ಸುಳ್ಯ ತಾಲೂಕಿನಲ್ಲಿ ಮತ್ತೆ ಕಂಪಿಸಿದ ಭೂಮಿ: ಮನೆಯಿಂದ ಹೊರ ಬಂದ ಜನತೆ
ಸುಳ್ಯ: ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಮಿ ಕಂಪಿಸಿರುವ ಬಗ್ಗೆ ಸಾರ್ವಜನಿಕರು ಅನುಭವ ಹಂಚಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ 7.44, 7.45 ರ ಹೊತ್ತಿಗೆ ಲಘುವಾಗಿ ಭೂಮಿ ಕಂಪಿಸಿದೆ. ಭಾರೀ ವಿಚಿತ್ರ ಶಬ್ದದೊಂದಿಗೆ ಕೆಲವು ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ ಎನ್ನಲಾಗಿದೆ. ಜನರು ಆತಂಕದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ. ಮನೆಯ ಮೇಲಿನ ರೂಪಿಂಗ್ ಶೀಟ್ಗಳು ಕಂಪಿಸಿವೆ. ಸುಳ್ಯ, ಸಂಪಾಜೆ, ಗೂನಡ್ಕ, ಗುತ್ತಿಗಾರು ಮತ್ತಿತರ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿರುವ ಬಗ್ಗೆ ಜನರು ತಿಳಿಸಿದ್ದಾರೆ.
ಕುಳಿತುಕೊಂಡ ಕುರ್ಚಿ ಅಲುಗಾಡಿದೆ. 4-5 ಸೆಕೆಂಡ್ ಕಂಪಿಸಿದರ ಜೊತೆಗೆ ಭಾರೀ ಶಬ್ದ ಕೇಳಿತ್ತು ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಬೈಕ್ನಲ್ಲಿ ಕುಳಿತಿದ್ದಾಗ ಬೈಕ್ ಒಮ್ಮೆಗೆ ಅಲುಗಾಡಿದ ಅನುಭವ ಆಯಿತು ಎನ್ನುತ್ತಾರೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್. ಮನೆಯ ಟೇಬಲ್, ಕುರ್ಚಿಗಳು ಕಂಪಿಸಿದ್ದವು, ವಿಚಿತ್ರ ಶಬ್ದವೂ ಕೇಳಿ ಬಂದಿತ್ತು ಎಂದು ಅವರು ಹೇಳಿದ್ದಾರೆ.
ಗುತ್ತಿಗಾರು ಭಾಗದಲ್ಲಿ 5 ಸೆಕೆಂಡ್ಗಳ ಕಾಲ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ, ಜೆಸಿಬಿ ಹತ್ತಿರ ದ ಹಾಗೆ ವಿಚಿತ್ರ ಶಬ್ದ ಕೇಳಿತ್ತು ಎಂದು ಗುತ್ತಿಗಾರಿನ ಬಿಟ್ಟಿ ಬಿ ನೆಡುನಿಲಂ ಹೇಳಿದ್ದಾರೆ. ಸುಳ್ಯ ವಿಷ್ಣು ಸರ್ಕಲ್ ಭಾಗದಲ್ಲಿ ಕೆಲವು ಸೆಕೆಂಡ್ ಕಾಲ ಭೂಮಿ ಕಂಪಿಸಿದ ಸ್ಪಷ್ಟ ಅನುಭವ ಆಗಿದೆ ಎಂದು ದೀಪು ಪಿ.ಎಸ್. ಎಂಬವರು ಹೇಳಿದ್ದಾರೆ.
ರವಿವಾರ ಕರಿಕೆ ಸಮೀಪ ರಿಕ್ಟರ್ ಸ್ಕೇಲ್ನಲ್ಲಿ 2.3 ತೀವ್ರತೆಯ ಕಂಪನ ಆಗಿ ಅದರ ಪ್ರತಿಫಲನ ಈ ಭಾಗದಲ್ಲಿ ಉಂಟಾಗಿತ್ತು.