ಲಂಚದ ಹಣ ವಾಪಸ್ ಮಾಡುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಕೆಎಎಸ್ ಅಧಿಕಾರಿಗಳು
ಸಾಂದರ್ಭಿಕ ಚಿತ್ರ
ಬೆಂಗಳೂರು: ಲಂಚದ ಹಣವನ್ನು ದೂರುದಾರರಿಗೆ ವಾಪಸ್ ಮಾಡುವಾಗ ಕೆಎಎಸ್ ಅಧಿಕಾರಿಗಳಿಬ್ಬರನ್ನು ಬುಧವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ ಎ.ಬಿ. ವಿಜಯಕುಮಾರ್ ಮತ್ತು ಅವರ ಭೂಮಾಪಕ ರಘುನಾಥ್ ಬಂಧಿತರು ಎಂದು ತಿಳಿದು ಬಂದಿದೆ.
ಲಗ್ಗೆರೆಯಲ್ಲಿರುವ ಪುರಾತನವಾದ ದುಗ್ಗಲಮ್ಮ ದೇವಸ್ಥಾನದ 0.30 ಕುಂಟೆ ಜಮೀನಿಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಎನ್ಓಸಿಯನ್ನು ನೀಡಲು ಕೆಐಎಡಿಬಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಎಬಿ ವಿಜಯ್ ಕುಮಾರ್ ಮತ್ತು ವಿಶೇಷ ಭೂಸ್ವಾಧೀನ ಅಧಿಕಾರಿ 2 ರಘುನಾಥ್ ಅವರು, 2.50 ಲಕ್ಷ ಲಂಚವನ್ನು ಸ್ವೀಕರಿಸಿದ್ದರೆನ್ನಲಾಗಿದೆ. ಬಳಿಕ ಲಂಚವನ್ನು ಪಡೆದು ನಿರಪೇಕ್ಷಣಾ ಪತ್ರವನ್ನು ನೀಡಿದ್ದರು.
ಈ ಕುರಿತು ಅರ್ಜಿದಾರರು ಕೆಐಎಡಿಬಿ ಉಪ ಆಯುಕ್ತರಿಗೆ ದೂರು ನೀಡಿದ್ದು, ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸುತ್ತಿದ್ದಂತೆ ದೂರುದಾರರನ್ನು ಸಂಪರ್ಕಿಸಿದ್ದ ಆರೋಪಿಗಳು, ಈ ದೂರನ್ನು ಹಿಂಪಡೆಯಲು ತಾವು ಲಂಚವಾಗಿ ಪಡೆದಿದ್ದ 2.50 ಲಕ್ಷದ ಜೊತೆ 50 ಸಾವಿರ ರೂ. ಹೆಚ್ಚುವರಿ ಹಣವನ್ನು ಸೇರಿಸಿ ಒಟ್ಟು 3 ಲಕ್ಷ ರೂಪಾಯಿ ಹಣವನ್ನು ನೀಡುವ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ ಎಂದು ಲೋಕಾಯುಕ್ತದ ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ PAYCM ಪೋಸ್ಟರ್ ಪ್ರಕರಣ: ಹಲವು ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ