ಮಂಗಳೂರು; ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧದ ಹೋರಾಟ ಮುಂದುವರಿಸಲು ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ನಿರ್ಧಾರ
ಮಂಗಳೂರು : ರಾಜ್ಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥಗೆ ಆಯೋಜಿಸಲಾಗಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮುತ್ತಿಗೆ, ಪ್ರತಿಭಟನೆಯನ್ನು ಕೈ ಬಿಟ್ಟ ಮಂಗಳೂರಿನ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ವಿಕಾಸ ಕಚೇರಿಯಲ್ಲಿ ಶನಿವಾರ ಅವಲೋಕನ ಸಭೆ ನಡೆಯಿತು.
ನಾರಾಯಣ ಗುರು, ಕಯ್ಯಾರ ಕಿಂಞಣ್ಣ ರೈ, ಕುವೆಂಪು, ಅಂಬೇಡ್ಕರ್, ರಾಣಿ ಅಬ್ಬಕ್ಕರನ್ನು ಅವಮಾನಿಸಿದ ಪರಿಷ್ಕೃತ ಪಠ್ಯವನ್ನು ಸರಕಾರ ಕೈಬಿಡಲು ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ದ.ಕ.ಜಿಲ್ಲೆಯಲ್ಲಿ ತೀವ್ರಗೊಳಿಸಲು ತೀರ್ಮಾನಿಸಲಾಯಿತು.
ಪಠ್ಯ ಪುಸ್ತಕ ಪರಿಷ್ಕರಣೆಯ ಕುರಿತು ವಿಚಾರ ಸಂಕಿರಣ, ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳ ವಿಶಾಲ ವೇದಿಕೆಯಡಿ ರ್ಯಾಲಿ ನಡೆಸಲು ನಿರ್ಧರಿಸಲಾಯಿತು. ಹಾಗೆಯೆ ನಾಡಿನ ಮಹಾಚೇತನಗಳಿಗೆ ಅವಮಾನಿಸಿದ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮದಲ್ಲಿ ನಾಗರಿಕರ ವಿನಂತಿಯ ಹೊರತಾಗಿಯು ಭಾಗವಹಿಸುವುದರ ಪರವಾಗಿಯೇ ನಿಂತ ವಿವಿ ಕುಲಪತಿ ಬಿ.ಎಸ್. ಯಡಪಡಿತ್ತಾಯರ ವಿರುದ್ದ ಸಭೆ ಖಂಡನಾ ನಿರ್ಣಯ ಕೈಗೊಂಡಿತು. ಯಡಪಡಿತ್ತಾಯರ ನಡೆ ನಿರ್ಲಜ್ಜವಾಗಿದ್ದು, ಮಂಗಳೂರು ವಿವಿಯ ಘನತೆಗೆ ಯಡಪಡಿತ್ತಾಯರ ನಡೆ ಕುತ್ತು ತಂದಿದೆ ಎಂದು ಸಭೆ ಆರೋಪಿಸಿತು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಪೊರೇಟರ್ ಅಬ್ದುಲ್ ಲತೀಫ್, ಎಐವೈಎಫ್ ರಾಜ್ಯಾಧ್ಯಕ್ಷ ಹರೀಶ್ ಬಾಲ, ವಿವಿಧ ಸಂಘಟನೆಗಳ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಎಚ್ವಿ ರಾವ್, ಸೀತಾರಾಮ ಬೇರಿಂಜ, ಪುಷ್ಟರಾಜ್ ಬೋಳೂರು, ರಮಾನಂದ ಪೂಜಾರಿ,ಬಿಕೆ ಇಮ್ತಿಯಾಝ್, ಮಹಾಬಲ ದೆಪ್ಪಲಿಮಾರ್, ಇಸ್ಮಾಯಿಲ್ ಫಯಾಝ್, ಭಾರತಿ ಬೋಳಾರ, ನಿತಿನ್ ಕುತ್ತಾರ್, ಚರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.