ಕೊಂಕಣ ರೈಲು ಮಾರ್ಗದ ಶೇ.100 ವಿದ್ಯುದ್ದೀಕರಣ; ಉಡುಪಿ, ಮಡಗಾಂವ್, ರತ್ನಗಿರಿಯಲ್ಲಿ ರೈಲಿಗೆ ಹಸಿರು ನಿಶಾನೆ
ಉಡುಪಿ, ಜೂ.20: ಶೇ.100ರಷ್ಟು ವಿದ್ಯುದ್ದೀಕರಣಗೊಂಡ ಮಹಾರಾಷ್ಟ್ರದ ರೋಹಾ ಹಾಗೂ ಮಂಗಳೂರಿನ ತೋಕೂರು ನಡುವಿನ 740ಕಿ.ಮೀ. ಉದ್ದದ ಕೊಂಕಣ ರೈಲು ಮಾರ್ಗದಲ್ಲಿ ವಿದ್ಯುತ್ ರೈಲಿನ ಸಂಚಾರಕ್ಕೆ ಉಡುಪಿ, ಗೋವಾದ ಮಡಗಾಂವ್ ಹಾಗೂ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ ಶೇ.೧೦೦ ವಿದ್ಯುದ್ದೀಕರಣಗೊಂಡ ಮಾರ್ಗಕ್ಕೆ ಚಾಲನೆ ನೀಡುತಿದ್ದಂತೆ ಉಡುಪಿ, ಮಡಗಾಂವ್ ಹಾಗೂ ರತ್ನಗಿರಿ ಕೊಂಕಣ ರೈಲು ನಿಲ್ದಾಣಗಳಿಂದ ರೈಲುಗಳು ತಮ್ಮ ಸಂಚಾರವನ್ನು ಪ್ರಾರಂಭಿಸಿದವು.
೭೪೦ಕಿ.ಮೀ. ಉದ್ದದ ಕೊಂಕಣ ರೈಲು ಮಾರ್ಗ ಮಹಾರಾಷ್ಟ್ರ (೩೮೨ ಕಿ.ಮೀ.), ಗೋವಾ (೧೦೬ಕಿ.ಮೀ.) ಹಾಗೂ ಕರ್ನಾಟಕ (೨೫೨ಕಿ.ಮೀ.)ಗಳ ಮೂಲಕ ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ೯೭೦ಕಿ.ಮೀ. ಹಳಿಗಳಿದ್ದು, ಇವುಗಳಲ್ಲಿ ೫೧೩ ಮಹಾರಾಷ್ಟ್ರದಲ್ಲಿ, ೧೬೩ಕಿ.ಮೀ. ಗೋವಾದಲ್ಲಿ ಹಾಗೂ ೨೯೪ಕಿ.ಮೀ. ಕರ್ನಾಟಕದಲ್ಲಿವೆ.
೭೪೦ಕಿ.ಮೀ.. ಉದ್ದದ ರೈಲು ಮಾರ್ಗದ ವಿದ್ಯುದ್ದೀಕರಣಕ್ಕೆ ಒಟ್ಟು ೧,೨೮೭ ಕೋಟಿ ರೂ. ವೆಚ್ಚವಾಗಿದ್ದು, ಇದನ್ನು ಐದು ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. ತೋಕೂರಿನಿಂದ ಬಿಜೂರುವರೆಗೆ, ಬಿಜೂರಿನಿಂದ ಕಾರವಾರದವರೆಗೆ, ಕಾರವಾರದಿಂದ ತೀವಿಂವರೆಗೆ ತೀವಿಂನಿಂದ ರತ್ನಗಿರಿ ಹಾಗೂ ರತ್ನಗಿರಿಯಿಂದ ರೋಹಾದವರೆಗೆ ಕಾಮಗಾರಿ ನಡೆದು ೨೦೨೨ರ ಮಾರ್ಚ್ ಕೊನೆಯಲ್ಲಿ ಪೂರ್ಣಗೊಂಡಿತ್ತು.
ಕೊಂಕಣ ರೈಲು ಮಾರ್ಗದ ವಿದ್ಯುದ್ದೀಕರಣದಿಂದಾಗಿ ಕೊಂಕಣ ರೈಲ್ವೆಗೆ ವಾರ್ಷಿಕ ೩೦೦ಕೋಟಿ ರೂ. ಉಳಿತಾಯವಾಗಲಿದೆ. ಇದರಲ್ಲಿ ಇಂಧನ ಒಂದರಿಂದಲೇ ವರ್ಷಕ್ಕೆ ೧೮೦ ಕೋಟಿ ರೂ.ವೆಚ್ಚ ಉಳಿತಾಯ ವಾದರೆ, ಇತರ ನಿರ್ವಹಣಾ ವೆಚ್ಚವೂ ೧೨೦ ಕೋಟಿ ರೂ.ಗಳಷ್ಟು ಕಡಿಮೆಯಾಗಲಿದೆ. ರೈಲು ಹೆಚ್ಚು ವೇಗದಲ್ಲಿ ಚಲಿಸುವುದರೊಂದಿಗೆ ಪರಿಸರ, ವಾಯು ಹಾಗೂ ಶಬ್ದ ಮಾಲಿನ್ಯಗಳೂ ತೀರಾ ಕೆಳಮಟ್ಟಕ್ಕೆ ಇಳಿಯಲಿದೆ ಎಂದು ಕೊಂಕಣ ರೈಲ್ವೆಯ ಕ್ಷೇತ್ರೀಯ ರೈಲ್ವೆ ಪ್ರಬಂದಕ ಬಿ.ಬಿ.ನಿಕ್ಕಂ ತಿಳಿಸಿದ್ದಾರೆ.