ಸಾವರ್ಕರ್ ಕಟೌಟ್ಗೆ ನಮ್ಮ ಆಕ್ಷೇಪ ಇಲ್ಲ: ವಿನಯ ಕುಮಾರ್ ಸೊರಕೆ
ಉಡುಪಿ, ಆ.17: ಸಾವರ್ಕರ್ ಕಟೌಟ್ ತೆಗೆಯಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿಲ್ಲ. ಈ ಹಿಂದೆ ಕಾಂಗ್ರೆಸ್ ಹಾಕಿದ್ದ ಬ್ಯಾನರನ್ನು ಬಿಜೆಪಿ ಪುಡಿಪುಡಿ ಮಾಡಿ ಬಿಸಾಕಿತು. ಅನುಮತಿಯಿಲ್ಲದೆ ಹೇಗೆ ಬ್ಯಾನರ್ ಹಾಕಿದ್ದೀರಿ ಎಂದು ಕೇಳಲು ನಮ್ಮ ಕಾರ್ಯಕರ್ತರು ಹೋಗಿದ್ದಾರೆ. ಯಾರದ್ದೇ ಕಟೌಟ್ ಹಾಕಿದರೂ ಕಾಂಗ್ರೆಸ್ ವಿರೋಧಿಸುವುದಿಲ್ಲ. ಬ್ಯಾನರ್ ಹಾಕುವುದು ಅವರವರ ಇಚ್ಛೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನಿಸಿದ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಕಚೇರಿಗೆ ಮುತ್ತಿಗೆ ಹಾಕಿಲ್ಲ. ಅಂಗಳಕ್ಕೆ ಬಂದು ಹೋಗಿದ್ದಾರೆ. ಪೊಲೀಸರು ಜೊತೆಗಿರುವಾಗ ಮುತ್ತಿಗೆ ಹಾಕ್ಲಿಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ನಾವು ಸಾವರ್ಕರ್ ಕಟೌಟ್ ಹಾಕಿಲ್ಲ ಮತ್ತು ಹಾಕುವುದೂ ಇಲ್ಲ. ನಾವು ಮಹಾತ್ಮ ಗಾಂಧಿ ಜವಾಹರ್ ಲಾಲ್ ನೆಹರು ಕಟೌಟ್ ಹಾಕುವವರು. ಅವರು ಸಾವರ್ಕರ್ ಬ್ಯಾನರ್ ಹಾಕಲು ಪರವಾನಿಗೆ ಪಡೆದಿದ್ದರೆ ಹಾಕಲಿ. ಗೋಡ್ಸೆ ಬೋರ್ಡ್ ಹಾಕಿದಾಗಲೂ ಜಿಲ್ಲಾ ಕಾಂಗ್ರೆಸ್ ಮಾತನಾಡಲಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರ ಮನೆಮನೆಗೆ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಎಂಬ ಬಿಜೆಪಿ ನಾಯಕರ ಎಚ್ಚರಿಕೆ ವಿಚಾರದ ಬಗ್ಗೆ ಉತ್ತರಿಸಿದ ಅವರು, ನಮ್ಮ ಮನೆಯ ಮುಂದೆ ಸಾವರ್ಕರ್ ಕಟೌಟ್ ಹಾಕಲಿ ಬಿಡಲಿ, ನಮ್ಮದೇನು ಅಡ್ಡಿ ಇಲ್ಲ. ಅವರು ಸಾವರ್ಕರನ್ನು ನಂಬುವವರು. ಧೈರ್ಯಕ್ಕೆ ಸುಭಾಷ್ಚಂದ್ರ ಬೋಸ್ ಅವರನ್ನು ಸೇರಿಸಿಕೊಂಡಿದ್ದಾರೆ ಎಂದು ವ್ಯಂಗ್ಯ ವಾಡಿದರು.