ಸೇನೆಯ ಮೇಜರ್ ನಿಂದ 'ಹಲ್ಲೆಗೊಳಗಾಗಿದ್ದ' ಫುಡ್ ಡೆಲಿವರಿ ಏಜಂಟ್ ಕೋರ್ಟಿಗೆ ಮೊರೆ: ಎಫ್ಐಆರ್ ದಾಖಲು
ಹೊಸದಿಲ್ಲಿ: ಗುರ್ಗಾಂವ್ನ ಸೊಸೈಟಿಯೊಂದರಲ್ಲಿ ಕಳೆದ ವರ್ಷ ಸೇನೆಯ ಮೇಜರ್(Army Major) ಒಬ್ಬರಿಂದ ಹಲ್ಲೆಗೊಳಗಾಗಿದ್ದ ಫುಡ್ ಡೆಲಿವರಿ ಎಕ್ಸಿಕ್ಯುಟಿವ್(Food delivery executive) ಒಬ್ಬರು ತಾವು ಸಲ್ಲಿಸಿದ್ದ ಪೊಲೀಸ್ ದೂರಿನಿಂದ ಯಾವುದೇ ಪ್ರಯೋಜನವಾಗದೇ ಇದ್ದಾಗ ಈಗ ಕೋರ್ಟ್ ಮೆಟ್ಟಿಲೇರಿದ್ದು ಇದರ ಬೆನ್ನಲ್ಲೇ ಎಫ್ಐಆರ್ ದಾಖಲಾಗಿದೆ ಎಂದು indianexpress.com ವರದಿ ಮಾಡಿದೆ.
ಇಪ್ಪತ್ತೇಳು ವರ್ಷದ ಸೋನು ಮೇಲೆ ಕಳೆದ ವರ್ಷದ ಸೆಪ್ಟೆಂಬರ್ 9ರಂದು ಗುರ್ಗಾಂವ್ನ ಬೆಸ್ಟೆಕ್ ಪಾರ್ಕ್ ವೀವ್ ಆನಂದ್ ಸೊಸೈಟಿಯಲ್ಲಿ ಹಲ್ಲೆಗೈದ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲಾ ನ್ಯಾಯಾಲಯವು ಖೇರ್ಕಿ ದೌಲ ಪೊಲೀಸ್ ಠಾಣೆಗೆ ಸೂಚನೆ ನೀಡಿದ ನಂತರ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಈ ವರ್ಷದ ಜೂನ್ ತಿಂಗಳಿನಲ್ಲಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ರಾಜಸ್ಥಾನ ಮೂಲದ ಸೋನು ತಾನು ಸೆಕ್ಟರ್ 81 ನಲ್ಲಿರುವ ಸೊಸೈಟಿಗೆ ಆಹಾರ ಡೆಲಿವರಿ ಮಾಡಲು ತೆರಳಿದಾಗ ರಾತ್ರಿ 9.45 ಆಗಿತ್ತು ಹಾಗೂ ಅಲ್ಲಿನ ಸೆಕ್ಯುರಿಟಿ ಗಾರ್ಡ್ ಲಿಫ್ಟ್ ಬಳಸುವಂತೆ ಸೂಚಿಸಿದ್ದ. ಆದರೆ ಲಿಫ್ಟ್ ಬಳಸುತ್ತಿರುವಾಗ ಅದು ಕಟ್ಟಡದ ನಿವಾಸಿಗಳಿಗೆ ಮೀಸಲು ಇನ್ನೊಂದು ಲಿಫ್ಟ್ ಬಳಸುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದ್ದ. ಆಗ ತಳ ಅಂತಸ್ತಿನ ಫ್ಲ್ಯಾಟ್ ನಿವಾಸಿಯಾಗಿದ್ದ ಮೇಜರ್ ಅಲ್ಲಿಗೆ ಬಂದು ಎಷ್ಟು ಧೈರ್ಯದಿಂದ ಇನ್ನೊಂದು ಲಿಫ್ಟ್ ಬಳಸುತ್ತಿರುವೆ ಎಂದು ಸೋನುವನ್ನು ನಿಂದಿಸಿ ಆತನನ್ನು ಗವಾರ್ (ಅನಕ್ಷರಸ್ಥ) ಎಂದು ದೂರಿದ್ದರು ಎಂದು ಆರೋಪಿಸಲಾಗಿದೆ. ನಂತರ ಆರೋಪಿ ಸೋನುಗೆ ಕಪಾಳಮೋಕ್ಷಗೈದು ಜೈಲಿಗಟ್ಟುವುದಾಗಿ ಬೆದರಿಸಿದ್ದರೆಂದು ಆರೋಪಿಸಲಾಗಿದ್ದು ಅಲ್ಲಿಯೇ ತನಗೆ 45 ನಿಮಿಷ ದಿಗ್ಬಂಧನ ವಿಧಿಸಲಾಗಿತ್ತು ಎಂದು ಸೋನು ಆರೋಪಿಸಿದ್ದಾರೆ.
ಘಟನೆಯಲ್ಲಿ ತನಗೆ ಕಿವಿಗೆ ಗಾಯವಾಗಿತ್ತು ಎಂದು ಸೋನು ಹೇಳಿದ್ದಲ್ಲದೆ ಇದು ತನ್ನ ಸ್ವಾಭಿಮಾನದ ಹೋರಾಟವಾಗಿತ್ತು ಎಂದಿದ್ದಾರೆ. ಅದೇ ರಾತ್ರಿ ದೂರು ಸಲ್ಲಿಸಿದ್ದರೂ ಎಫ್ಐಆರ್ ದಾಖಲಾಗಿರಲಿಲ್ಲ, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಫಲ ನೀಡಿರಲಿಲ್ಲ ಎಂದಿದ್ದಾರೆ.
ಪದವೀಧರನಾಗಿರುವ ಸೋನು ಈ ಘಟನೆ ನಂತರ ಫುಡ್ ಡೆಲಿವರಿ ಉದ್ಯೋಗ ತೊರೆದಿದ್ದ. ಆದರೆ ಅವರು ಸಲ್ಲಿಸಿದ್ದ ದೂರಿನಲ್ಲಿ ಸೇನೆಯ ಮೇಜರ್ ಹೆಸರು ಉಲ್ಲೇಖಿಸಲಾಗಿಲ್ಲ. ಆರೋಪಿ ಮಾತ್ರ ತನ್ನ ವಿರುದ್ಧದ ಆರೋಪ ನಿರಾಕರಿಸಿದ್ದಾರೆ. ದೂರುದಾರ ಡೆಲಿವರಿ ವ್ಯಕ್ತಿಯಾಗಿರಲಿಲ್ಲ ಹಾಗೂ ನಕಲಿ ಕಾರ್ಡ್ ಬಳಸಿ ಅನಧಿಕೃತ ಪ್ರೇಶಕ್ಕೆ ಯತ್ನಿಸಿದ್ದ ಎಂದು ದೂರಿದ್ದಾರೆ.
ತಾನು ಕೂಡ ದೂರು ನೀಡಿದ್ದರೂ ಪೊಲೀಸರು ದೂರು ದಾಖಲಿಸಿಲ್ಲ, ಇದು ತನ್ನ ಮಾನಹಾನಿಗೈಯ್ಯುವ ಮತ್ತು ಹಣ ವಸೂಲಿ ಮಾಡುವ ಯತ್ನ ಎಂದೂ ಅವರು ಆರೋಪಿಸಿದ್ದಾರೆ.