ಮೀಸಲಾತಿ ಕಾನೂನಿಗೆ ಮಾಡಿದ ದ್ರೋಹ: ಸೀತಾರಾಮ ಕೊಂಚಾಡಿ
ಎಸ್ಸಿ ನಕಲಿ ಪ್ರಮಾಣಪತ್ರ ಖಂಡಿಸಿ ಪ್ರತಿಭಟನಾ ಜಾಥ
ಉಡುಪಿ : ಮೀನುಗಾರರಿಗೆ ಪರಿಶಿಷ್ಟ ಜಾತಿಯ ನಕಲಿ ಮೊಗೇರ ಪ್ರಮಾಣಪತ್ರ ನೀಡುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಹಾಗೂ ಮುಗ್ಗೇರ ಮತ್ತು ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನಾ ಜಾಥ ಹಾಗೂ ಬಹಿರಂಗ ಸಭೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನಾ ಜಾಥಕ್ಕೆ ಮುಗ್ಗೇರ ಸಂಘಟನೆಯ ಜಿಲ್ಲಾಧ್ಯಕ್ಷ ಅಪ್ಪು ಮರ್ಣೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಜಾಥವು ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ, ತಾಲೂಕು ಕಚೇರಿ ಮುಂದೆ ಸಮಾಪ್ತಿಗೊಂಡಿತು.
ಬಳಿಕ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಮುಗ್ಗೇರ ಸಂಘಟನೆ ಉಪಾಧ್ಯಕ್ಷ ಸೀತಾರಾಮ ಕೊಂಚಾಡಿ, ಅವಿಭಜಿತ ದ.ಕ. ಜಿಲ್ಲೆಯ ಮುಗೇರರು ೧೯೫೬ರಿಂದ ಮೀಸಲಾತಿ ಸೌಲಭ್ಯವನ್ನು ಪಡೆದು ತಮ್ಮದೇ ಬದುಕನ್ನು ಕಟ್ಟಿಕೊಂಡು, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದು ವರೆದಿದ್ದರು.
ಇವರು ಬೇರೆ ಜಿಲ್ಲೆಗೆ ವಲಸೆ ಹೋದಲ್ಲಿ ಅಲ್ಲಿಯೂ ಮೀಸಲಾತಿ ಸೌಲಭ್ಯವನ್ನು ಪಡೆಯುವ ಉದ್ದೇಶದಿಂದ ಕೇಂದ್ರ ಸರಕಾರ ೧೯೭೬ರಲ್ಲಿ ಕ್ಷೇತ್ರ ನಿರ್ಬಂಧನೆಯನ್ನು ರದ್ದುಪಡಿಸಿತು ಎಂದು ತಿಳಿಸಿದರು.
ಇದರ ದುರ್ಲಾಭವನ್ನು ಪಡೆದು ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ಸುಳ್ಳು ದಾಖಲೆಯನ್ನು ನೀಡಿ ಸರಕಾರವನ್ನು ದಿಕ್ಕು ತಪ್ಪಿಸಿ ಎಸ್ಸಿ ಪ್ರಮಾಣಪತ್ರವನ್ನು ಪಡೆದುಕೊಂಡರು. ಅಲ್ಲಿಂದ ಈ ವ್ಯಾದಿ ಇಡೀ ಉ.ಕ. ಜಿಲ್ಲೆಗೆ ಹಬ್ಬಿ ಪರಿಶಿಷ್ಟರ ಎಲ್ಲ ಸೌಲಭ್ಯವನ್ನು ಕಬಳಿಸಿಕೊಳ್ಳಲಾಯಿತು. ಇದು ಕಳೆದ ೩೫ವರ್ಷಗಳಲ್ಲಿ ಸಂವಿಧಾನ ಮತ್ತು ದೇಶದ ಮೀಸಲಾತಿ ಕಾನೂನಿಗೆ ಮಾಡಿದ ದ್ರೋಹ ಮತ್ತು ಅಕ್ಷಮ್ಯ ಅಪರಾಧ ಕೃತ್ಯ ಎಂದು ಅವರು ದೂರಿದರು.
ಮುಗ್ಗೇರ ಸಂಘಟನೆ ಮುಖಂಡ ಗುರುಚರಣ್ ಪೊಲಿಪು ಮಾತನಾಡಿ, ನಕಲಿ ಪ್ರಮಾಣ ಪತ್ರ ನೀಡುವ ಗ್ರಾಮ ಲೆಕ್ಕಿಗ, ತಹಶೀಲ್ದಾರ್ರನ್ನು ನೇರ ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ಮೊಗೇರರಲ್ಲದ ಮೀನುಗಾರರಿಗೆ ಪ್ರಮಾಣಪತ್ರವನ್ನು ನೀಡುವುದನ್ನು ಆದಷ್ಟು ಬೇಗ ರದ್ದುಗೊಳಿಸಬೇಕು. ಈ ಮೀಸಲಾತಿಯಿಂದ ಪಡೆದ ಸೌಲಭ್ಯಗಳನ್ನು ವಾಪಾಸ್ಸು ಪಡೆದು, ಅಧಿಕಾರಿದಲ್ಲಿರುವ ಅಧಿಕಾರಿಗಳನ್ನು ವಜಾಗೊಳಿಸಬೇಕು. ಆ ಮೂಲಕ ನಿಜವಾದ ದಲಿತರಿಗೆ ಮಾತ್ರ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಮುಗ್ಗೇರ ಸಂಘಟನೆಯ ಮುಖಂಡರಾದ ಅಶೋಕ್ ಇರು ವತ್ತೂರು, ಶಿವಾನಂದ ಪಡುಬಿದ್ರೆ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ಉಪ್ಪೂರು, ಮುಖಂಡರಾದ ಶಿವಾನಂದ ಮೂಡಬೆಟ್ಟು, ಅಣ್ಣಪ್ಪ ನಕ್ರೆ, ಮಂಜುನಾಥ್ ಬಾಳ್ಕುದ್ರು, ವಿಠಲ ಉಚ್ಚಿಲ, ಶಂಕರ್ದಾಸ್ ಚೇಂಡ್ಕಳ, ವಸಂತಿ ಕಲ್ಲೆಟ್ಟೊ, ಸುಶೀಲಾ ಮಾಧವ ಉಚ್ಚಿಲ, ಸುನಿತಾ ಕುಕ್ಕುಂದೂರು, ವಿಠಲ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು.
ನಕಲಿ ಪ್ರಮಾಣಪತ್ರ ರದ್ಧತಿಗೆ ಮನವಿ
ಪ್ರತಿಭಟನೆಯ ಬಳಿಕ ಈ ಕುರಿತು ಮನವಿಯನ್ನು ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗೆ ಸಲ್ಲಿಸಲಾಯಿತು. ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದುವರೆದ ಮೀನುಗಾರ(ಮೊಗವೀರ)ರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವುದಕ್ಕೆ ಕೂಡಲೇ ತಡೆಯಾಜ್ಞೆ ನೀಡಬೇಕು. ಈಗಾಗಲೇ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಸಮುದಾಯದವರು ಪಡೆದಿರುವ ಪರಿಶಿಷ್ಟ ಜಾತಿಯ ನಕಲಿ ಮೊಗೇರ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಬೇಕು.
ಅದೇ ರೀತಿ ಅಸ್ಪಶ್ಯರಲ್ಲದ ಬೋವಿ ಜನಾಂಗಕ್ಕೆ ನೀಡಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ಕೂಡ ರದ್ದುಗೊಳಿಸಬೇಕು. ನಕಲಿ ಜಾತಿ ಪ್ರಮಾಣಪತ್ರ ದಿಂದ ಪಡೆದುಕೊಂಡಿರುವ ಎಲ್ಲ ಸೌಲಭ್ಯಗಳನ್ನು ಹಿಂಪಡೆದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
‘ದಲಿತರಿಂದ ಮೀಸಲಾತಿ ಕಸಿದು ಕೊಳ್ಳುವ ಕಾರ್ಯ ನಡೆಯುತ್ತಿದೆ. ಎಸ್ಸಿ ಜಾತಿ ಪ್ರಮಾಣಪತ್ರ ಪಡೆದು ಕೊಳ್ಳುವವರಿಗಿಂತಲೂ ಅದನ್ನು ನೀಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಅದನ್ನು ತಡೆಯಲು ಸಾಧ್ಯವಾಗುತ್ತದೆ’
-ಅಶೋಕ್ ಕೊಂಚಾಡಿ, ಮುಗ್ಗೇರ ಸಂಘಟನೆ ಮುಖಂಡರು