ಉಡುಪಿ ಜಿಲ್ಲೆಯಲ್ಲಿ ಮತ್ತೆ ಬಿರುಸು ಪಡೆದ ಮಳೆ; ಮನೆಗಳಿಗೆ, ಭತ್ತದ ಬೆಳೆ ಹಾನಿ
ಉಡುಪಿ : ಎರಡು ದಿನ ಸ್ವಲ್ಪ ನಿಧಾನಗೊಂಡ ಮಳೆ ಇಂದು ಮತ್ತೆ ಬಿರುಸು ಪಡೆದಿದ್ದು, ಜಿಲ್ಲೆಯಾದ್ಯಂತ ಮತ್ತೆ ಜೋರಾಗಿ ಮಳೆ ಸುರಿಯುತ್ತಿದೆ. ಇದರೊಂದಿಗೆ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದರೊಂದಿಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ ೪೦ರಿಂದ ೫೦ಕಿ.ಮೀ. ವೇಗದ ಗಾಳಿಯು ಬೀಸಲಿದ್ದು, ಮುಂಗಳೂರಿನಿಂದ ಕಾರವಾರದವರೆಗೆ ಅರಬಿಸಮುದ್ರದಲ್ಲಿ ೩.೫ಮೀ.ನಿಂದ ೪.೪ಮೀ. ಎತ್ತರದ ಅಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ. ಸಮುದ್ರ ಪ್ರಕ್ಷುಬ್ದಗೊಳ್ಳಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಮುಸ್ಸೂಚನೆಯಲ್ಲಿ ಎಚ್ಚರಿಸಲಾಗಿದೆ.
ಇಂದು ಬೆಳಗ್ಗೆ ೮:೩೦ಕ್ಕೆ ಮುಕ್ತಾಯಗೊಂಡಂತೆ ಹಿಂದಿನ ೨೪ ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ೮೬.೨ಮಿ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ ಅತ್ಯಧಿಕ ೧೦೪.೩ಮಿ.ಮೀ., ಹೆಬ್ರಿಯಲ್ಲಿ ೧೦೩.೫ಮಿ.ಮೀ.. ಮಳೆಯಾದರೆ, ಬ್ರಹ್ಮಾವರದಲ್ಲಿ ೯೫.೩ಮಿ.ಮೀ., ಉಡುಪಿಯಲ್ಲಿ ೯೦.೨ಮಿ.ಮೀ.ಮಳೆ ಬಿದ್ದಿದೆ. ಕಾಪುವಲ್ಲಿ ಕನಿಷ್ಠ ೪೭.೧ಮಿ.ಮೀ.ಮಳೆಯಾಗಿದೆ.
ಬೆಳೆ ಹಾನಿ: ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಹೆಬ್ರಿ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಭತ್ತದ ಬೆಳೆಗೆ ಹಾನಿ ಯಾಗಿರುವ ವರದಿಗಳು ಬಂದಿವೆ. ವರಂಗ ಗ್ರಾಮದ ನಾಗಪ್ಪ ಶೆಟ್ಟಿಗಾರ್, ಅಂಡಾರು ಗ್ರಾಮದ ರಾಜಶೇಖರ ಸೇರ್ವೆಗಾರ್ ಹಾಗೂ ಸುರೇಶ್ ಸೇರ್ವೇಗಾರ್ ಎಂಬವರ ಭತ್ತದ ಪೈರು ಗಾಳಿ-ಮಳೆಗೆ ಹಾನಿಯಾಗಿದ್ದು ಸುಮಾರು ಒಂದು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಅದೇ ರೀತಿ ಗಾಳಿ-ಮಳೆಯಿಂದ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕು ಗಳ ಐದಾರು ಮನೆಗಳಿಗೆ ಸುಮಾರು ಎರಡು ಲಕ್ಷ ರೂ.ಗಳಷ್ಟು ಹಾನಿಯಾಗಿರುವ ವರದಿಗಳು ಬಂದಿವೆ. ಬ್ರಹ್ಮಾವರ ತಾಲೂಕು ಕೋಡಿ ಗ್ರಾಮದ ಲಕ್ಷ್ಮೀ ಪೂಜಾರ್ತಿ ಎಂಬವರ ಮನೆ ಮೇಲೆ ಮರಬಿದ್ದು ೫೦ಸಾವಿರ ರೂ. ಹಾಗೂ ಕುಚ್ಚೂರು ಗ್ರಾಮದ ಮಂಜುನಾಥ ಎಂಬವರ ವಾಸ್ತವ್ಯದ ಮನೆ ಗೋಡೆ ಮಳೆಯಿಂದ ಕುಸಿದು ೫೦ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮದ ಸಾದು ಮೊಗೇರ್ತಿ ಎಂಬವರ ಮನೆ ಮಳೆಗೆ ಭಾಗಶ: ಹಾನಿಯಾಗಿದ್ದು ೪೦ಸಾವಿರ ರೂ.ನಷ್ಟವಾಗಿದೆ. ಅದೇ ರೀತಿ ಬಳ್ಕೂರು ಗ್ರಾಮ ದಿವ್ಯಾ ಹಾಗೂ ಹೊಸಾಡು ಗ್ರಾಮದ ಸುಶೀಲ ಎಂಬವರ ವಾಸ್ತವ್ಯದ ಮನೆಗಳೂ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು ೫೦ಸಾವಿರ ರೂ. ನಷ್ಟವಾಗಿದೆ.