ಬಿಜೆಪಿ ವಕ್ತಾರ ಚಂದ್ರಶೇಖರ್ ಕೊರಿಯ ನಿಧನ
ಚಂದ್ರಶೇಖರ್ ಟಿ.ಎಸ್.(ಕೊರಿಯ)
ಬೆಂಗಳೂರು: ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿ ತಜ್ಞರು ಹಾಗೂ ಬಿಜೆಪಿಯ ಮುಖಂಡರೂ ಆಗಿದ್ದ ಚಂದ್ರಶೇಖರ್ ಟಿ.ಎಸ್.(ಕೊರಿಯ) ಅವರು ಹೃದಯಾಘಾತದಿಂದ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಸೋಮವಾರ ಬೆಳಗ್ಗೆ ಪಕ್ಷದ ಕಚೇರಿಗೆ ಆಗಮಿಸಿದ್ದ ಚಂದ್ರಶೇಖರ್ ಕೆಲಸ ಮುಗಿಸಿ ಮನೆಗೆ ತೆರಳುವ ಮಾರ್ಗಮಧ್ಯೆ ಹೃದಯಾಘಾತ ಆಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿ ತಜ್ಞರಾಗಿದ್ದ ಅವರು, ವಿವಿಧ ಟಿ.ವಿ. ವಾಹಿನಿಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂವಾದ ಮತ್ತಯ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಪಕ್ಷವನ್ನು ಸಮರ್ಥಿಸಿ ಮಾತನಾಡುತ್ತಿದ್ದರು.
ಚಂದ್ರಶೇಖರ್ ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು. ಪತ್ನಿ. ಇಬ್ಬರು ಮಕ್ಕಳು ಸಹಿತ ಅಪಾರ ಸಂಖ್ಯೆಯ ಬಂಧು- ಮಿತ್ರರರು ಹಾಗೂ ಪಕ್ಷದ ಒಡನಾಡಿಗಳನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆಯನ್ನು ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಇಂದು (ಜೂ.28) ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಚಂದ್ರಶೇಖರ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ. ದುಃಖತಪ್ತ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.