"ಉಮರ್ ಖಾಲಿದ್ ಭಾಷಣ ಉಗ್ರ ಕೃತ್ಯವೆನಿಸದು": ದಿಲ್ಲಿ ಹೈಕೋರ್ಟ್ ಅಭಿಪ್ರಾಯ
ಹೊಸದಿಲ್ಲಿ,ಮೇ 31: ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಅವರು ಫೆಬ್ರವರಿ,2020ರಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಮಾಡಿದ್ದ ಭಾಷಣ 'ಕೆಟ್ಟ ಅಭಿರುಚಿ'ಯಿಂದ ಕೂಡಿತ್ತು ನಿಜ,ಆದರೆ ಅದು ಅವರ ಭಾಷಣವನ್ನು ಭಯೋತ್ಪಾದಕ ಕೃತ್ಯವನ್ನಾಗಿಸುವುದಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಖಾಲಿದ್ ಭಾಷಣವು ಫೆಬ್ರವರಿ,2020ರಲ್ಲಿ ದಿಲ್ಲಿಯಲ್ಲಿ ದಂಗೆಗಳನ್ನು ಪ್ರಚೋದಿಸಲು ಪಿತೂರಿಯ ಭಾಗವಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
2020 ಫೆಬ್ರವರಿ 23ರಿಂದ 29ರ ನಡುವೆ ಈಶಾನ್ಯ ದಿಲ್ಲಿಯಲ್ಲಿ ಸಿಎಎ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಭುಗಿಲೆದ್ದಿದ್ದ ಘರ್ಷಣೆಗಳಲ್ಲಿ ಹೆಚ್ಚಿನವರು ಮುಸ್ಲಿಮರು ಸೇರಿದಂತೆ 53 ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು. ದಂಗೆ ಪ್ರಕರಣದಲ್ಲಿ ಖಾಲಿದ್ ರನ್ನು 2020,ಸೆ.14ರಂದು ಬಂಧಿಸಲಾಗಿದ್ದು, ದಂಗೆಗಳಿಗೆ ಕುಮ್ಮಕ್ಕು ನೀಡಲು ಸಂಚು ರೂಪಿಸಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
ತನಗೆ ಜಾಮೀನು ನಿರಾಕರಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಖಾಲಿದ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರ ಪೀಠವು ಸೋಮವಾರ ಕೈಗೆತ್ತಿಕೊಂಡಿತ್ತು.
ಖಾಲಿದ್ ಭಾಷಣವು ಆಕ್ಷೇಪಾರ್ಹವಾಗಿತ್ತು ಮತ್ತು ಕೀಳು ಅಭಿರುಚಿಯಿಂದ ಕೂಡಿತ್ತು. ಅದು ಮಾನನಷ್ಟ,ಇತರ ಅಪರಾಧಗಳಿಗೆ ಸಮವಾಗಬಹುದು, ಆದರೆ ಅದು ಭಯೋತ್ಪಾದಕ ಚಟುವಟಿಕೆಯಾಗುವುದಿಲ್ಲ ಎಂದು ನ್ಯಾ.ಮೃದುಲ್ ಹೇಳಿದರು.
ಪ್ರಕರಣದ ಮುಂದಿನ ವಿಚಾರಣೆಯು ಜು.5ರಂದು ನಡೆಯಲಿದೆ.