ತುಮಕೂರು; ದಲಿತ ಮುಖಂಡನ ಹತ್ಯೆ ಪ್ರಕರಣ: 13 ಆರೋಪಿಗಳ ಬಂಧನ
ನರಸಿಂಹಮೂರ್ತಿ- ಹತ್ಯೆಗೊಳಗಾದ ದಲಿತ ಮುಖಂಡ
ತುಮಕೂರು: ಗುಬ್ಬಿ ಪ.ಪಂ.ಮಾಜಿ ಉಪಾಧ್ಯಕ್ಷ ನರಸಿಂಹಮೂರ್ತಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕಪುರ ತಾಲೂಕಿನ ಹಾರೋಹಳ್ಳಿ ಬಳಿಯ ಫಾರಂಹೌಸ್ ನಲ್ಲಿದ್ದ ಆರೋಪಿಗಳಾದ ಕಿರಣ್, ಕ್ಯಾಟ್ ರಾಜ, ಮಂಜು, ಅಭಿಷೇಕ್, ನಯಾಝ್, ವೆಂಕಟೇಶ್, ಕೀರ್ತಿ, ಚಂದ್ರಶೇಖರ್, ಭರತ್, ಧೀರಜ್, ವೆಂಕಟೇಶ್, ಬಸವರಾಜು, ನಾಗರಾಜು ಅವರನ್ನು ಸಿಪಿಐ ರವಿಕುಮಾರ್, ಅವಿನಾಶ್ ಅವರ ತಂಡ ಬಂಧಿಸಿದೆ.
ಮೇಲ್ನೋಟಕ್ಕೆ ಜಮೀನು ವ್ಯಾಜ್ಯ ಸಂಬಂಧ ಕೊಲೆಯಾಗಿರಬಹುದು ಎಂಬ ಸಂಶಯ ಇದ್ದು ತನಿಖೆ ನಡೆಯುತ್ತಿದ್ದು, ಯೋಜಿತ ರೀತಿಯಲ್ಲಿ ಕೊಲೆ ಮಾಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ ಎಂದರು.
ಸುಫಾರಿ ಹತ್ಯೆಯಲ್ಲ: ಪ.ಪಂ.ಮಾಜಿ ಉಪಾಧ್ಯಕ್ಷ, ದಲಿತ ಮುಖಂಡ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿ ಅವರನ್ನು ಸ್ಥಳೀಯ ವ್ಯಾಜ್ಯಕ್ಕೆ ಕೊಲೆಯಾಗಿರಬಹುದು ಯಾವುದೇ ಸುಫಾರಿ ಕೊಲೆ ಅಲ್ಲ ಎಂದು ಸ್ಪಷ್ಪಪಡಿಸಿದರು.
ಕೊಲೆ ಆರೋಪಿಗಳಲ್ಲಿ 6 ಮಂದಿ ಸ್ಥಳೀಯರು ಭಾಗಿಯಾಗಿದ್ದು, 7ಮಂದಿ ಹೊರಗಿನವರು ಭಾಗಿಯಾಗಿದ್ದಾರೆ, ಬೆಂಗಳೂರು, ಮೈಸೂರು, ರಾಮನಗರದವರಾಗಿದ್ದು, ಗುಬ್ಬಿ ಓರ್ವ ಮತ್ತು ಹೊರ ಜಿಲ್ಲೆಯವರ ಮೇಲೆ ಬೇರೆ ಬೇರೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಕುಮಾರಪ್ಪ, ಸರ್ಕಲ್ ಇನ್ ಸ್ಪೆಕ್ಟರ್ ಗಳಾದ ರವಿಕುಮಾರ್, ನದಾಫ್, ಅವಿನಾಶ್ ಇದ್ದರು.