ಅಗ್ನಿಪಥ್ ಪ್ರತಿಭಟನೆ ‘ಬುಲ್ಡೋಜರ್ ಪ್ರಯೋಗ’ ಸಲ್ಲ
ದೇಶದಲ್ಲಿ ಅಶಾಂತಿ ಸೃಷ್ಟಿಯಾದಾಗ ಶಾಂತಿ ಸ್ಥಾಪಿಸಲು ಸೇನೆಯ ಪ್ರವೇಶವಾಗುವುದು ಈವರೆಗೆ ನಡೆಯುತ್ತಿತ್ತು. ಆದರೆ ಸೇನೆಯ ಕಾರಣದಿಂದಲೇ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿರುವುದು ಇದೇ ಮೊದಲು. ಕಳೆದ ಎಂಟು ವರ್ಷಗಳಲ್ಲಿ ಸೇನೆ ಬೇರೆ ಬೇರೆ ವಿಷಯಗಳಿಗಾಗಿ ಸುದ್ದಿಯಲ್ಲಿತ್ತು. ಮುಖ್ಯವಾಗಿ ಮೋದಿ ನೇತೃತ್ವದ ಸರಕಾರ ಸೇನೆಯೊಳಗೆ ನಡೆಸುತ್ತಿರುವ ರಾಜಕೀಯ ಹಸ್ತಕ್ಷೇಪ ಸಾಕಷ್ಟು ಟೀಕೆ ವಿಮರ್ಶೆಗಳಿಗೆ ಕಾರಣವಾಗಿತ್ತು. ಸೇನಾ ವರಿಷ್ಠರು ಸರಕಾರದ ಮಾಧ್ಯಮ ವಕ್ತಾರರಾಗಿ ಮಾತನಾಡತೊಡಗಿದ್ದಾರೆ ಎಂಬ ಆರೋಪಗಳೂ ಈ ಅವಧಿಯಲ್ಲಿ ಕೇಳಿ ಬಂದಿದ್ದವು. ನಮ್ಮ ಸೈನಿಕರ ಮೇಲೆ ಅತಿ ಹೆಚ್ಚು ದಾಳಿಗಳು ಕಳೆದ ಎಂಟು ವರ್ಷಗಳಲ್ಲಿ ನಡೆದವು. ಗಡಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ನ್ನು ರಾಜಕೀಯಕ್ಕೆ ಬಳಸುವ ಮೂಲಕ ಸರಕಾರ ಸೇನೆಯ ಘನತೆಗೆ ಕುಂದು ಉಂಟುಮಾಡಿದೆ ಎನ್ನುವ ಆರೋಪಗಳೂ ಕೇಳಿ ಬಂದವು.
ಇದೀಗ ಸೇನೆಗೆ ಗುತ್ತಿಗೆ ರೂಪದಲ್ಲಿ ನಾಲ್ಕು ವರ್ಷಕ್ಕೆ ಸೈನಿಕರ ನೇಮಕಾತಿ ತೀವ್ರ ವಿವಾದವನ್ನು ಸೃಷ್ಟಿಸಿದೆ. ಬಾಲ್ಯದಿಂದಲೇ ಸೇನೆ ಸೇರುವ ಕನಸು ಕಂಡ ತರುಣರಿಗೆ ಈ ಗುತ್ತಿಗೆ ನೇಮಕ ತೀವ್ರ ಆಘಾತವನ್ನುಂಟು ಮಾಡಿದೆ. ಒಂದೆಡೆ ಸೇನೆ ಸೇರುವ ಕನಸು, ಇನ್ನೊಂದೆಡೆ ಉದ್ಯೋಗ- ಇವೆರಡನ್ನು ‘ಅಗ್ನಿಪಥ್’ ಯೋಜನೆ ಛಿದ್ರಗೊಳಿಸಿದೆ ಎನ್ನುವುದು ಯುವಕರ ಆರೋಪವಾಗಿದೆ. ಸೇನಾ ವೃತ್ತಿಯನ್ನು ಉತ್ತರ ಭಾರತದ ಯುವಕರು ಅದೆಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಅಗ್ನಿಪಥ್ ವಿರುದ್ಧ ಅಲ್ಲಿ ನಡೆಯುತ್ತಿರುವ ಪ್ರತಿಭಟನೆಗಳೇ ಸಾಕ್ಷಿ. ಬಹುಶಃ ಇಷ್ಟು ತೀವ್ರವಾದ, ಹಿಂಸಾರೂಪದ ಪ್ರತಿಭಟನೆ ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ನಡೆಯುತ್ತಿರುವುದು. ಸಿಎಎ ವಿರುದ್ಧದ ಪ್ರತಿಭಟನೆ ಕೂಡ ಇಷ್ಟು ತೀವ್ರತೆಯನ್ನು ತಲುಪಿರಲಿಲ್ಲ. ನೂರಾರು ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಭಾರೀ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟಾಗಿದೆ. 500 ಕೋಟಿ ರೂಪಾಯಿಗೂ ಅಧಿಕ ನಾಶ, ನಷ್ಟವುಂಟಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆಗೆ ಮಣಿಯುವುದಿಲ್ಲ ಎಂದು ಸರಕಾರವೂ ಹಠ ಹಿಡಿದು ಕೂತಿದೆ. ಈ ಹಿಂದೆ ರೈತರ ಪ್ರತಿಭಟನೆಗೂ ಸರಕಾರ ಇದೇ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿತ್ತು. ಆದರೆ ರೈತರು ಅಹಿಂಸಾ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ಇಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಯುವಕರು. ಈ ಪ್ರತಿಭಟನೆಗೆ ಸೂಕ್ತ ಮಾರ್ಗದರ್ಶನವೂ ಇಲ್ಲ. ಒಳಗಿನ ಹತಾಶೆ ಮತ್ತು ಆಕ್ರೋಶವೇ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವುದರಿಂದ, ಸಹಜವಾಗಿಯೇ ಅದು ಹಿಂಸಾರೂಪವನ್ನು ತಾಳಿದೆ. ಪ್ರತಿಭಟನಾಕಾರರನ್ನು ಸಮಾಧಾನಿಸುವ ಪ್ರಯತ್ನದ ಬದಲು, ಸರಕಾರ ಬೆದರಿಸಿ ಅವರನ್ನು ಬಾಯಿಮುಚ್ಚಿಸಲು ಹೊರಟಿದೆ. ಇದು ಪ್ರತಿಭಟನೆಯನ್ನು ಇನ್ನಷ್ಟು ಹಿಂಸಾಗ್ರಸ್ತವನ್ನಾಗಿಸಬಹುದು.
ಈಗಾಗಲೇ ಅಗ್ನಿಪಥ್ಯೋಜನೆಯಿಂದ ಗಾಯಗೊಂಡ ಹುಲಿಗಳಂತಾಡುತ್ತಿರುವ ಯುವಕರನ್ನು ಇನ್ನಷ್ಟು ಹತಾಶೆಗೆ ತಳ್ಳಿದಂತಾಗಬಹುದು. ಪ್ರತಿಭಟನೆ ಕಾವು ಪಡೆಯುತ್ತಿದ್ದಂತೆಯೇ ಉತ್ತರ ಪ್ರದೇಶದಲ್ಲಿ ಪೊಲೀಸರು ತಮ್ಮ ಪಥಸಂಚಲನದಲ್ಲಿ ಬುಲ್ಡೋಜರ್ನ್ನು ಪ್ರದರ್ಶಿಸಿ, ಪ್ರತಿಭಟನಾಕಾರರನ್ನು ಬೆದರಿಸುತ್ತಿದ್ದಾರೆ. ಕೆಲವರು ‘ಈ ಪ್ರತಿಭಟನಾಕಾರರ ವಿರುದ್ಧ’ ‘ಬುಲ್ಡೋಜರ್ ಪ್ರಯೋಗ’ ಯಾಕಿಲ್ಲ? ಎಂದು ಕೇಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪ್ರವಾದಿ ನಿಂದನೆ ವಿರುದ್ಧ ಪ್ರತಿಭಟನೆ ನಡೆದು ಹಿಂಸಾರೂಪ ಪಡೆದಾಗ ಅದರ ನೇತೃತ್ವವನ್ನು ವಹಿಸಿದ ಆರೋಪದಲ್ಲಿ ಕೆಲವು ಪ್ರತಿಭಟನಾಕಾರರ ನಿವಾಸಗಳನ್ನು ಬುಲ್ಡೋಜರ್ನಿಂದ ಕೆಡವಲಾಗಿತ್ತು. ಇದೀಗ ಅಂದು ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರಕ್ಕಿಂತ ನೂರು ಪಟ್ಟ್ಟು ಹಿಂಸಾಚಾರಗಳು ನಡೆದಿವೆ. ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗಿವೆ. ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ‘ಈಗ ಸರಕಾರದ ಬುಲ್ಡೋಜರ್ ಯಾಕೆ ಮಾತನಾಡುತ್ತಿಲ್ಲ?’ ಎಂದು ಕೆಲವರು ಪ್ರಶ್ನಿಸತೊಡಗಿದ್ದಾರೆ.
ಈ ಪ್ರಶ್ನೆಗಳು ಹುಟ್ಟುವುದಕ್ಕೆ ಕಾರಣಗಳಿವೆ. ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡಿದರು ಎನ್ನುವ ಕಾರಣಕ್ಕೆ ಬುಲ್ಡೋಜರ್ ಪ್ರಯೋಗವಾಗಿರುವುದಲ್ಲ, ಪ್ರತಿಭಟನಾಕಾರರು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕಾರಣದಿಂದ ಅವರ ನಿವಾಸಗಳನ್ನು ಕೆಡವಲಾಯಿತು ಎಂದು ಹಲವು ರಾಜಕೀಯ ಮುಖಂಡರ ವಿಶ್ಲೇಷಣೆಯಾಗಿದೆ. ಅಗ್ನಿಪಥ್ನ ವಿರುದ್ಧ ಒಂದು ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯದ ಯುವಕರು ಪ್ರತಿಭಟನೆ ನಡೆಸುತ್ತಿದ್ದರೆ ಈಗ ಸ್ಥಿತಿ ಏನಾಗುತ್ತಿತ್ತು? ಎಂಬ ಪ್ರಶ್ನೆಯ ಈಗ ಮುನ್ನಲೆಗೆ ಬಂದಿದೆ. ಈ ಪ್ರಶ್ನೆಯ ಮುಂದುವರಿದ ಭಾಗವಾಗಿಯೇ ‘ಬುಲ್ಡೋಜರ್ ಪ್ರಯೋಗ ಈಗ ಯಾಕಿಲ್ಲ?’ ಎಂದು ಸರಕಾರವನ್ನು ಕೇಳುತ್ತಿದ್ದಾರೆ. ಆದರೆ ಇಂತಹ ಪ್ರಶ್ನೆಯನ್ನು, ವ್ಯಂಗ್ಯ ಮಾಡುವ ಉದ್ದೇಶದಿಂದಲಾದರೂ ಸರಿಯೇ ಸರಕಾರವನ್ನು ಕೇಳಬಾರದು. ಯಾಕೆಂದರೆ, ಪ್ರತಿಭಟನಾಕಾರರ ಮೇಲೆ ಇಂತಹ ಪ್ರಯೋಗ ಮಾಡಲು ಸದ್ಯದ ಸರಕಾರ ಹಿಂದೆ ಮುಂದೆ ನೋಡಲಾರದು. ಜನರ ಬೆಂಬಲವಿದೆ ಎಂದಾದರೆ, ಪ್ರತಿಭಟನಾಕಾರರ ಮೇಲೆಯೇ ಬುಲ್ಡೋಜರ್ ಓಡಿಸುವಷ್ಟು ನಿಷ್ಕರುಣಿ ಸರಕಾರ ನಮ್ಮನ್ನು ಆಳುತ್ತಿದೆ.
ಎರಡು ತಪ್ಪುಗಳನ್ನು ಸೇರಿಸಿದರೆ ಅದು ‘ಸರಿ’ ಆಗುವುದಿಲ್ಲ. ಪ್ರವಾದಿ ನಿಂದನೆಯ ವಿರುದ್ಧ ಪ್ರತಿಭಟಿಸಿದವರ ಮನೆಯನ್ನು ಕೆಡವಿರುವುದು ತಪ್ಪು ಎಂದಾದರೆ, ಅಂತಹ ದೌರ್ಜನ್ಯ ಯಾರ ಮೇಲೂ ನಡೆಯಬಾರದು. ಅಗ್ನಿಪಥ್ ವಿರೋಧಿ ಪ್ರತಿಭಟನಾಕಾರರ ನಿವಾಸಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದಾಕ್ಷಣ, ‘ಅಂದಿನ ತಪ್ಪು’ ಸರಿಯಾಗುವುದಿಲ್ಲ. ಯಾವುದೇ ಮುನ್ಸೂಚನೆ, ಕಾನೂನಿನ ಅನುಮತಿಯಿಲ್ಲದೆ ಬುಲ್ಡೋಜರ್ ಮೂಲಕ ಮನೆಗಳನ್ನು ತೆರವುಗೊಳಿಸುವುದರ ವಿರುದ್ಧ ಈಗಾಗಲೇ ಸುಪ್ರೀಂಕೋರ್ಟ್ ಕೂಡ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಪ್ರತಿಭಟನೆಯ ನೇತೃತ್ವವನ್ನು ವಹಿಸಿದವರ ಮನೆಗಳನ್ನು ಕೆಡಹುವ ಉದ್ದೇಶವೇ, ಸರಕಾರದ ಯಾವುದೇ ನೀತಿಯ ವಿರುದ್ಧ ಪ್ರಜೆಗಳು ತುಟಿ ಪಿಟಿಕ್ ಎನ್ನಬಾರದು ಎನ್ನುವ ಸಂದೇಶವನ್ನು ರವಾನಿಸುವುದು. ಅಂತಹ ಸರ್ವಾಧಿಕಾರಿ ನೀತಿಯನ್ನು ನಾವು ಯಾವ ಕಾರಣಕ್ಕೂ ಪ್ರೋತ್ಸಾಹಿಸುವುದು ತಪ್ಪಾಗುತ್ತದೆ. ಪ್ರತಿಭಟನೆಗೈದವನನ್ನು ಸಂಚುಕೋರ ಎಂದೇ ಇಟ್ಟುಕೊಳ್ಳೋಣ. ನಿವಾಸವನ್ನು ಕೆಡಹುವುದರಿಂದ ಒಬ್ಬನಿಗಷ್ಟೇ ಶಿಕ್ಷೆಯಾಗುವುದಲ್ಲ. ಆತನನ್ನು ಅವಲಂಬಿಸಿದ ಪತ್ನಿ, ಮಕ್ಕಳಿಗೂ ಶಿಕ್ಷೆ ನೀಡಿದಂತಾಗುತ್ತದೆ. ಇದು ಅನ್ಯಾಯವಲ್ಲವೇ?
ಅಗ್ನಿಪಥ್ ವಿರುದ್ಧ ಪ್ರತಿಭಟನೆಗಿಳಿದವರೆಲ್ಲರೂ ಯುವಕರು. ಯುವಶಕ್ತಿ ದೇಶದ ಆಸ್ತಿ. ಅಂತಹ ಯುವಶಕ್ತಿಯನ್ನು ಹಿಂಸೆಗೆ ಪ್ರಚೋದಿಸಿದವರು ಯಾರು? ಈ ಪ್ರಚೋದನೆಯಲ್ಲಿ ಸರಕಾರದ ಪಾಲೆಷ್ಟು? ಎನ್ನುವ ಆತ್ಮವಿಮರ್ಶೆ ಮೊದಲು ನಡೆಯಬೇಕು. ಈಗಾಗಲೇ ನಿರುದ್ಯೋಗ, ಬಡತನದಿಂದ ಯುವಶಕ್ತಿ ತತ್ತರಿಸಿ ಕೂತಿದೆ. ಇದೀಗ ಸೇನೆ ಸೇರುವ ಅವರ ಕನಸಿಗೆ ಬೆಂಕಿ ಹಚ್ಚುವ ಮೂಲಕ ಅವರನ್ನು ಹಿಂಸಾಚಾರದೆಡೆಗೆ ತಳ್ಳಿರುವುದು ನಮ್ಮದೇ ಸರಕಾರ. ಈಗ ಶಕ್ತಿ ಪ್ರದರ್ಶನದ ಮೂಲಕ ಅವರ ಹೋರಾಟವನ್ನು ದಮನಿಸಿದರೆ, ಅವರ ಮೇಲೆ ಸಲ್ಲದ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ತಳ್ಳಿ ಅವರ ಭವಿಷ್ಯವನ್ನು ನಾಶ ಮಾಡಿದರೆ ನಮ್ಮ ದೇಶಕ್ಕೇ ಅದರಿಂದ ನಷ್ಟ. ಪ್ರತಿಭಟನೆ ನಡೆಸುತ್ತಿರುವವರು ಉಗ್ರವಾದಿಗಳಲ್ಲ. ಅವರು ಈ ದೇಶದ ಸೇನೆಗೆ ಸೇರಿ, ದೇಶ ರಕ್ಷಣೆಯ ಕನಸು ಕಂಡವರು. ದೇಶ ರಕ್ಷಕರನ್ನೇ ದೇಶ ವಿರೋಧಿಗಳಾಗಿ ಮಾರ್ಪಡಿಸಿ ಅವರ ಕೈಯಲ್ಲಿ ಕಲ್ಲು, ಕತ್ತಿ, ದೊಂದಿಗಳನ್ನು ಸರಕಾರವೇ ಕೊಟ್ಟರೆ ಈ ದೇಶವನ್ನು ಕಾಪಾಡುವವರು ಯಾರು? ಆದುದರಿಂದ, ಯಾವ ಕಾರಣಕ್ಕೂ ಪ್ರತಿಭಟನೆಯನ್ನು ಬಲ ಪ್ರದರ್ಶನದ ಮೂಲಕ ದಮನಿಸುವ ಪ್ರಯತ್ನ ಸರಕಾರ ನಡೆಸಬಾರದು. ಸಮಾಜವೂ ಅದಕ್ಕೆ ಪ್ರೋತ್ಸಾಹವನ್ನು ನೀಡಬಾರದು.