ಕಾಂಗ್ರೆಸ್ ನಲ್ಲಿ ಒಗ್ಗಟ್ಟಿಲ್ಲ ಎಂಬುದು ಬಿಜೆಪಿಯ ಅಪಪ್ರಚಾರದ ಅಜೆಂಡಾ: ಯು.ಟಿ.ಖಾದರ್
ಮಂಗಳೂರು, ಸೆ.24: ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಲ್ಲಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಒಗ್ಗಟ್ಟಿನಲ್ಲಿದ್ದಾರೆ. ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂಬುದು ಬಿಜೆಪಿಯ ಅಪಪ್ರಚಾರದ ಅಜೆಂಡಾ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಸರಕಾರದ ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ. ಅದಕ್ಕಾಗಿ ಕಾರ್ಯಕರ್ತರು ಮತ್ತು ಜನರ ಮಧ್ಯೆ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಕಾಂಗ್ರೆಸ್ ನ ಶಾಸಕರು, ಸಂಸದರು ಪಕ್ಷ ಬಿಟ್ಟು ಹೋದರೂ ತತ್ವಾದರ್ಶ ಬದಲಾಗಲ್ಲ. ನಮ್ಮ ತತ್ವ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ, ಇಡೀ ದೇಶಕ್ಕೆ ಒಂದೇ ಆಗಿದೆ. ಕಾಂಗ್ರೆಸ್ ಮುಖಂಡರು ಮತ್ತು ನಾಯಕರು ತಪ್ಪಿದರೂ ಪಕ್ಷ ಯಾವತ್ತೂ ಸಿದ್ಧಾಂತ ತಪ್ಪಿಲ್ಲ. ಏಕ್ ಭಾರತ್ ಶ್ರೇಷ್ಠ ಭಾರತ್ ಅಂತ ಮಹಾತ್ಮಾ ಗಾಂಧಿಯವರೇ ಹೇಳಿದ್ದಾರೆ ಎಂದು ಖಾದರ್ ನುಡಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಕೇರಳದಿಂದ ಯಶಸ್ವಿಯಾಗಿ ಸಾಗುತಿದೆ. ಈ ತಿಂಗಳ ಕೊನೆಗೆ ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ಬರಲಿದೆ. ಇದೊಂದು ಐತಿಹಾಸಿಕ ಪಾದಯಾತ್ರೆ. ಸರ್ವ ಜನರನ್ನು ಬೆಸೆಯುವುದು, ಆತಂಕದಲ್ಲಿ ಇರುವ ಸರ್ವರಿಗೂ ಆತ್ಮವಿಶ್ವಾಸ ನೀಡುವುದು ಈ ಯಾತ್ರೆಯ ಉದ್ದೇಶ ಎಂದು ಅವರು ಹೇಳಿದರು.
ಪೇ ಸಿಎಂ ಪೋಸ್ಟರ್ ಅಂಟಿಸುವ ಅಭಿಯಾನ ನಾವು ಮಾಡಿದ್ದೇವೆ ಎಂದ ಖಾದರ್, ಕಾಂಗ್ರೆಸ್ ನವರು ಮಾಡಿದರೆ ತಪ್ಪು, ಬಿಜೆಪಿಯವರು ಸೋಶಿಯಲ್ ಮೀಡಿಯಾದಲ್ಲಿ ಏನು ಬೇಕಾದರೂ ಹಾಕಬಹುದೇ ? ಎಂದು ಪ್ರಶ್ನಿಸಿದರು.
ರಾಹುಲ್, ಸೋನಿಯಾ, ಸಿದ್ದರಾಮಯ್ಯ ಬಗ್ಗೆ ಇವರು ಸೋಶಿಯಲ್ ಮೀಡಿಯಾದಲ್ಲಿ ಏನೇನೂ ಹಾಕಿಲ್ವಾ? ಆಗ ಯಾಕೆ ತನಿಖೆ ಮಾಡಿಲ್ಲ, ಆ ಬಗ್ಗೆಯೂ ತನಿಖೆ ಆಗಲಿ ಎಂದು ಖಾದರ್ ಒತ್ತಾಯಿಸಿದರು.