್ರಿನ್ಸಿ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದೆ. ಆದರೆ, ಶಾಲೆ ಶುಲ್ಕ ಪಾವತಿಸಲು ಹಣವಿಲ್ಲದಿದ್ದರಿಂದ ಸರ್ಕಾರಿ ಶಾಲೆಗೆ ಸೇರಬೇಕಾಯಿತು. ಸರ್ಕಾರಿ ಶಾಲೆ ಬಗ್ಗೆ ತಪ್ಪು ಕಲ್ಪನೆಗಳಿದ್ದವು. ಸರ್ಕಾರಿ ಶಾಲೆ ಶಿಕ್ಷಕರ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸ್ಮರಿಸಿದಳು.
ನಮ್ಮ ಶಾಲೆಯ ಶಿಕ್ಷಕರು ಉತ್ತಮ ಪ್ರೋತ್ಸಾ ನೀಡಿದರು. ಅವರ ಸಹಕಾರವಿಲ್ಲದಿದ್ದರೆ 625 ಅಂಕ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಟ್ಯೂಷನ್ಗೆ ಹೋಗದೇ ಪೂರ್ಣ ಅಂಕ ಬಂದಿದೆ. ನಿರಂತರ ಓದು, ವಿಷಯ ಪೂರ್ಣ ಅರ್ಥವಾಗುವ ತನಕ ಅಧ್ಯಯನ ಮಾಡಿದೆ. ಆನ್ಲೈನ್ ಪಾಠವೂ ವರವಾಯಿತು. ಭಾರತೀಯ ಸೇನೆ ಅಥವಾ ಎಂಜಿನಿಯರ್ ಆಗಿ ದೇಶಕ್ಕೆ ಸೇವೆ ಸಲ್ಲಿಸುವ ಗುರಿಯಿರುವುದಾಗಿ ಏಕತಾ ತಿಳಿಸಿದಳು.
ಏಕತಾ ಚಿನ್ನದಂತ ಹುಡುಗಿ: ತಮ್ಮ ಶಾಲೆಯ ವಿದ್ಯಾರ್ಥಿನಿ ಪೂರ್ಣ ಅಂಕ ಪಡೆದಿರುವುದಕ್ಕೆ ಅತ್ಯಂತ ಸಂಭ್ರಮ ವ್ಯಕ್ತಪಡಿಸಿದ ಇಂಗ್ಲಿಷ್ ಶಿಕ್ಷಕಿ ಆರ್.ಲಕ್ಷ್ಮೀ, ಭೌತಶಾಸ್ತ್ರ ಶಿಕ್ಷಕಿ ಶಶಿರೇಖಾ, ಸಮಾಜ ವಿಜ್ಞಾನ ಶಿಕ್ಷಕಿ ಶಿಲ್ಪಾಶ್ರೀ ಚಿನ್ನದಂತ ಹುಡುಗಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎನ್ಸಿಆರ್ಟಿ ಪಠ್ಯಕ್ರಮದಲ್ಲಿ ನಡೆದ ಮೊದಲ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದಿರುವುದು ಸಾಧನೆ ಎಂದು ಪ್ರಶಂಸಿಸಿದ್ದಾರೆ.
ಬೇರೆ ಮಕ್ಕಳು 625 ಅಂಕ ಪಡೆದಾಗ ಖುಷಿ ಅನಿಸುತ್ತಿತ್ತು. ಈಗ ನನ್ನ ಮಗಳು 625 ಅಂಕ ಪಡೆದಿದ್ದಾಳೆ. ಯಾವ ಆಸ್ತಿ ಮಾಡಲು ಸಾಧ್ಯವಿಲ್ಲ. ಅವಳನ್ನು ಚೆನ್ನಾಗಿ ಓದಿಸುವುದೇ ನನ್ನ ಗುರಿ. ಮಗಳೇ ನನ್ನ ಆಸ್ತಿ. ಫಲಿತಾಂಶ ಕೇಳಿದಾಗ ಕಣ್ಣೀರು ಬಂದಿತು. ಹೆಮ್ಮೆ ಅನಿಸಿತು.
-ಗಣಪತಿ ಎಂ.ಸಿ., ಏಕತಾ, ತಂದೆ.