ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಸರಕಾರ ರಚನೆ: ಸಚಿವ ಮುರುಗೇಶ್ ನಿರಾಣಿ
ಕಲಬುರಗಿ, ಜೂ. 25: ‘ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದಲ್ಲಿಯೂ ಒಳ್ಳೆಯ ಆಡಳಿತ ನೀಡುವ ಸರಕಾರವನ್ನು ಅಧಿಕಾರಕ್ಕೆ ತರುತ್ತೇವೆ. ಶಿವಸೇನೆಯ ಬಂಡಾಯ ಶಾಸಕರು ನಮ್ಮ ಕಡೆ ಬಂದರೆ ಬಿಜೆಪಿ ಸರಕಾರ ರಚಿಸಲಿದೆ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್ಸಿಪಿ, ಶಿವಸೇನೆ ಮೂರು ಸೇರಿ ಸರಕಾರ ರಚಿಸಿರುವುದು ಅನೈತಿಕ. ಶಿವಸೇನೆಯೊಂದಿಗೆ ಬಿಜೆಪಿ 25 ವರ್ಷಗಳಿಂದ ಮೈತ್ರಿಯಲ್ಲಿದ್ದು, ಇದೀಗ ಆ ಪಕ್ಷದ ಶಾಸಕರು ನಮ್ಮ ಕಡೆ ಬಂದರೆ ಸುಮ್ಮನೆ ಕೂರಲು ಬಿಜೆಪಿ ಸನ್ಯಾಸಿಗಳಲ್ಲ' ಎಂದು ವಿವರಣೆ ನೀಡಿದರು.
‘ಮೂವರೂ ಸೇರಿ ಒಬ್ಬರ ಕಡೆ ಬ್ರೇಕ್, ಒಬ್ಬರ ಕಡೆ ಸ್ಟೇರಿಂಗ್, ಮತ್ತೊಬ್ಬರ ಕಡೆ ಎಕ್ಸಲೇಟರ್ ಆಗಿ ಮಹಾರಾಷ್ಟ್ರದಲ್ಲಿ ಆಡಳಿತದ ಗಾಡಿ ಸುಸೂತ್ರವಾಗಿ ನಡೆಯುತ್ತಿಲ್ಲ. ಈಗಾಗಲೇ ಶಿವಸೇನೆಯ ಅತಿಹೆಚ್ಚು ಶಾಸಕರು ಸರಕಾರದಿಂದ ಹೊರಗೆ ಬಂದಿದ್ದಾರೆ. ಇವರೆಲ್ಲ ಬಿಜೆಪಿ ಕಡೆ ಬರುತ್ತಾರೆನ್ನುವ ವಿಶ್ವಾಸ ಇದೆ. ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಸರಕಾರ ರಚನೆಯಾಗಲಿದೆ' ಎಂದು ನಿರಾಣಿ ಭರವಸೆ ವ್ಯಕ್ತಪಡಿಸಿದರು.
‘ಮಹಾರಾಷ್ಟ್ರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಅಭಿವೃದ್ದಿಯನ್ನು ಕಡೆಗಣಿಸಲಾಗಿದೆ. ಅಲ್ಲಿನ ಸರಕಾರದ ಬಿಕ್ಕಟ್ಟಿನಲ್ಲಿ ಬಿಜೆಪಿ ಯಾವುದೇ ಸಂದರ್ಭದಲ್ಲಿಯೂ ಮಧ್ಯಪ್ರದೇಶಿಸುವುದಿಲ್ಲ. ಅವರವರ ಕಚ್ಚಾಟದಲ್ಲಿ ಅಲ್ಲಿರುವ ಶಾಸಕರು ನಮ್ಮ ಕಡೆ ಬರುತ್ತಿದ್ದಾರೆ. ಅವರಾಗಿಯೇ ನಮ್ಮ ಕಡೆ ಬಂದಾಗ ಸರಕಾರ ರಚನೆ ಮಾಡಿ ಒಳ್ಳೆ ಆಡಳಿತ ನೀಡಲು ಬಿಜೆಪಿ ಚಿಂತನೆ ಮಾಡುತ್ತದೆ' ಎಂದು ನಿರಾಣಿ ತಿಳಿಸಿದರು.