ಚುನಾವಣೆ ಸಂದರ್ಭದಲ್ಲಿ ಎಡವಿ ಬಿದ್ದು ಮೃತಪಟ್ಟರೂ ಹಿಂದೂ ಹತ್ಯೆ ಎಂಬ ಹಣೆಪಟ್ಟಿ: ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು, ಅ. 24: ‘ಚುನಾವಣಾ ಸಂದರ್ಭ ಬಂತು ಎಂದಾಕ್ಷಣ ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ, ತೊಡುವ ಬಟ್ಟೆ, ಆಡುವ ಮಾತು ಎಲ್ಲವೂ ಕೂಡಾ ಏಕಾಏಕಿ ಧರ್ಮದ ವ್ಯಾಪ್ತಿಗೆ ಬಂದು ಬಿಡುತ್ತದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಸೋಮವಾರ ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ‘ಕೊರೋನ ಸೋಂಕಿನ ಸಂದರ್ಭದಲ್ಲಿ ಹೂಳುವುದಕ್ಕೂ ಜಾಗವಿಲ್ಲದೆ ನದಿಯ ದಡದಲ್ಲಿ, ಸಾರ್ವಜನಿಕ ಚಿತಾಗಾರದಲ್ಲಿ ಲೆಕ್ಕವಿಲ್ಲದಷ್ಟು ಜನರು ದಹಿಸಿ ಹೋದಾಗಲೂ ಲೆಕ್ಕಕ್ಕೆ ಬಾರದ ಧರ್ಮವು ಚುನಾವಣೆ ಸಂದರ್ಭದಲ್ಲಿ ಎಡವಿ ಬಿದ್ದು ಸತ್ತರೂ ಹಿಂದೂ ಹತ್ಯೆ ಎಂಬ ಹಣೆಪಟ್ಟಿಯನ್ನು ಪಡೆಯುತ್ತವೆ' ಎಂದು ದೂರಿದ್ದಾರೆ.
‘ಇನ್ನು ಪ್ರತಿದಿನ ತಣ್ಣಗೆ ನಡೆಯುತ್ತಿದ್ದ ‘ಕೋಲ' ಎಂಬ ಜನಪದೀಯರ ಆಚರಣೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ನಮ್ಮ ಅಂತರಾಷ್ಟ್ರೀಯ ಧರ್ಮ ರಕ್ಷಕರು, ಒಂದು ಸಿನಿಮಾದಲ್ಲಿ ಆಕರ್ಷಕವಾಗಿ ತೋರಿಸಿದರು ಎಂಬ ಕಾರಣಕ್ಕೆ ಅದನ್ನು ಹಿಂದೂಧರ್ಮದ ಭಾಗ ಎಂದು ಬಿಂಬಿಸುತ್ತಾ ವಿಪರೀತ ಪ್ರಚಾರ ಪಡೆದುಕೊಳ್ಳುತ್ತಿರುವ ಧರ್ಮ ರಕ್ಷಕರು ಇದೇ ಚಿತ್ರದ ಪ್ರಮುಖ ಪಾತ್ರಧಾರಿಯಾದ ಕಿಶೋರ್ ಅವರು ಹೇಳುವಂತೆ ಕೋಲ ಮಾಡುವ ಅಸ್ಪೃಶ್ಯರನ್ನು ಜಾತಿಯ ಕಾರಣಕ್ಕೆಮನೆಯ ಒಳಗೆ ಬಿಟ್ಟುಕೊಳ್ಳದೇ ಇರುವ ಬಗ್ಗೆ ಏನನ್ನೂ ಮಾತಾಡುವುದಿಲ್ಲ ಎಂಬುದು ಬಹಿರಂಗ ಸತ್ಯ' ಎಂದು ಅವರು ಟೀಕಿಸಿದ್ದಾರೆ.
‘ಈ ದೇಶದ ಜಾತೀಯತೆ ಮತ್ತು ಉಳಿಗಮಾನ್ಯ ವರ್ಗಗಳ ಆಮಿಷ ಮತ್ತು ಕುತಂತ್ರದ ರಾಜಕಾರಣವನ್ನು ಚೆನ್ನಾಗಿಯೆ ವಿವರಿಸುತ್ತಾ ಒಂದು ಮಟ್ಟಿಗೆ ಬುಡಕಟ್ಟು ವರ್ಗಗಳ ಸಾಮಾಜಿಕ ಸ್ಥಿತಿಗತಿಯನ್ನು ಚೆನ್ನಾಗಿಯೇ ವಿವರಿಸಿರುವ ‘ಕಾಂತಾರ' ಎಂಬ ಚಿತ್ರದ ಮೂಲ ಆಶಯ ಮತ್ತು ಅದು ಸೃಷ್ಟಿಸಿಬಿಡಬಹುದಾದ ಜನಪ್ರಿಯ ಸಾಮಾಜಿಕ ತಿಳುವಳಿಕೆಗೆ ಹೆದರಿ ಬಹಳಷ್ಟು ಕುತಂತ್ರದಿಂದ ಅದನ್ನು ಹಿಂದೂ ಧರ್ಮದ ಆಚರಣೆಯ ಸಿನಿಮಾ ಎಂದು ಬಿಂಬಿಸುತ್ತಿದ್ದಾರೆ. ನನ್ನ ಪ್ರಕಾರ ಇವರು ಈ ಸಿನಿಮಾಗೆ ಪ್ರಚಾರ ಕೊಡುತ್ತಿರುವುದು ಒಳ್ಳೆಯದೇ. ಏಕೆಂದರೆ ಈ ಚಿತ್ರದ ಮೂಲ ತಿಳುವಳಿಕೆಯ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡಿ, ಅದರ ವಾಸ್ತವ ಉದ್ದೇಶವನ್ನು ಮುನ್ನಲೆಗೆ ತಂದರೆ ಆಗ ಅದು ಈ ಹಿಂದುತ್ವ ವಾದಿಗಳು ಹೊಸೆದ ಕುತಂತ್ರದ ಹಗ್ಗಕ್ಕೆ ಅವರೇ ಕೊರಳು ಒಡ್ಡಿದಂತೆ ಆಗುತ್ತದೆ' ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಶಾಸಕ ನಾಗೇಂದ್ರ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ ಪ್ರೀತಂ ಗೌಡ
‘ಇನ್ನು ಈ ಜನಪ್ರಿಯ ಸಮಾಜಮುಖಿ ಚಿತ್ರದ ತಿಳುವಳಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಧಮಾರ್ಂದರಕುತಂತ್ರದ ಬಗ್ಗೆ ಈ ಚಿತ್ರದ ಮುಖ್ಯ ಪಾತ್ರಧಾರಿಯೇ ನೇರವಾಗಿ ಮಾತನಾಡಿರುವುದು ಆರೋಗ್ಯಕರ ಬೆಳವಣಿಗೆಗಳಲ್ಲಿ ಒಂದಾಗಿದೆ. ಬರಿಯ ಸೈದ್ಧಾಂತಿಕ ಸಂಘರ್ಷದಲ್ಲೇ ಶಕ್ತಿ ಕಳೆದುಕೊಳ್ಳುತ್ತಾ ಬಂದಿರುವ ನಮ್ಮ ಬಂಧುಗಳು ಇಂತಹ ವಿಷಯಗಳನ್ನು ಹೆಚ್ಚು ಹೆಚ್ಚು ಒಗ್ಗಟ್ಟಿನಿಂದ ಮಾತನಾಡುವ ಜವಾಬ್ದಾರಿ ತೋರಬೇಕು. ಕೊನೆಯದಾಗಿ ಕಾಂತಾರ ಎಂದರೆ ‘ಕಾಡು' ಅದು ಧಮಾರ್ಂದರ ಚುನಾವಣಾ ಬೀಡಲ್ಲ' ಎಂದು ಮಹದೇವಪ್ಪ ತಿರುಗೇಟು ನೀಡಿದ್ದಾರೆ.