ಮಹಿಳೆಯರು ಸ್ವಉದ್ಯೋಗವನ್ನು ಕ್ರಮ ಬದ್ದಗೊಳಿಸುವುದು ಅಗತ್ಯ: ಸಿಇಓ ಪ್ರಸನ್ನ ಎಚ್
ಉಡುಪಿ : ಸಂಜೀವಿನಿ ಸ್ವ ಸಹಾಯ ಗುಂಪುಗಳ ಮಹಿಳೆಯರು ಈಗಾಗಲೇ ಸಣ್ಣ ಪ್ರಮಾಣದ ಸ್ವಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಕ್ರಮ ಬದ್ದಗೊಳಿಸಬೇಕಾಗಿದೆ. ಉದ್ಯಮ ನೋಂದಣಿ, ಜಿಎಸ್ಟಿ, ಎಫ್ಎಸ್ಎಸ್ಎಐ ನೋಂದಣಿ ಮಾಡಿಸಿಕೊಂಡು ಉದ್ಯಮವನ್ನು ಇನ್ನಷ್ಟು ವಿಸ್ತರಣೆ ಗೊಳಿಸಿ ಯಶಸ್ವಿಯಾಗಬೇಕು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಎಚ್. ಹೇಳಿದ್ದಾರೆ.
ಉದ್ಯಮ ವಿಕಾಸ ಪಾಕ್ಷಿಕದ ಅಂಗವಾಗಿ ಸಂಜೀವಿನಿ ಸ್ವ ಸಹಾಯ ಗುಂಪುಗಳ ಮಹಿಳಾ ಉದ್ಯಮಿಗಳಿಗಾಗಿ ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಪಂನ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಮಂಗಳವಾರ ಆಯೋಜಿಸ ಲಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮದಲ್ಲಿ ಜಿಪಂ ಯೋಜನಾ ನಿರ್ದೇಶಕ ಬಾಬು ಎಂ., ಎಫ್ಎಸ್ ಎಸ್ಎಐ ಇದರ ಉಡುಪಿ ಜಿಲ್ಲಾ ಕಚೇರಿಯ ಅಂಕಿತ ಅಧಿಕಾರಿ ಡಾ. ಪ್ರೇಮಾನಂದ, ಉಡುಪಿ ಲೀಡ್ ಬ್ಯಾಂಕಿನ ಮುಖ್ಯ ಪ್ರಬಂಧಕ ಪಿ.ಎಂ. ಪಿಂಜಾರ, ಉಡುಪಿ ಜಿಪಂ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಉದ್ಯಮ್ ರಿಜಿಸ್ಟ್ರೇಷನ್, ಜಿಎಸ್ಟಿ, ಎಫ್ಎಸ್ ಎಸ್ಎಐ ರಿಜಿಸ್ಟ್ರೇಷನ್ ಹಾಗೂ ಯೋಜನಾ ವರದಿ ತಯಾರಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಮಾಲಾ ಸ್ವಾಗತಿಸಿದರು. ಸಮಂತ್ ವಂದಿಸಿದರು. ನವ್ಯಾ ಕಾರ್ಯಕ್ರಮ ನಿರೂಪಿಸಿದರು.