ಪಠ್ಯಪುಸ್ತಕದಿಂದ ಕಯ್ಯಾರ ಕಿಂಞಣ್ಣ ರೈ ಕೈಬಿಟ್ಟ ವಿಚಾರ; ಬಂಟ ಸಮಾಜದಿಂದಲೂ ಆಕ್ರೋಶ
ಮಂಗಳೂರು : ಹಿರಿಯ ಸಾಹಿತಿ, ಗಡಿನಾಡ ಕನ್ನಡಿಗ, ಕರ್ನಾಟಕ ಏಕೀಕರಣ ಹೋರಾಟ ಸಮಿತಿಗೆ ನಾಯಕತ್ವ ನೀಡಿದ್ದ ಕಯ್ಯಾರ ಕಿಂಞಣ್ಣ ರೈ ಅವರ ವಿಚಾರವನ್ನು ರಾಜ್ಯದ ಪಠ್ಯಪುಸ್ತಕದಿಂದ ಕೈ ಬಿಟ್ಟಿರುವುದಕ್ಕೆ ಇದೀಗ ಬಂಟ ಸಮಾಜದಿಂದಲೂ ಆಕ್ರೋಶ ವ್ಯಕ್ತವಾಗಿದೆ.
ರೋಹಿತ್ ಚಕ್ರತೀರ್ಥ ಇತಿಹಾಸ ಗೊತ್ತಿಲ್ಲದ ಒಬ್ಬ ಮೂರ್ಖ. ಆತನಿಗೆ ರಾಜ್ಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿರುವುದೇ ರಾಜ್ಯ ಸರಕಾರದ ಮೊದಲ ತಪ್ಪು. ಕಯ್ಯಾರ ಕಿಂಞಣ್ಣ ರೈ ಪಕ್ಷಾತೀತ ನಾಯಕರು. ಸತತ 16 ವರ್ಷಗಳ ಕಾಲ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಅವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡುತ್ತಾ ತನ್ನ ಬದುಕನ್ನೇ ಮುಡಿಪಾಗಿಟ್ಟವರು. ಅವರು ಕೇವಲ ಬಂಟ ಸಮಾಜಕ್ಕೆ ಸೀಮಿತರಾದವರಲ್ಲ. ಗಡಿನಾಡ ಕನ್ನಡಿಗರ ಸಾಕ್ಷಿಪ್ರಜ್ಞೆಯಾಗಿದ್ದವರು. ಅಂತಹ ಮಹಾನ್ ಚೇತನರ ಸಾಧನೆಯ ಬಗ್ಗೆ ಕಿಂಚಿತ್ತೂ ಅರಿವು ಇಲ್ಲದ ರೋಹಿತ್ ಚಕ್ರತೀರ್ಥ ಪಠ್ಯದಿಂದ ಕೈ ಬಿಟ್ಟಿರುವುದನ್ನು ಸಹಿಸಲು ಸಾದ್ಯವಿಲ್ಲ. ಇದರ ವಿರುದ್ಧ ಎಲ್ಲರನ್ನೂ ಜೊತೆಗೂಡಿಸಿಕೊಂಡು ಹೋರಾಟ ರೂಪಿಸಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ತಿಳಿಸಿದ್ದಾರೆ.