ಕುವೈತ್ ತುಳುಕೂಟದಿಂದ ಶಾಲಾ ವಿದ್ಯಾರ್ಥಿಗಳ ದತ್ತು ಸ್ವೀಕಾರ
ಉದ್ಯಾವರ: ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ದತ್ತು ಸ್ವೀಕಾರ ಯೋಜನೆಯಂತೆ ತುಳುಕೂಟ ಕುವೈತ್ ಸಂಘಟನೆಯಿಂದ ಹದಿನೈದು ಶಾಲಾ ವಿದ್ಯಾರ್ಥಿಗಳ ದತ್ತು ಸ್ವೀಕಾರದ ಅಂಗವಾಗಿ ೬೭೫೦೦ ರೂ.ಗಳ ಬ್ಯಾಂಕ್ ಚೆಕ್ನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಕಾರಂತರಿಗೆ ಹಸ್ತಾಂತರಿಸಲಾಯಿತು.
ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತುಳುಕೂಟ ಕುವೈಟ್ನ ಪೂರ್ವಾಧ್ಯಕ್ಷ ಹಾಗೂ ಪ್ರಸ್ತುತ ಸಲಹೆಗಾರ ರಾಗಿರುವ ರಮೇಶ್ ಶೇಖರ್ ಭಂಡಾರಿ, ತುಳುಕೂಟದ ಲೆಕ್ಕ ಪರಿಶೋಧಕರಾದ ಶಂಕರ್ ಶೆಟ್ಟಿ, ಸದಸ್ಯರಾದ ಹರೀಶ್ ಮೊದಲಾದವರು ಉಪಸ್ಥಿತರಿದ್ದು ಫಲಾನುಭವಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಸುರೇಶ್ ಶೆಣೈ ವಹಿಸಿದ್ದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಡಾ. ತ್ರಿವೇಣಿ ವೇಣುಗೋಪಾಲ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಹೇಮಲತಾ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ಯು.ಬಿ.ಶ್ರೀನಿವಾಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಡಳಿತ ಮಂಡಳಿಯ ಸದಸ್ಯ ಕೃಷ್ಣಕುಮಾರ್ ರಾವ್ ಮಟ್ಟು ಕಾರ್ಯಕ್ರಮ ಸಂಯೋಜನೆ ಮಾಡಿದ್ದು, ಸಹ ಶಿಕ್ಷಕಿ ಅನುರಾಧಾ ಶೆಟ್ಟಿ ವಂದಿಸಿದರು.