ನ್ಯಾಯಾಲಯ ಕಲಾಪ ನೇರ ಪ್ರಸಾರಕ್ಕೆ ಶೀಘ್ರ ಸ್ವಂತ ವೇದಿಕೆ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಸೆ. 26: ಎಲ್ಲಾ ಸಂವಿಧಾನಿಕ ಪೀಠದ ಕಲಾಪದ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಶೀಘ್ರದಲ್ಲಿ ಸ್ವಂತ ವೇದಿಕೆ ಹೊಂದಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಸೋಮವಾರ ಹೇಳಿದ್ದಾರೆ.
ನ್ಯಾಯಾಲಯದ ಕಲಾಪಗಳ ನೇರ ಪ್ರಸಾರದ ಹಕ್ಕು ಸ್ವಾಮ್ಯವನ್ನು ಯುಟ್ಯೂಬ್ನಂತಹ ಖಾಸಗಿ ವೇದಿಕೆಗಳಿಗೆ ಒಪ್ಪಿಸಬಾರದು ಎಂದು ಬಿಜೆಪಿ ನಾಯಕ ಕೆ.ಎನ್. ಗೋವಿಂದಾಚಾರ್ಯ ಪರ ವಕೀಲರು ವಾದ ಮಂಡಿಸಿದರು.
ಇದಕ್ಕೆ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಹಾಗೂ ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್, ಜೆ.ಬಿ. ಪಾರ್ದೀವಾಲ ಅವರನ್ನು ಒಳಗೊಂಡ ಪೀಠ ನ್ಯಾಯಾಲಯ ಸ್ವಂತ ವಾಹಿನಿ ಹೊಂದಲಿದೆ ಎಂದು ಹೇಳಿತು.
ಗೋವಿಂದಾಚಾರ್ಯ ಅವರು ಸಲ್ಲಿಸಿದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 17ರಂದು ನಡೆಸಲು ಪಟ್ಟಿ ಮಾಡಿದ ಪೀಠ, ‘‘ಇದು ಆರಂಭಿಕ ಹಂತ. ಕಲಾಪದ ನೇರ ಪ್ರಸಾರಕ್ಕೆ ನಾವು ನಮ್ಮ ಸ್ವಂತ ಪ್ರಸಾರ ವೇದಿಕೆ ಹೊಂದಲಿದ್ದೇವೆ. ಹಕ್ಕು ಸ್ವಾಮ್ಯದ ವಿಷಯದ ಬಗ್ಗೆ ಕೂಡ ನಾವು ನೋಡಿಕೊಳ್ಳಲಿದ್ದೇವೆ’’ ಎಂದು ಹೇಳಿತು.
Next Story