ಸಾಗರ: ಇಂಜೆಕ್ಷನ್ ಪಡೆದ 14 ಮಕ್ಕಳು ಅಸ್ವಸ್ಥ!
ಸಾಗರ : ಜ್ವರ, ಕೆಮ್ಮು, ನೆಗಡಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದ 14 ಮಕ್ಕಳು ಅಸ್ವಸ್ಥಗೊಂಡ ಘಟನೆ ರವಿವಾರ ಸಂಜೆ ನಡೆದಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ಸಂಜೆ ವೇಳೆ ಆಸ್ಪತ್ರೆಯ ದಾದಿ ಆಂಟಿಬಯೋಟಿಕ್ ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ಕೊಟ್ಟ ತಕ್ಷಣ ಮಕ್ಕಳು ಚಳಿ ಚಳಿ ಎಂದು ನಡುಗುತ್ತ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.
ಕರ್ತವ್ಯದಲ್ಲಿದ್ದ ವೈದ್ಯರು ಅಸ್ವಸ್ಥಗೊಂಡ 14 ಮಕ್ಕಳಲ್ಲಿ 4 ಮಕ್ಕಳನ್ನು ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನುಳಿದ ಮಕ್ಕಳಿಗೆ ಉಪವಿಭಾಗೀಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಚಾರ ತಿಳಿದ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಹಾಲಪ್ಪ ಹರಾತಾಳು ಪೋಷಕರಿಗೆ ಧೈರ್ಯ ಹೇಳಿದ್ದಾರೆ.
ಈ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿದ ಶಾಸಕ ಹಾಲಪ್ಪ , ಇಂಜೆಕ್ಷನ್ ಅಡ್ಡ ಪರಿಣಾಮದಿಂದಾಗಿ ಹೀಗಾಗಿದೆಯೋ, ಇಂಜೆಕ್ಷನ್ ಪೌಚ್ ನಲ್ಲಿ ಸಮಸ್ಯೆಯಾಗಿದೆಯೋ ನೋಡಬೇಕು. ಕರ್ತವ್ಯಕ್ಕೆ ಎಲ್ಲಾ ವೈದ್ಯರನ್ನು ಬರಲು ಸೂಚಿಸಿದ್ದೇನೆ ಎಂದರು.