'‘ಭ್ರಷ್ಟ ಬಿಬಿಎಂಪಿ ಅಲ್ಲ, ಭ್ರಷ್ಟ ಬಿಜೆಪಿ ಎನ್ನಿ'’: ಮೋಹನ್ ದಾಸ್ ಪೈಗೆ ಕುಮರಸ್ವಾಮಿ ಸಲಹೆ
ಬೆಂಗಳೂರು, ಮೇ 20: ಉದ್ಯಮಿ ಮೋಹನ್ ದಾಸ್ ಪೈ ಅವರು ಪ್ರಧಾನಿಗೆ ‘ಸೇವ್ ಬೆಂಗಳೂರು’ ಅಂತ ಟ್ವೀಟ್ ಮಾಡಿದ್ದಾರೆ. ಭ್ರಷ್ಟಾಚಾರ ಬಿಬಿಎಂಪಿ ಅಂತ ಟ್ವೀಟ್ ಮಾಡಿ ಸೇವ್ ಬೆಂಗಳೂರು (ಬೆಂಗಳೂರು ರಕ್ಷಿಸಿ) ಎಂದು ಹೇಳಿದ್ದಾರೆ. ಮೋಹನ್ ದಾಸ್ ಪೈ ಅವರು ಕರೆಪ್ಟ್ ಬಿಬಿಎಂಪಿ(ಭ್ರಷ್ಟ ಬಿಬಿಎಂಪಿ) ಅಂತ ಹೇಳಬೇಡಿ. ಕರೆಪ್ಟ್ ಬಿಜೆಪಿ(ಭ್ರಷ್ಟ ಬಿಜೆಪಿ) ಅಂತ ಹೇಳಿ ಎಂದು ಮಾಜಿ ಸಿಎಂ ಎಚ್.ಡಿ.ಕುಮರಸ್ವಾಮಿ ಸಲಹೆ ನೀಡಿದ್ದಾರೆ.
ಶುಕ್ರವಾರ ದಾಸರಹಳ್ಳಿ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಆಡಳಿತ ಮಾಡುತ್ತಿರೋದು ಬಿಜೆಪಿ ಸರಕಾರ. ಬೆಂಗಳೂರು ಉಸ್ತುವಾರಿ ಸ್ವತಃ ಮುಖ್ಯಮಂತ್ರಿ ಇದ್ದಾರೆ. ಬೆಂಗಳೂರು ಮಂತ್ರಿಗಳು ಲೂಟಿ ಮಾಡಿದ್ದಾರೆ. ಲೂಟಿ ಮಾಡಿದ ಮಂತ್ರಿಗಳ ಕ್ಷೇತ್ರದಲ್ಲಿ ಪ್ರದಕ್ಷಿಣೆ ಮಾಡ್ತೀರಾ. ಲೂಟಿ ಮಾಡಿರೋದು ಸತ್ಯ ಹೇಳ್ತಾರ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಕಾಲದಲ್ಲಿ ಹೆಚ್ಚು ಅನುದಾನ ಕೊಟ್ಟಿದ್ದೇನೆ ಅಂತಾರೆ. ಆ ಅನುದಾನದಲ್ಲಿ ಎಷ್ಟು ಜನರ ಸಮಸ್ಯೆ ಸರಿ ಆಯಿತು, ಎಷ್ಟು ಲೂಟಿ ಆಯ್ತು, ಅವರ ಐದು ವರ್ಷದ ಅವಧಿಯಲ್ಲಿ ಏನು ಆಗಿದೆ ಎಂದು ಸಿದ್ದರಾಮಯ್ಯ ಹೇಳಲಿ ಎಂದು ಸವಾಲು ಹಾಕಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದರೆ ಇವತ್ತು ಯಾಕೆ ಈ ಸಮಸ್ಯೆ ಆಗುತಿತ್ತು ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಕಾಲದಲ್ಲಿ ಯಾರು, ಯಾರು ಎಷ್ಟು ಹಣ ನುಂಗಿದ್ದಾರೆ ಪಟ್ಟಿ ಕೊಡಲಾ? ಕಾಂಗ್ರೆಸ್ ಅವಧಿಯಲ್ಲಿ ಕಾಂಗ್ರೆಸ್ನ ಮಂತ್ರಿಗಳು ಎಷ್ಟು ಲೂಟಿ ಮಾಡಿದ್ದೀರಾ ಗೊತ್ತಿದೆ. ಹೌದು ನಾನು ಕೆಲಸ ಮಾಡಿಲ್ಲ. ನಿಮ್ಮ ತರಹ ಲೂಟಿಯೂ ಮಾಡಿಲ್ಲ. ನನ್ನನ್ನು ಹೆಸರಿಗೆ ಸಿಎಂ ಮಾಡಿದ್ರಿ. ನನಗೆ ಒಂದೇ ಒಂದು ವರ್ಗಾವಣೆ ಮಾಡಲು ಬಿಡಲಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.
ಬೆಂಗಳೂರಿನ ಸಂಬಂಧ ಒಂದೇ ಒಂದು ಸಭೆ ಮಾಡಲು ಬಿಡಲಿಲ್ಲ. ಡಿಸಿಎಂ ಆಗಿದ್ದ ಪರಮೇಶ್ವರ್ ಅವರನ್ನು ಕೇಳಿ. ಇದಕ್ಕೆ ಕಾರಣ ಸಿದ್ದರಾಮಯ್ಯ. ನನ್ನ ಬಗ್ಗೆ ಸಿದ್ದರಾಮಯ್ಯ ಮಾತಾಡೋದು ಬೇಡ. ನಾನು ಸಿದ್ದರಾಮಯ್ಯಗೆ ಒಪನ್ ಚಾಲೆಂಜ್(ಬಹಿರಂಗ ಸವಾಲು) ಮಾಡುತ್ತೇನೆ. ಬನ್ನಿ ಚರ್ಚೆ ಮಾಡೋಣ. ಯಾರ ಕಾಲದಲ್ಲಿ ಏನೇನು ಆಗಿದೆ ಚರ್ಚೆಗೆ ನಾನು ಸಿದ್ಧ ಎಂದು ಕುಮಾರಸ್ವಾಮಿ ಸವಾಲ್ ಹಾಕಿದರು.
ದಾಸರಹಳ್ಳಿ ಕ್ಷೇತ್ರದಲ್ಲಿ ಇವತ್ತು ಪ್ರದಕ್ಷಿಣೆ ಹಾಕಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ದಾಸರಹಳ್ಳಿ ಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ 780 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದೆ. ಆಮೇಲೆ ಬಿಜೆಪಿ ಸರಕಾರ ಅದನ್ನು ತಡೆ ಹಿಡಿದಿದೆ. ರಾಜಕಾಲುವೆಗೆ 130 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೆ. ಅದನ್ನು ಬಿಡುಗಡೆ ಮಾಡಿಲ್ಲ ಎಂದು ಅವರು ಆರೋಪಿಸಿದರು.
ಚಿಕ್ಕಬಾಣವಾರ ಕೆರೆ 102 ಎಕರೆ ಇದೆ. ಈ ಕೆರೆಗೆ ತ್ಯಾಜ್ಯ ನೀರು ಸೇರುತ್ತಿದೆ. ಕೆರೆ ಪಕ್ಕದಲ್ಲಿ ಮಾಜಿ ಶಾಸಕರು ಹಣ ಪಡೆದು ಅಪಾರ್ಟ್ಮೆಂಟ್ ಕಟ್ಟಿಸಲು ಅನುಮತಿ ಕೊಟ್ಟಿದ್ದಾರೆ. ಈ ಅಪಾರ್ಟ್ಮೆಂಟ್ನಿಂದ ತ್ಯಾಜ್ಯ ನೀರು ಬರುತ್ತಿದೆ. ನಾನು ಕೆರೆ ಅಭಿವೃದ್ಧಿಗೆ ಕೊಟ್ಟ ಹಣವೂ ಬಿಡುಗಡೆ ಮಾಡಿಲ್ಲ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಇಂತಹ ಕೆರೆಗಳನ್ನು ಮುಚ್ಚಿಕೊಂಡು ಬರುತ್ತಿದ್ದೀರಾ, ಕಾಂಗ್ರೆಸ್ ಅವರು ಮೇಕೆದಾಟು ಅಂತ ಬಾಯಿ ಬಡಿದುಕೊಳ್ಳಬೇಡಿ, ಹೀಗೆ ಕೆರೆ ಮುಚ್ಚಿಕೊಂಡು ಬಂದು ಪಾದಯಾತ್ರೆ ಅಂದರೆ ಏನು ಪ್ರಯೋಜನ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದಾವೋಸ್ ಶೃಂಗಸಭೆಗೆ ಹೋಗಿ ಹೇಗೆ ಹೂಡಿಕೆದಾರರನ್ನು ಕರೆಯುತ್ತೀರಾ. ಇಷ್ಟು ಸಮಸ್ಯೆ ಇದ್ದರೆ ಹೂಡಿಕೆದಾರರು ಬರ್ತಾರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ಶಾಸಕ ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ. ಎ.ಶರವಣ ಮುಂತಾದವರು ಜತೆಯಲ್ಲಿದ್ದರು.