ವೈದ್ಯರು ತಮ್ಮ ಕರ್ತವ್ಯವನ್ನು ಇನ್ನೂ ಹೆಚ್ಚಿಸಬೇಕು: ಡಾ.ಭಾಸ್ಕರಾನಂದ
ಉಡುಪಿ: ಬೇರೆಯವರಿಗೆ ಉಪಕಾರ ಮಾಡುವುದೇ ಉದಾತ ಸೇವೆ. ಹೆಚ್ಚಿನ ವೈದ್ಯರು ರೋಗಿಗಳ ಸೇವೆಯನ್ನು ತಮ್ಮ ಕೈಲಾದ ಪ್ರಯತ್ನ ಮಾಡಿ ಉಳಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಇಂದಿನ ಯುಗದಲ್ಲಿ ವೈದ್ಯರನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಆದುದರಿಂದ ವೈದ್ಯರು ತಮ್ಮ ಕರ್ತವ್ಯವನ್ನು ಇನ್ನೂ ಹೆಚ್ಚಿಸಬೇಕು ಎಂದು ವೈದ್ಯ ಡಾ.ಭಾಸ್ಕರಾನಂದ ಕುಮಾರ್ ಹೇಳಿದ್ದಾರೆ.
ಬ್ರಹ್ಮಗಿರಿಯ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಅಂಬಲಪಾಡಿ ಫ್ರೈಡ್ ವತಿಯಿಂದ ವೈದ್ಯ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ಬ್ರಹ್ಮಗಿರಿಯ ಬಾಲ ಭವನದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿ ದ್ದರು.
ಹೈಟೆಕ್ ಆಸ್ಪತ್ರೆಯ ವೈದ್ಯ ಡಾ.ಉಮೇಶ್ ಪ್ರಭು ವೈದ್ಯ ದಿನಾಚರಣೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಅಂಬಲಪಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ ಭಂಡಾರಿ, ವಲಯ ಅಧ್ಯಕ್ಷ ಜಯಾನಂದ ಕೊಡವರು, ಪ್ರಾಂತ್ಯ ಅಧ್ಯಕ್ಷ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಒಳಕಾಡು ಸರಕಾರಿ ಶಾಲೆಯ ವಿದ್ಯಾರ್ಥಿನಿ ವಿದ್ಯಾಲಕ್ಷ್ಮಿ ಕಾಮತ್ ಅವರಿಗೆ ಧನ ಸಹಾಯವನ್ನು ವಿತರಿಸಲಾಯಿತು. ಬ್ರಹ್ಮಗಿರಿ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಗೀತಾ ರಾವ್ ವಂದಿಸಿದರು. ಇಂದಿರಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.