ಯಶ್ಪಾಲ್ ಸುವರ್ಣಗೆ ಕೊಲೆ ಬೆದರಿಕೆ ಪ್ರಕರಣ: ಆರೋಪಿಗೆ ಜಾಮೀನು
ಉಡುಪಿ: ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಬೆದರಿಕೆ ಹಾಕಿದ ಪ್ರಕರಣದ ಆರೋಪಿ ಮಹಮ್ಮದ್ ಶಾಫಿ (26)ಗೆ ಉಡುಪಿ ಎರಡನೇ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿ ಬಿಡುಗಡೆ ಗೊಳಿಸಿದೆ.
ಯಶ್ಪಾಲ್ ಸುವರ್ಣ ಹತ್ಯೆಗೈದವರಿಗೆ 10 ಲಕ್ಷ ರೂ ನೀಡುವುದಾಗಿ ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಬೆದರಿಕೆ ಹಾಕಿರುವುದಾಗಿ ಕಾಪು ವಿಧಾನಸಭಾ ಕ್ಷೇತ್ರದ ಯುವಮೋರ್ಚಾದ ಅಧ್ಯಕ್ಷ ಉದ್ಯಾವರದ ಸಚಿನ್ ಸುವರ್ಣ ಜೂನ್ 8 ರಂದು ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕರಾವಳಿ ಹಾಗೂ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದ ಈ ಪ್ರಕರಣ ದಾಖಲಾದ ತಕ್ಷಣ ಕಾರ್ಕಳ ಉಪವಿಭಾಗದ ಡಿವೈಎಸ್ಪಿ ಎಸ್. ವಿಜಯ ಪ್ರಸಾದ್ ಅವರು ಉಡುಪಿ ಜಿಲ್ಲಾ ಸೈಬರ್ ಪೊಲೀಸ್ ಠಾಣೆಯ ನಿರೀಕ್ಷಕರಾದ ಮಂಜುನಾಥ್ ಇವರ ತಂಡ ಮಂಗಳೂರು ಬಜ್ಪೆಯ ಮಹಮ್ಮದ್ ಶಫಿ ಪತ್ತೆ ಹಚ್ಚಿದ್ದರು. ನಂತರ ಕಾಪು ಪೋಲೀಸರ ವಿಶೇಷ ತಂಡ ಜೂನ್ 18 ರಂದು ಆರೋಪಿಯನ್ನು ಬಂಧಿಸಿ, ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣ ಕಾನೂನಿನ ಪ್ರಕಾರ ಮಾನ್ಯತೆಯನ್ನೇ ಪಡೆಯುತ್ತಿಲ್ಲ. ಕಾಪು ಪೊಲೀಸರು ಅಧಿಕಾರ ದುರುಪಯೋಗ ಮಾಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಆರೋಪಿ ಪರ ವಕೀಲರು ವಾದಿಸಿ ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಸಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಲಯ ತಲಾ 2 ಜಾಮೀನು ಮತ್ತು ರೂ 50 ಸಾವಿರ ಬಾಂಡ್ ನ ಶರತ್ತು ವಿಧಿಸಿ, ಜಾಮೀನು ಮಂಜೂರು ಮಾಡಿದೆ. ಆರೋಪಿ ಪರವಾಗಿ ಯುವ ವಕೀಲ ಅಸದುಲ್ಲಾ ಕಟಪಾಡಿ ವಾದಿಸಿದ್ದರು.