ರಮೇಶ್ ಜಾರಕಿಹೊಳಿಯಿಂದ 819 ಕೋಟಿ ರೂ.ವಂಚನೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ
ಬೆಂಗಳೂರು, ಜೂ. 26: ‘ಮೈತ್ರಿ ಸರಕಾರ ಬೀಳಿಸಿ ಬಿಜೆಪಿ ಸರಕಾರ ತಂದ ರಮೇಶ್ ಜಾರಕಿಹೊಳಿ ಸುಮಾರು 819ಕೋಟಿ ರೂ.ಸಾರ್ವಜನಿಕ ಹಣ ಲೂಟಿ ಮಾಡಿದ್ದು, ಇದರಲ್ಲಿ ಅಮಿತ್ ಶಾ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ರಾಜ್ಯದ ಹಾಲಿ ಸಿಎಂ ಭಾಗಿಯಾಗಿದ್ದಾರೆ. ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕರ ಆಸ್ತಿ ನುಂಗಿದ್ದರೂ, ಅವರಿಗೆ ಒಂದು ನೊಟೀಸ್ ಅನ್ನು ಜಾರಿ ಮಾಡದಿರುವುದು ದುರಂತ' ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆಕ್ಷೇಪಿಸಿದ್ದಾರೆ.
ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಸೌಭಾಗ್ಯ ಲಕ್ಷ್ಮೀ ಶುಗರ್ ಲಿಮಿಟೆಡ್ಗೆ 6 ಮಂದಿ ಆಡಳಿತ ಮಂಡಳಿ ನಿರ್ದೇಶಕರು, 4 ಜನ ಅವರ ಕುಟುಂಬದವರು, ಉಳಿದವರು ಇವರ ಬೇನಾಮಿಗಳು. ಈ ಕಂಪೆನಿ ಯಾವ ಬ್ಯಾಂಕಿಗೆ ಎಷ್ಟು ಸಾಲ ನೀಡಬೇಕೆಂದು ಲಿಖಿತ ರೂಪದಲ್ಲಿ ತಿಳಿಸಿದೆ. ಅದರ ಪ್ರಕಾರ, ಕರ್ನಾಟಕ ಸ್ಟೇಟ್ ಕೋಆಪರೇಟಿವ್ ಅಪೆಕ್ಸ್ ಬ್ಯಾಂಕ್ ಲಿ.ಗೆ 180ಕೋಟಿ ರೂ. ಐಕೆಮೆಸ್ಟ್ ಆಸೆಟ್ ರೀಕನ್ಸ್ಟ್ರಕ್ಷನ್ ಲಿ. 128.96ಕೋಟಿ ರೂ., ವಿಜಯಪುರ ಡಿಸಿಸಿ ಬ್ಯಾಂಕ್ ಲಿ. 57ಕೋಟಿ ರೂ., ಸೌಥ್ ಕೆನರಾ ಡಿಸಿಸಿಗೆ 44ಕೋಟಿ ರೂ., ತುಮಕೂರು ಡಿಸಿಸಿಗೆ 44.33 ಕೋಟಿ ರೂ., ಕರ್ನಾಟಕ ಡಿಸಿಸಿ ಬ್ಯಾಂಕ್ ಗೆ 51 ಕೋಟಿ, ಶ್ರೀ ಹರಿಹಂತ್ ಕ್ರೆಡಿಟ್ ಸಹಕಾರ ಲಿಮಿಟೆಡ್ 42.22ಕೋಟಿ ರೂ. ನೀಡಬೇಕಿದೆ. ಯೂನಿಯನ್ ಬ್ಯಾಂಕ್ನಲ್ಲಿ 22.66 ಕೋಟಿ ರೂ., ಶ್ರೀ ಬೀರವೇಶ್ವರ ಸೌಹಾರ್ದ್ ಕ್ರೆಡಿಟ್ ಸಹಕಾರ ಲಿಮಿಟೆಡ್ ನಿಂದ 6.87ಕೋಟಿ ರೂ.ಸೇರಿ ಒಟ್ಟು 578.39 ಕೋಟಿ ರೂ.ಸಾಲ ಪಡೆದಿದ್ದಾರೆ. ಹರಿಹಂತ್ ಕ್ರೆಡಿಟ್ ಸಹಕಾರ ಲಿಮಿಟೆಡ್ ನಡೆಸುತ್ತಿರುವ ಅಭಿನಂದನ್ ಪಾಟೀಲ್, ರಮೇಶ್ ಜಾರಕಿಹೋಳಿ ಬೇನಾಮಿ ಆಗಿದ್ದಾರೆ. ರಮೇಶ್ ಜಾರಕಿಹೋಳಿ ಇವರಿಂದಲೇ 42.24ಕೋಟಿ ರೂ.ಸಾಲ ಪಡೆದಿದ್ದಾರೆ. ಈ ಸಾಲ ಪಡೆದಿರುವುದರ ಜತೆಗೆ ಕಬ್ಬು ರೈತರಿಗೆ 50ಕೋಟಿ ರೂ. ಬಾಕಿ, ಗುತ್ತಿಗೆದಾರರಿಗೆ 5ಕೋಟಿ ರೂ., ಸರಬರಾಜುದಾರರಿಗೆ 50 ಕೋಟಿ ಬಾಕಿ ಉಳಿಸಿಕೊಂಡಿದೆ. ಇನ್ನು ಶ್ರೀಕೊಂಡಿಶೆಟ್ಟಿ ಕುಮಾರ ದುಶ್ಯಂತ ಎಂಬ ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿಯ ಆರ್ಬಿಟ್ರೇಟರ್ ಅವರು ಆದಾಯ ತೆರಿಗೆಗೆ 2020ರ ಮೇ 19ರಂದು ಬರೆದ ಪತ್ರದಲ್ಲಿ 2011ರಿಂದ 156.64ಕೋಟಿ ರೂ.ಆದಾಯ ತೆರಿಗೆ ಬಾಕಿ ಇದೆ ಎಂದು ತಿಳಿಸಿದ್ದಾರೆ. ಇದೆಲ್ಲವೂ ಸೇರಿ ರಮೇಶ್ ಜಾರಕಿಹೊಳಿ ಮೋಸ ಮಾಡಲು ಹೊರಟಿರುವ ಒಟ್ಟಾರೆ ಮೊತ್ತ 819 ಕೋಟಿ ರೂ. ಎಂದು ದಾಖಲೆಗಳೊಂದಿಗೆ ವಿವರ ನೀಡಿದರು.
‘ಎಲ್ಲ ಡಿಸಿಸಿ ಬ್ಯಾಂಕುಗಳಿಗೆ ಮುಖ್ಯಸ್ಥವಾಗಿರುವ ಅಪೆಕ್ಸ್ ಬ್ಯಾಂಕ್ ಸಾಲ ವಸೂಲಿಗೆ 2019ರಲ್ಲಿ ನೊಟೀಸ್ ಜಾರಿ ಮಾಡಿದ್ದು, ನಿಮ್ಮ ಆಸ್ತಿಗಳನ್ನು ಯಾಕೆ ಮುಟ್ಟುಗೋಲು ಹಾಕಿಕೊಳ್ಳಬಾರದೆಂದು ಎಚ್ಚರಿಸಿರುತ್ತಾರೆ. ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರು ಹಾಗೂ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ಈ ನೋಟೀಸ್ ಜಾರಿ ಮಾಡುತ್ತಾರೆ. 2021ರ ಡಿಸೆಂಬರ್ 1ರಂದು 2019ರ ನೋಟೀಸ್ ಉಲ್ಲೇಖಿಸಿ ಬೆಳಗಾವಿ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತಾರೆ. ಆದರೂ ಜಿಲ್ಲಾಧಿಕಾರಿ ಇದುವರೆಗೂ ಏನು ಕ್ರಮ ಕೈಗೊಳ್ಳದೆ ಮಲಗಿದ್ದಾರೆ. ರಮೇಶ್ ಜಾರಕಿಹೊಳಿ 2019ರಲ್ಲಿ ನೊಟೀಸ್ ಪಡೆದ ನಂತರ ನ್ಯಾಯಾಲಯ ಮೆಟ್ಟಿಲೇರಿ ಧಾರವಾಡ ಹೈಕೋರ್ಟ್ಗೆ ಹೋಗುತ್ತಾರೆ. ಹೈಕೋರ್ಟ್ ಆಗ 6 ವಾರದೊಳಗೆ ಬ್ಯಾಂಕುಗಳಿಗೆ ನೀಡಬೇಕಾದ ಸಾಲವನ್ನು ಶೇ.50ರಷ್ಟು ಸಾಲ ಮರುಪಾವತಿಸಿ ಎಂದು 2019ರ ನವೆಂಬರ್ 28ರಂದು ಮಧ್ಯಂತರ ಆದೇಶ ನೀಡುತ್ತದೆ. ಆದರೂ ಅವರು ಇದುವರೆಗೂ ಆದೇಶ ಲೆಕ್ಕಿಸಿಲ್ಲ. ನಂತರ ಬೆಳ್ಳಿ ಪ್ರಕಾಶ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ' ಎಂದು ಲಕ್ಷ್ಮಣ್ ಮಾಹಿತಿ ನೀಡಿದರು.
‘ನೊಟೀಸ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಹರಿಹಂತ್ ಕ್ರೆಡಿಟ್ ಸಹಕಾರ ಲಿಮಿಟೆಡ್ನವರು ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ಗೆ ಅರ್ಜಿ ಸಲ್ಲಿಸಿ ನಮ್ಮ ಸೊಸೈಟಿಗೆ 42ಕೋಟಿ ರೂ.ಸಾಲ ಪಾವತಿಸಬೇಕು, ಕೊಡಿಸಿ ಎಂದು ಅರ್ಜಿ ಹಾಕುತ್ತಾರೆ. ಆಗ ಈ ನ್ಯಾಯಾಧಿಕಾರಣವು ಆರ್ಬಿಟ್ರೇಟರಿಗೆ ವಹಿಸುತ್ತಾರೆ. ಈ ಐಆರ್ಸಿ ರಮೇಶ್ ದಾರಕಿಹೊಳಿ ಅವರೇ ನೇಮಿಸಿರುವ ಸಂಸ್ಥೆ. ಅವರು ಸೌಭಾಗ್ಯ ಲಕ್ಷ್ಮಿ ಶುಗರ್ ಲಿ. ಯಾರಿಗಾದರೂ ಸಾಲ ಮರುಪಾವತಿಸಬೇಕಾದರೆ ನೀವು ಎನ್ಸಿಎಲ್ಟಿಗೆ ಅರ್ಜಿ ಹಾಕಬಹುದು ಎಂದು ಪ್ರಕಟಣೆ ಹೊರಡಿಸಿ 1 ತಿಂಗಳು ಕಾಲಾವಕಾಶ ನೀಡುತ್ತಾರೆ. ಈ ಅರ್ಜಿ ಸಲ್ಲಿಸಲು ಜಯನಗರದ ಸುಳ್ಳು ವಿಳಾಸ ನೀಡಿದ್ದಾರೆ. ಈ ವಿಳಾಸದಲ್ಲಿ ಕಚೇರಿ ಇಲ್ಲ ಶೆಡ್ ಇದೆ. ಯಾವ ಬ್ಯಾಂಕುಗಳು ಅರ್ಜಿ ಸಲ್ಲಿಸುವುದಿಲ್ಲ. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪೆನಿ ಒಟ್ಟಾರೆ ಆಸ್ತಿ ಹಾಗೂ ಯಂತ್ರೋಪಕರಣಗಳ ಮೊತ್ತ 900 ಕೋಟಿ ರೂ.ನಷ್ಟಿದೆ. ಆದರೆ ಈ ಕಂಪೆನಿಯ ಒಟ್ಟಾರೆ ಆಸ್ತಿಯ ಮೊತ್ತ 65 ಕೋಟಿ ರೂ.ಎಂದು ಮೌಲ್ಯಮಾಪನ ಮಾಡಲಾಗಿದೆ. ಆ ಮೂಲಕ 900 ಕೋಟಿ ರೂ.ಮೌಲ್ಯದ ಆಸ್ತಿಯನ್ನು 65 ಕೋಟಿ ರೂ. ಎಂದು ನೀಡಲಾಗಿದೆ' ಎಂದು ಲಕ್ಷ್ಮಣ್ ಮಾಹಿತಿ ನೀಡಿದರು.
‘ಹರಿಹಂತ್ ಬ್ಯಾಂಕಿನವರು ಪಡೆಯಬೇಕಿರುವ 42 ಕೋಟಿ ರೂ.ಸಾಲ ಮರುಪಾವತಿ ಬಿಟ್ಟು ಉಳಿದ 23 ಕೋಟಿ ರೂ.ಹಣವನ್ನು ಕಟ್ಟಿಸಿಕೊಂಡು ಕಂಪೆನಿಯ ಸಂಪೂರ್ಣ ಆಸ್ತಿಯನ್ನು ಹರಿಹಂತ್ ಬ್ಯಾಂಕಿಗೆ ಪರಭಾರೆ ಮಾಡುವ ಹುನ್ನಾರ ನಡೆದಿದೆ. ರಮೇಶ್ ಜಾರಕಿಹೊಳಿ ಬೇನಾಮಿ ಅಭಿನಂದನ್ ಪಾಟೀಲ್ ಆಗಿದ್ದಾರೆ. ಉಳಿದ ಬ್ಯಾಂಕಿನವರಿಂದ ಪಡೆದ ಸಾಲದ ಕಥೆ ಏನು? 2019ರಲ್ಲಿ ಸರಕಾರದ ವತಿಯಿಂದ ಈ ಸಾಲವನ್ನು ಎನ್ಪಿಎ ಎಂದು ಘೋಷಿಸುತ್ತಾರೆ. ಇದು ದಿವಾಳಿಯಾಗಿರುವ ಕಂಪೆನಿ ಎಂದು 2019ರಲ್ಲೇ ಘೋಷಿಸಿದ್ದರೂ ಇಂದಿಗೂ ಈ ಕಂಪೆನಿಯಲ್ಲಿ ಕಬ್ಬನ್ನು ಹರಿಯಲಾಗುತ್ತಿದೆ' ಎಂದು ಲಕ್ಷ್ಮಣ್ ದೂರಿದರು.
‘ಈ ಕಂಪೆನಿ 2021ರಲ್ಲಿ ಗಳಿಸಿರುವ ಒಟ್ಟಾರೆ ಲಾಭ 60 ಕೋಟಿ ರೂ.ಗಳಷ್ಟಿದೆ. ಆದರೂ, ಈ ಕಂಪೆನಿಗೆ ನೀಡಿರುವ ಸಾಲವನ್ನು ಎನ್ಪಿಎ ಎಂದು ಘೋಷಿಸಲಾಗಿದೆ. ಈ ಲಾಭದ ಹಣವನ್ನು ಕಂಪೆನಿಯ 6 ಜನ ಬೋರ್ಟ್ ಆಫ್ ಡೈರೆಕ್ಟರ್ಸ್ ಪಡೆಯುತ್ತಿದ್ದಾರೆ. ಈ ನಿರ್ದೇಶಕರನ್ನು 2018ರಲ್ಲೇ ಅನರ್ಹರು ಎಂದು ಘೋಷಿಸಿದ್ದರೂ ಅವರ ಖಾತೆಗೆ ಆರ್ಟಿಜಿಎಸ್ ಮೂಲಕ ಹಣ ಸಂದಾಯವಾಗುತ್ತಿದೆ. ರಮೇಶ್ ಜಾರಕಿಹೊಳಿ ಅವರಿಗೆ 96 ಲಕ್ಷ ರೂ., ಅವರ ಮಗನಿಗೆ 72 ಲಕ್ಷ ರೂ., ಮಗಳಿಗೆ 73 ಲಕ್ಷ ರೂ., ಮತ್ತೊಬ್ಬರಿಗೆ 22 ಲಕ್ಷ ರೂ.ಹಣ ವರ್ಗಾವಣೆ ಆಗುತ್ತಿದೆ' ಎಂದು ಲಕ್ಷ್ಮಣ್ ದಾಖಲೆಗಳನ್ನು ಬಹಿರಂಗಪಡಿಸಿದರು.
‘ಇಷ್ಟೆಲ್ಲ್ಲಾ ಅವ್ಯವಹಾರ ನಡೆಯುತ್ತಿದ್ದರೂ ರಾಜ್ಯ ಸರಕಾರ ರಮೇಶ್ ಜಾರಕಿಹೊಳಿ ಅವರನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ 660 ಕೋಟಿ ರೂ.ವಂಚನೆ ಮಾಡಿದ್ದಾರೆಂದು ಹೇಳಿಕೆ ಕೊಟ್ಟಾಗ ಸಹಕಾರ ಮಂತ್ರಿ ಎಸ್.ಟಿ ಸೋಮಶೇಖರ್ ಬೆಳಗಾವಿಗೆ ಹೋಗಿ ಸಹಕಾರ ಬ್ಯಾಂಕುಗಳ ಜತೆ ಸಭೆ ಮಾಡಿ ಯಾವುದೇ ವಂಚನೆ ನಡೆದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ' ಎಂದು ಅವರು ತಿಳಿಸಿದರು.
‘ಎಲ್ಲರಿಗೂ ನೋಟಿಸ್ ನೀಡುವ ಜಾರಿ ನಿರ್ದೇಶನಾಲಯದವರಿಗೆ ಇದರ ಜವಾಬ್ದಾರಿ ಇಲ್ಲವೇ? ಆರ್ಥಿಕ ಕಾನೂನು ಜಾರಿ ಹಾಗೂ ಆರ್ಥಿಕ ಅಪರಾಧಗಳ ವಿರುದ್ಧ ಹೋರಾಡುವ ಸಂಸ್ಥೆ. ಇದು ಕೇಂದ್ರ ಹಣಕಾಸು ಸಚಿವಾಲಯದ ಭಾಗವಾಗಿದೆ. ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತರಾಮನ್ ಅವರೇ ಎಲ್ಲಿದ್ದೀರಿ?'
-ಲಕ್ಷ್ಮಣ್ ಕೆಪಿಸಿಸಿ ವಕ್ತಾರ