ಪ್ರವಾದಿ ವಿರುದ್ಧ ಹೇಳಿಕೆ : ಮಹಾರಾಷ್ಟ್ರ ಪೊಲೀಸರಿಂದ ನೂಪುರ್ ಶರ್ಮಾಗೆ ಸಮನ್ಸ್
ಮುಂಬೈ: ಪ್ರವಾದಿ ಮುಹಮ್ಮದ್ ವಿರುದ್ಧ ನೀಡಿರುವ ನಿಂದನಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳಲು ಜೂನ್ 22ರಂದು ಹಾಜರಾಗುವಂತೆ ಮಹಾರಾಷ್ಟ್ರ ಪೊಲೀಸರು ಉಚ್ಛಾಟಿತ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರಿಗೆ ಸೂಚಿಸಿದ್ದಾರೆ.
ಆಕೆಯ ವಿರುದ್ಧ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದರಿಂದ ಆಕೆ ಆ ಠಾಣೆಗೆ ಹಾಜರಾಗಬೇಕಿದೆ. ನೂಪುರ್ ಶರ್ಮ ಅವರ ಹೇಳಿಕೆಗೆ ಗಲ್ಫ್ ರಾಷ್ಟ್ರಗಳಿಂದ ಭಾರೀ ವಿರೋಧ ವ್ಯಕ್ತವಾಗಿ ಬಿಜೆಪಿಗೆ ಮಾತ್ರವಲ್ಲದೇ ಭಾರತಕ್ಕೆ ಮುಜುಗರ ಸೃಷ್ಟಿಯಾಗಿದೆ.
ಈ ನಡುವೆ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ನೂಪರ್ ಶರ್ಮ ಅವರು ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಆಕೆ ಮತ್ತಾಕೆಯ ಕುಟುಂಬಕ್ಕೆ ದಿಲ್ಲಿ ಪೊಲೀಸರು ರಕ್ಷಣೆ ಒದಗಿಸಿದ್ದಾರೆ.
ಕಾನ್ಪುರ್ನಲ್ಲಿ ಆಕೆಯ ಹೇಳಿಕೆಯ ವಿರುದ್ಧ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಪೊಲೀಸರು ಒಟ್ಟು 1000 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಈ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾದ ಎಲ್ಲಾ 55 ಮಂದಿ ಮುಸ್ಲಿಂ ಸಮುದಾಯದವರಾಗಿದ್ದಾರೆ.