ಕಲಬೆರಕೆ, ಮಿಶ್ರಣ ಅಡುಗೆ ಎಣ್ಣೆ ಮಾರಾಟಗಾರರ ವಿರುದ್ದ ಕ್ರಮ
ಉಡುಪಿ, ಆ.2: ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮೂಲಕ ದೇಶದಾದ್ಯಂತ ಆಗಸ್ಟ್ 14 ರವರೆಗೆ ಅಡುಗೆ ಎಣ್ಣೆಯಲ್ಲಿ ಕಲಬೆರಕೆ, ಎಣ್ಣೆಯಲ್ಲಿ ಟ್ರಾನ್ಸ್ಫ್ಯಾಟಿ ಆ್ಯಸಿಡ್ ಅಂಶ, ಸರಿಯಾದ ಲೇಬಲ್ ಮಾಡದೇ ಇರುವುದು, ಅಗ್ಮಾರ್ಕ್ ಲೈಸೆನ್ಸ್ ಇಲ್ಲದೇ ಇರುವ ಮಲ್ಟಿಸೋರ್ಸ್ ಅಡುಗೆ ಎಣ್ಣೆ ಮತ್ತು ಪ್ಯಾಕೆಟ್ ಮಾಡದೇ (ಬಿಡಿಯಾಗಿ) ಮಾರಾಟ ಮಾಡುವವರನ್ನು ಪತ್ತೆ ಹಚ್ಚಲಾಗುತ್ತಿದೆ.
ಇದಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ತಂಡವನ್ನು ರಚಿಸಲಾಗಿದ್ದು, ಉಡುಪಿ ಜಿಲ್ಲೆಯಾದ್ಯಂತ ಅಂಗಡಿಗಳಿಗೆ ಭೇಟಿ ನೀಡಿ, ಅಡುಗೆ ಎಣ್ಣೆ ಆಹಾರ ಮಾದರಿಯನ್ನು ತೆಗೆದು ವಿಶ್ಲೇಷಣೆಗೆ ಕಳುಹಿಸಲಾಗುವುದು. ಈಗಾಗಲೇ ನಿಷೇಧವಾಗಿರುವ ಪ್ಯಾಕೆಟ್ ಇಲ್ಲದ (ಬಿಡಿಯಾಗಿ) ಮಾರಾಟ ಮಾಡುವವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಅಂಕಿತ ಅಧಿಕಾರಿ, ಆಹಾರ ಮತ್ತು ಗುಣಮಟ್ಟ ಕಾಯ್ದೆ ಇವರ ಪ್ರಕಟಣೆ ತಿಳಿಸಿದೆ.
Next Story