ಕಾಂಗ್ರೆಸ್ಸಿನ ಬಹುತೇಕರು ಬಿಜೆಪಿ ಜತೆಗಿದ್ದಾರೆ: ಡಾ.ಸಿದ್ದನಗೌಡ ಪಾಟೀಲ್
ಡಾ.ಸಿದ್ದನಗೌಡ ಪಾಟೀಲ್- ಸಿಪಿಐ ಹಿರಿಯ ನಾಯಕರು
ಬೆಂಗಳೂರು: ಕಾಂಗ್ರೆಸ್ ನಲ್ಲಿರುವ ಬಹುತೇಕ ನಾಯಕರು ಮತ್ತು ಕಾರ್ಯಕರ್ತರು ರಾಜಕೀಯವಾಗಿ ಕಾಂಗ್ರೆಸ್ ನಲ್ಲಿದ್ದಾರೆ. ಸಾಂಸ್ಕೃತಿಕವಾಗಿ ತಾತ್ವಿಕವಾಗಿ ಅವರು ಬಿಜೆಪಿ ಜೊತೆ ಇದ್ದಾರೆ. ಇಂದಲ್ಲ ನಾಳೆಯಾವುದಾದರೂ ಹುದ್ದೆ ಸಿಕ್ಕೀತು ಎಂಬ ನಿರೀಕ್ಷೆಯಿಂದ ಅವರು ಇದ್ದಾರೆಯೇ ಹೊರತು ಕಾಂಗ್ರೆಸ್ ನ ಮೂಲ ತತ್ವ ಏನಿತ್ತೋ ಅದು ಇಲ್ಲ. ಕಾಂಗ್ರೆಸ್ ಕೇಡರ್ ಬೇಸ್ ಭದ್ರಪಡಿಸದೆ ಕೋಮುವಾದಿಗಳನ್ನು ಫ್ಯಾಸಿಸ್ಟರನ್ನು ಎದುರಿಸಲು ಆಗದು' ಎಂದು ಸಿಪಿಐ ಹಿರಿಯ ನಾಯಕ ಡಾ.ಸಿದ್ದನಗೌಡ ಪಾಟೀಲ್ ಹೇಳಿದ್ದಾರೆ.
ಮಂಗಳವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ಸಮಾಜವಾದಿ ವೇದಿಕೆ ಆಯೋಜಿಸಿದ್ದ `ಭಾರತ್ ಜೋಡೋ ಯಾತ್ರೆ-ಬೆಂಬಲ ಮತ್ತು ನಿರೀಕ್ಷೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಫ್ಯಾಸಿಸಂ ಹಬ್ಬುತ್ತಿರುವುದು ರಾಜಭವನದಲ್ಲಿ ಅಲ್ಲ, ಬದಲಾಗಿ, ಹಳ್ಳಿಗಳ ಹೊಟೆಲುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಹಳ್ಳಿಗಳ ಕಟ್ಟೆ ಮೇಲೆ ಸುಳ್ಳುಗಳನ್ನು ಕಟ್ಟಿ ಅವರು ಹೇಳುತ್ತಿದ್ದಾರೆ. ಅದಕ್ಕೆ ಪ್ರತಿ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರೇ ಇಲ್ಲ. ಇತರ ಕೆಲವು ಕಾರ್ಯಕರ್ತರು ಸಾಹಿತಿಗಳು ಪ್ರಯತ್ನ ಮಾಡುತ್ತಿದ್ದಾರೆ. ಹೊಡೆದರೂ ಹೊಡೆಸಿಕೊಳ್ಳುತ್ತಾರೆ. ಅವರು ಮೋದಿ ವಿರುದ್ಧ ಮಾತನಾಡುತ್ತಾರೆ. ಕಾಂಗ್ರೆಸ್ ನವರು ಮಾತಾಡುವುದಿಲ್ಲ. ಮೀಡಿಯಾಗಳಲ್ಲಿ ಚರ್ಚೆಗೆ ಹೋದಾಗಲೂ ಅಲ್ಲಿ ನಾವು ಅವರ ವಿರುದ್ಧ ಮಾತಾಡುತ್ತಿದ್ದರೆ ಕಾಂಗ್ರೆಸ್ ನವರು ಸುಮ್ಮನೆ ಇರುತ್ತಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಆರೆಸ್ಸೆಸ್ ಅದೊಂದು ಮಷಿನರಿ. ಕಾಂಗ್ರೆಸ್ಸೂ ಒಂದು ಮಷಿನರಿಯನ್ನು ರೂಪಿಸದೇ ಇದ್ದರೆ ಇಂಥ ಸಾವಿರ ಸಮಾವೇಶ ಮಾಡಿದರೂ ಪ್ರಯೋಜನವಿಲ್ಲ. ಕಾರ್ನಾಟಕದಲ್ಲಿ ಕಾಂಗ್ರೆಸ್ಸು ಮೈತ್ರಿ ರಾಜಕಾರಣವನ್ನು ಬಿಟ್ಟಿದೆ. 78ರ ನಂತರ ಮೈತ್ರಿ ರಾಜಕಾರಣವನ್ನು ಇಲ್ಲಿ ಬಿಟ್ಟಿದೆ. ಮೈತ್ರಿ ಮಾಡಿಕೊಂಡರೆ ನಾವು ದುರ್ಬಲರಾಗುತ್ತೀವಿ ಅಥವಾ ದುರ್ಬಲರಾಗಿದ್ದೇವೆ ಎನ್ನುವ ಭಾವನೆ ಬರುತ್ತದೇನೊ ಎಂಬ ಅಭಿಪ್ರಾಯಕ್ಕೆ ಅವರು ಬಂದಿದ್ದಾರೆ. 75-78ರಲ್ಲಿ ಆಗಲೇ ಕಾಂಗ್ರೆಸ್ ಬಹುಮತದಲ್ಲಿರುವ ಸಂದರ್ಭದಲ್ಲೆ ಮೈತ್ರಿ ಮಾಡಿಕೊಂಡದ್ದಿತ್ತು. ಸಿಪಿಐ ಜೊತೆ ಮೈತ್ರಿ ಇತ್ತು. ಇವತ್ತು ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಮಾಡಿಕೊಳ್ಳುತ್ತದೆ. ತಮಿಳು ನಾಡಿನಲ್ಲಿ ಮೈತ್ರಿ ಆಗುತ್ತದೆ. ಬಿಹಾರದಲ್ಲಿ ಮೈತ್ರಿ ಸಾಧ್ಯವಾಗುತ್ತದೆ. ಎಲ್ಲಿ ನೀವು ದುರ್ಬಲರಾಗಿದ್ದೀರೊ ಅಲ್ಲಿ ಇವರಿಗೆ ಮೈತ್ರಿ ಬೇಕು. ಎಲ್ಲಿ ಪ್ರಬಲರಾಗಿದ್ದೀರೊ ಅಲ್ಲಿ ಯಾರನ್ನೂ ಕೇಳುವುದಿಲ್ಲ' ಎಂದರು.
'ಕಾಂಗ್ರೆಸ್ ನವರ ಸಮಸ್ಯೆ ಏನೆಂದರೆ ಅವರು ರಾಜಕಾರಣದ ಬಗ್ಗೆ ಮಾತ್ರ ಯೋಚನೆ ಮಾಡುವುದರಿಂದ ಅವರಿಗೆ ಈ ಫ್ಯಾಸಿಸಂನ ಥಿಯರಿ ಅರ್ಥವಾಗುತ್ತಿಲ್ಲ. ಆದರೆ ದಲಿತ ಸಂಘಟನೆಗಳು ರೈತ ಸಂಘಟನೆಗಳಿಗೆ ಈ ಆರೆಸ್ಸೆಸ್ ಪ್ರತಿ ಹೆಜ್ಜೆ ಅರ್ಥವಾಗುತ್ತದೆ. ಅವರ ಜೊತೆ ಕೂತು ಅವರ ಚಿಂತನೆ ಕಾಂಗ್ರೆಸ್ ಶಕ್ತಿ ಎರಡನ್ನೂ ಸೇರಿಸಿ ಅಲ್ಲಿಂದ ಕಾರ್ಯತಂತ್ರ ರೂಪಿಸಿದರೆ ಅವರನ್ನು ಎದುರಿಸಲು ಸಾಧ್ಯ' ಎಂದು ತಿಳಿಸಿದರು.
'ರೈತ ಚಳವಳಿ, ದಲಿತ ಚಳವಳಿ, ಕಮ್ಯುನಿಸ್ಟ್ ಚಳವಳಿಗಳನ್ನು ಕಾಂಗ್ರೆಸ್ ಗೆ ಬೆಂಬಲಿಸುವುದಕ್ಕೇ ಇವೆ ಎಂದು ಕಾಂಗ್ರೆಸ್ ಭಾವಿಸುವುದು ಬೇಡ. ನೀವು ಅಧಿಕಾರಕ್ಕೆ ಬಂದಾಗ ಈ ವರ್ಗಗಳಿಗೆ ಎಷ್ಟು ನೆರವಾಗಿದ್ದೀರಿ. ಇಲ್ಲಿನ ಯಾರನ್ನಾದರೂ ವಿಧಾನ ಪರಿಷತ್ತಿಗೆ ಆರಿಸಿದ್ದೀರಾ? ಜಿ.ಪಂ. ಅಧ್ಯಕ್ಷರನ್ನಾಗಿ ಮಾಡಿದ್ದೀರಾ?. ಇದೊಂದು ರಾಜಕೀಯ ನಡೆ ಆಗಬೇಕು ಅವರು ಎಲ್ಲ ಸಾಂಸ್ಕೃತಿಕ ಮಷಿನರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳು ಹಿಂದಿನಂತಲ್ಲ., ಸಾಹಿತ್ಯ ಪರಿಷತ್, ಅಕಾಡೆಮಿ ಟ್ರಸ್ಟ್ ಗಳು ಎಲ್ವನ್ನೂ ಅವರು ವಶಪಡಿಸಿಕೊಂಡಿದ್ದಾರೆ. ಯಾವ್ಯಾವ ಡೆಮಾಕ್ರಟಿಕ್ ಸ್ಪೇಸ್ ಇತ್ತೊ ಅವೆಲ್ಲವನ್ನೂ ಅವರು ವಶಪಡಿಸಿಕೊಂಡಿದ್ದಾರೆ' ಎಂದು ದೂರಿದರು.
'ನೀವು ಕಾಂಗ್ರೆಸ್ ನವರು ನಿಮ್ಮ ಅಧಿಕಾರ ಹೋದಮೇಲೆ ಬಸನ್ನು ಅಲ್ಲೇ ಬಿಟ್ಟು ಇಳಿದುಹೋಗಿಬಿಡುತ್ತೀರಿ. ಬಿಜೆಪಿಯವರು ಅಧಿಕಾರಕ್ಕೆ ಬಂದಮೇಲೆ ತಾವು ಅಧಿಕಾರದಿಂದ ಹೋದರೂ ಈ ಬಸ್ ಯಾವ ಕಡೆ ಹೋಗಬೇಕೆಂದು ತೀರ್ಮಾನ ಮಾಡಿಯೇ ಹೋಗುತ್ತಾರೆ. ಅಂದರೆ ಆ ಡ್ರೈವರ್ನನ್ನೂ ಸರಿಮಾಡಿ ಹೋಗುತ್ತಾರೆ' ಎದು ಟೀಕಿಸಿದರು.
'ಹಲವಾರು ಸಂದರ್ಭದಲ್ಲಿ ಹೇಳಿದ್ದೇನೆ. ದಲಿತ ಚಳವಳಿಗಳು ರೈತ ಚಳವಳಿಗಳು ಕಾರ್ಮಿಕ ಚಳವಳಿಗಳು ಎಡಪಕ್ಷಗಳು ಅಥವಾ ಪ್ರಗತಿಪರ ಸಾಹಿತಿಗಳು ಚಿಂತಕರು ಇಂಥವರನ್ನೆಲ್ಲ ಕರೆದು ಚಳವಳಿ ಜೊತೆ ಒಂದು ಸಂಬಂಧ ಇಟ್ಟುಕೊಳ್ಳಿ ಅಂತ. ಕಾಂಗ್ರೆಸ್ ಗೆ ಒಂದು ಇತಿಹಾಸ ಇದೆ. ಉಳುವವನೇ ಹೊಲದೊಡೆಯ ಕಾನೂನು ತಂದಿದ್ದು ಕಾಂಗ್ರೆಸ್. ಭೂಸ್ವಾಧೀನ ಕಾನೂನಿಗೆ ತಿದ್ದುಪಡಿ ತಂದು ರೈತರನ್ನು ಉಳಿಸಿದ್ದು ಕಾಂಗ್ರೆಸ್. ಇದನ್ನು ಹೇಳುವುದಕ್ಕೇನಾಗಿದೆ? ಜನರಿಗೆ ಹೇಳಿ ಮೋದಿ ಸರ್ಕಾರ ರೈತವಿರೋಧಿ ಸರ್ಕಾರ ಅನ್ನುವುದನ್ನು ಮನದಟ್ಟು ಮಾಡಿ. ಕಾರ್ಮಿಕ ವಿರೋಧಿ, ದಲಿತ ವಿರೋಧಿ. ಮಹಿಳಾ ವಿರೋಧಿ ಸರ್ಕಾರ ಅದೆನ್ನುವುದನ್ನು ತಿಳಿಹೇಳುವ ಅಭಿಯಾನವನ್ನು ನೀವು ಮಾಡಬೇಕು. ನಾವೂ ಮಾಡಬೇಕು .ಆಗ ಮಾತ್ರ ನಾವು ಅವರನ್ನು ಎದುರಿಸಲು ಸಾಧ್ಯ' ಎಂದು ತಿಳಿಸಿದರು.
'ಗಾಂಧೀಜಿ ಸ್ವಾವಲಂಬನೆ, ಸ್ವಾಭಿಮಾನದ ಹಿನ್ನೆಲೆಯಲ್ಲಿ ದಂಡಿಯಾತ್ರೆ ಮಾಡಿದ್ದರು. ಇವತ್ತು ನಾವು ಜಾತ್ಯತೀತ ರಾಷ್ಟ್ರೀಯ ಐಕ್ಯತೆ ಸಾಧಿಸುವುದಕ್ಕೆ ಮತ್ತು ದಲಿತರು ರೈತರು ಕಾರ್ಮಿಕರು ಎಲ್ಲ ಜನಸಮೂಹದ ಮೂಲಭೂತ ಹಿತಾಸಕ್ತಿ ಕಾಪಾಡುವುದಕ್ಕೆ ಹೊರಟಿದ್ದೀವಿ ಎಂಬ ಸಂದೇಶವನ್ನು ಈ ಜೋಡೋ ಯಾತ್ರೆ ಕೊಡಬೇಕು. ಅದಕ್ಕಾಗಿ ಎಲ್ಲ ಚಳವಳಿಗಳೊಂದಿಗೆ ಸೇರಿ ಸಮಾಲೋಚಿಸಿ ನೀವು ಈ ಆಂದೋಲನವನ್ನು ಮುಂದುವರಿಸಬೇಕು' ಎಂದು ಸಲಹೆ ನೀಡಿದರು.