ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸರಕಾರಿ ಯಂತ್ರ ಬಳಕೆ: ಮಧ್ಯಪ್ರದೇಶದಲ್ಲಿ ತಮ್ಮದೇ ಪಕ್ಷದ ವಿರುದ್ಧ ಬಿಜೆಪಿ ಶಾಸಕ ಆರೋಪ
ಭೋಪಾಲ್: ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಇಡೀ ಸರಕಾರಿ ಯಂತ್ರವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿದೆ ಎಂದು ಬಿಜೆಪಿ ಶಾಸಕರೊಬ್ಬರು ತಮ್ಮದೇ ಪಕ್ಷದ ವಿರುದ್ದ ಆರೋಪಿಸಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಅವರ ನಿಷ್ಠಾವಂತರ ನಿರ್ಗಮನದ ನಂತರ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಪತನಗೊಂಡ ನಂತರ 2020 ರಲ್ಲಿ ಅಧಿಕಾರಕ್ಕೆ ಬಂದ ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ ಈ ಆರೋಪಗಳು ಭಾರೀ ಮುಜುಗರವನ್ನುಂಟುಮಾಡುವ ನಿರೀಕ್ಷೆಯಿದೆ.
"ನಾನು ಬಿಜೆಪಿಯ ವಿರೋಧಿ ಅಲ್ಲ. ಆದರೆ ಏನು ನಡೆಯುತ್ತಿದೆಯೋ ಅದು ನನಗೆ ನಿಜವಾಗಿಯೂ ನೋವುಂಟು ಮಾಡಿದೆ" ಎಂದು ಮೈಹರ್ (ಸತ್ನಾ) ನಿಂದ ನಾಲ್ಕು ಬಾರಿ ಶಾಸಕರಾಗಿರುವ ನಾರಾಯಣ ತ್ರಿಪಾಠಿ ಹೇಳಿದ್ದಾರೆ.
ನಾನು ಈ ಪ್ರದೇಶದಲ್ಲಿ (ಮೈಹಾರ್) ಪ್ರವಾಸ ಮಾಡುತ್ತಿದ್ದೇನೆ, ಪಟ್ವಾರಿ ಶ್ರೇಣಿಯಿಂದ ಉನ್ನತ ಮಟ್ಟದವರೆಗೆ ಎಲ್ಲ ಅಧಿಕಾರಿಗಳು ನಿರ್ದಿಷ್ಟ ಪಕ್ಷಕ್ಕಾಗಿ ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ಬಿಜೆಪಿ ಪರ ಮತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ನಾನು ಬಿಜೆಪಿ ಶಾಸಕನಾಗಿದ್ದೇನೆ ಆದರೆ ಇಂತಹ ಘಟನೆಗಳನ್ನು ನೋಡಿದಾಗ ನನಗೆ ಬೇಸರವಾಗುತ್ತದೆ. ಈ ದೇಶದಲ್ಲಿ ಇಂದು 2 ನಿಮಿಷದಲ್ಲಿ ಸರಕಾರವನ್ನು ಉರುಳಿಸಬಹುದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಇದೇ ಆಗುತ್ತಿದೆ. ಹೀಗಾಗಬಾರದು ಎಂದರು.
ತ್ರಿಪಾಠಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, "ಬಿಜೆಪಿಯಲ್ಲಿ ಸತ್ಯವನ್ನು ಮಾತನಾಡುವ ಧೈರ್ಯವಿರುವವರು ಇದ್ದಾರೆ. ಅಭಿನಂದನೆಗಳು ಮತ್ತು ಧನ್ಯವಾದಗಳು ನಾರಾಯಣ ತ್ರಿಪಾಠಿ ಜೀ, ನೀವು ಸಾವಿರಾರು ಸ್ಪರ್ಧಿಗಳ ನೋವನ್ನು ಬಹಿರಂಗಪಡಿಸಿದ್ದೀರಿ. ಅಧಿಕಾರಿಗಳಿಂದ ಪ್ರಜಾಪ್ರಭುತ್ವವನ್ನು ಬಹಿರಂಗವಾಗಿ ತೊಡೆದುಹಾಕಲಾಗಿದೆ'' ಎಂದರು.