ಬಹಳಷ್ಟು ಸ್ನೇಹಿತರು ಎಲ್ಲಾ ಪಕ್ಷದಲ್ಲೂ ಇದ್ದಾರೆ, ಮೇಲ್ನೋಟದ ಲೆಕ್ಕಾಚಾರದಲ್ಲೆ ನಾವು ಗೆಲ್ತೇವೆ: ಸಿಎಂ ಬೊಮ್ಮಾಯಿ
ರಾಜ್ಯಸಭೆ ಚುನಾವಣೆ
ಉಡುಪಿ: ಶೀಘ್ರವೇ ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಮೇಲ್ನೋಟದ ಲೆಕ್ಕಾಚಾರದಲ್ಲೇ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕರಾವಳಿ ಜಿಲ್ಲೆಗಳ ಪ್ರವಾಸಕ್ಕಾಗಿ ಇಂದು ರಾತ್ರಿ ಮಣಿಪಾಲಕ್ಕೆ ಆಗಮಿಸಿದ ಅವರು ಮಾಧ್ಯಮದ ಜತೆ ಮಾತನಾಡುತ್ತಾ ಈ ವಿಶ್ವಾಸ ವ್ಯಕ್ತಪಡಿಸಿದರು. ನಮಗೆ ಸರಳ ಬಹುಮತ ಬರಲಿದೆ. ಎರಡನೇ ಪ್ರಾಶಸ್ತ್ಯದ ಮತಗಳಲ್ಲಿ ನಾವು ಗೆಲ್ಲುತ್ತೇವೆ. ನಮಗೆ ಮತಗಳ ಕೊರತೆಯಾಗುವುದಿಲ್ಲ ಎಂದರು.
ಮುಂದೆ ಚುನಾವಣೆ ನಡೆಯಲಿದೆ. ಏನೇನು ಬೆಳೆವಣಿಗೆಯಾಗುತ್ತದೆ ಎಂಬುದನ್ನು ಕಾದು ನೋಡೋಣ. ಎಲ್ಲಾ ಕಡೆಗಳಲ್ಲಿ ಬಹಳಷ್ಟು ಸ್ನೇಹಿತರಿದ್ದಾರೆ. ನಮಗೆ ಜೆಡಿಎಸ್ ಮತ್ತು ಕಾಂಗ್ರೆಸ್ನಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ಈವರೆಗೆ ನಾವು ಯಾರ ಜೊತೆಗೂ ಮಾತುಕತೆ ನಡೆಸಿಲ್ಲ. ನಾಮಪತ್ರ ಸಲ್ಲಿಕೆ ಮಾಡಿ ನೇರವಾಗಿ ಉಡುಪಿಗೆ ಬಂದಿದ್ದೇನೆ. ಈವರೆಗೆ ಇನ್ನು ಮಾತುಕತೆ ಆಗಿಲ್ಲ ಎಂದರು.
ಪಠ್ಯಪುಸ್ತಕ ಪೂರೈಕೆಗೆ ಆದೇಶ: ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ಬಗ್ಗೆ ನಾನು ಇವತ್ತು ಆದೇಶ ಮಾಡಿದ್ದೇನೆ. ಕೂಡಲೇ ಪಠ್ಯಪುಸ್ತಕ ವಿತರಿಸುವ ಕೆಲಸ ನಡೆಯಲಿದೆ ಎಂದರು. ಲವ್ ಜಿಹಾದ್ ಕುರಿತ ಪ್ರಶ್ನೆಗೆ, ಅದನ್ನು ಗೃಹ ಇಲಾಖೆ ನೋಡಿಕೊಳ್ಳುತ್ತದೆ ಎಂದು ಉತ್ತರಿಸಿದರು.