ಹಾಸನ; ಪೊಲೀಸ್ ಕಾನ್ಸ್ಟೆಬಲ್ ಮೇಲೆ ಡಿವೈಎಸ್ಪಿಯಿಂದ ಹಲ್ಲೆ: ಆರೋಪ
ಡಿವೈಎಸ್ಪಿ ವಿರುದ್ಧ ಕ್ರಮಕ್ಕೆ ಮಾಜಿ ಸಚಿವ ಎಚ್.ಡಿ ರೇವಣ್ಣ ಒತ್ತಾಯ
ಹಾಸನ: ಪೊಲೀಸ್ ಕಾನ್ಸ್ಟೆಬಲ್ ಒಬ್ಬರ ಮೇಲೆ ಡಿವೈಎಸ್ಪಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗುರುವಾರ ಹಾಸನ ನಗರ ಠಾಣೆಗೆ ಎಸ್ಪಿ ಭೇಟಿ ವೇಳೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಹಲ್ಲೆಗೊಳಗಾದ ಕಾನ್ಸಟೆಬಲ್ ವೇಣುಗೋಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಾಸನ ಉಪವಿಭಾಗ ಡಿವೈಎಸ್ಪಿ ಉದಯಭಾಸ್ಕರ್ ಗುರುವಾರ ಸಂಜೆ ಎಸ್ಪಿ ಠಾಣೆ ಭೇಟಿ ವೇಳೆ ರೈಫಲ್ ಕ್ಲೀನ್ ಮಾಡಿ ತೋರಿಸಲು ಕಾನ್ಸ್ಟೆಬಲ್ ವೇಣುಗೆ ಹೇಳಿದ್ದಾರೆ. ಈ ವೇಳೆ ರೈಫಲ್ ಕ್ಲೀನ್ ಮಾಡುವ ಹಂತದಲ್ಲಿ ಕಾನ್ಸ್ಟೆಬಲ್ ತಪ್ಪು ಮಾಡಿದ್ದಾರೆ ಎಂದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಬಳಿಕ ಕಾನ್ಸಟೆಬಲ್ ವೇಣುಗೋಪಾಲ್ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ಕಾನ್ಸ್ಟೇಬಲ್ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, 'ವೇಣುಗೋಪಾಲ ನನ್ನ ಕ್ಷೇತ್ರದ ಮತದಾರ. ಅವರಿಗೆ ಕಪಾಳಕ್ಕೆ ಹೊಡೆಯವಂತದ್ದು ಏನಿದೆ? ಏನಾದರು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ. ರೈಫಲ್ ಎತ್ತಿಡುವ ವಿಚಾರದಲ್ಲಿ ತಪ್ಪು ಮಾಡಿದ್ರೆ ಕಪಾಳಕ್ಕೆ ಹೊಡಿತಾರಾ? ಪೊಲೀಸ್ ಮ್ಯಾನ್ಯೂಯಲ್ನಲ್ಲಿ ಇದಕ್ಕೆ ಅವಕಾಶ ಇದೆಯಾ? ಎಸ್ಪಿ ಎದುರಿನಲ್ಲೇ ಹಲ್ಲೆ ನಡೆದಿದೆ, ಕೂಡಲೆ ಎಫ್.ಐ.ಆರ್. ದಾಖಲಾಗಬೇಕು' ಎಂದು ಡಿವೈಎಸ್ಪಿ ಉದಯಭಾಸ್ಕರ್ ವಿರುದ್ದ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.