ಮಗುವಿಗೆ ಜನ್ಮ ನೀಡುವ ಕುರಿತು ಪತ್ನಿಯನ್ನು ಪತಿ ಬಲವಂತಪಡಿಸುವ ಹಾಗಿಲ್ಲ, ಅದು ಆಕೆಯ ಆಯ್ಕೆ: ಹೈಕೋರ್ಟ್
ಮುಂಬೈ: ಮಗುವಿಗೆ ಜನ್ಮ ನೀಡುವ ಕುರಿತಂತೆ ಮಹಿಳೆಯೊಬ್ಬಳಿಗೆ ಬಲವಂತಪಡಿಸುವ ಹಾಗಿಲ್ಲ ಎಂದು ಬಾಂಬೆ ಹೈಕೋರ್ಟಿನ(Bombay High Court) ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಅತುಲ್ ಚಂದೂರ್ಕರ್ ಮತ್ತು ಊರ್ಮಿಳಾ ಜೋಷಿ ಪಾಲ್ಕೆ ಹೇಳಿದ್ದಾರೆ ಎಂದು livelaw.in ವರದಿ ಮಾಡಿದೆ.
ಮಹಿಳೆಯೊಬ್ಬಳು ತನ್ನ ಪತಿಯ ಅನುಮತಿಯಿಲ್ಲದೇ ಗರ್ಭಪಾತ ಮಾಡಿಸಿಕೊಂಡರೆ ಅದು ಹಿಂದು ವಿವಾಹ ಕಾಯಿದೆಯ ಅನುಸಾರ ಕ್ರೂರತೆ ಎಂದು ಪರಿಗಣಿಸಬಹುದೇ ಎಂಬ ಪ್ರಶ್ನೆಯನ್ನು ನ್ಯಾಯಾಲಯದ ಮುಂದಿರಿಸಲಾಗಿತ್ತು.
ಸಂತಾನೋತ್ಪತ್ತಿ ಕುರಿತಂತೆ ಮಹಿಳೆ ಹೊಂದಿರುವ ಆಯ್ಕೆಯು ಸಂವಿಧಾನದ 21ನೇ ವಿಧಿಯಲ್ಲಿ ಅಡಕವಾಗಿರುವ ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂದು ನ್ಯಾಯಾಲಯ ಹೇಳಿದೆಯಲ್ಲದೆ.
ಪತ್ನಿ ತನ್ನ ಅನುಮತಿಯಿಲ್ಲದೆ ಗರ್ಭಪಾತ ಮಾಡಿಸಿಕೊಂಡಿದ್ದಾಳೆಂದು ಹೇಳಿ ಈ ಕಾರಣಕ್ಕಾಗಿ ಹಿಂದು ವಿವಾಹ ಕಾಯಿದೆಯ ಸೆಕ್ಷನ್ 13(1)(ಐಎ) ಮತ್ತು 13(1)(ಐಬಿ) ಅನ್ವಯ ವಿಚ್ಛೇದನಕ್ಕಾಗಿ ವ್ಯಕ್ತಿಯೊಬ್ಬ ಅರ್ಜಿ ಸಲ್ಲಿಸಿದ್ದರೆ ಸಂತಾನೋತ್ಪತ್ತಿ ಕುರಿತಂತೆ ತನಗೆ ಆಯ್ಕೆಯ ಹಕ್ಕಿದೆ ಎಂಬ ಪತ್ನಿಯ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ.
ಈ ನಿರ್ದಿಷ್ಟ ಪ್ರಕರಣದಲ್ಲಿ 47 ವರ್ಷದ ವೃತ್ತಿಯಲ್ಲಿ ಶಿಕ್ಷಕನಾಗಿರುವ ಪತಿ, ತನ್ನಂತೆಯೇ ಶಿಕ್ಷಿಯಾಗಿರುವ ಪತ್ನಿಯ ಮೇಲೆ ಕ್ರೂರತೆ ಮತ್ತು ತನ್ನನ್ನು ತ್ಯಜಿಸಿದ ಆರೋಪ ಹೊರಿಸಿ ವಿಚ್ಛೇದನಕ್ಕೆ ಅರ್ಜೀ ಸಲ್ಲಿಸಿದ್ದ. 2001 ರಲ್ಲಿ ವಿವಾಹವಾದಂದಿನಿಂದ ಪತ್ನಿ ಉದ್ಯೋಗಕ್ಕೆ ಹೋಗುವುದನ್ನು ಮುಂದುವರಿಸಲು ಬಯಸಿದ್ದಳು ಹಾಗೂ ಎರಡನೇ ಬಾರಿ ಗರ್ಭವತಿಯಾದಾಗ ತನ್ನ ಅನುಮತಿಯಿಲ್ಲದೆ ಗರ್ಭಪಾತ ಮಾಡಿಸಿಕೊಂಡಿದ್ದು ತನ್ನ ಪಾಲಿಗೆ ಕ್ರೂರತೆಯಾಗಿದೆ. ಆಕೆ ತನ್ನ ಪುತ್ರನೊಂದಿಗೆ 2004 ರಲ್ಲಿ ತನ್ನನ್ನು ತ್ಯಜಿಸಿದ್ದಳು ಎಂದೂ ಆತ ಹೇಳಿದ್ದ.
ಪತ್ನಿ ತನ್ನ ವಕೀಲರ ಮೂಲಕ ವಾದ ಮಂಡನೆಯಲ್ಲಿ ತಾನು ಒಂದು ಮಗುವನ್ನು ಹೆತ್ತಿದ್ದಾಗಿ ಹಾಗೂ ಎರಡನೇ ಬಾರಿ ಗರ್ಭವತಿಯಾದಾಗ ಅನಾರೋಗ್ಯವಿಲ್ಲದೆ ಗರ್ಭಪಾತವಾಯಿತು ಹಾಗೂ ಪತಿ ತನ್ನನ್ನು ಮನೆಗೆ ವಾಪಸ್ ತರಲು ಅಥವಾ ಪುತ್ರನ ಖರ್ಚಿಗೆ ಹಣ ನೀಡಲು ಮುಂದೆ ಬಂದಿಲ್ಲ, ಪತಿಯ ಸಹೋದರಿಯರು ಸದಾ ತನ್ನ ಶೀಲ ಶಂಕಿಸುತ್ತಿದ್ದರು ಎಂದೂ ಆಕೆ ದೂರಿದ್ದಳು.
ಒಂದು ಪಕ್ಷ ಹೇಳಿದ ಮಾತ್ರಕ್ಕೆ ಅವರ ವಿವಾಹ ಮುರಿದು ಬಿದ್ದಿದೆ ಎಂದು ಹೇಳಲು ಸಾಧ್ಯವಿಲ್ಲ, ಮೇಲಾಗಿ ಮಹಿಳೆ ಅದಾಗಲೇ ಒಂದು ಮಗುವನ್ನು ಹೆತ್ತಿರುವುದರಿಂದ ಹಾಗೂ ವ್ಯಕ್ತಿ ತನ್ನ ಪತ್ನಿಯ ಮೇಲೆ ಗರ್ಭಪಾತ ಕುರಿತಂತೆ ಮಾಡಿದ ಆರೋಪವನ್ನು ಒಪ್ಪಿಕೊಂಡರೂ ಅದನ್ನು ಕ್ರೂರತೆ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿದೆ.