ಮೃತಪಟ್ಟ ಮಗನ ಆಸ್ತಿಯಲ್ಲೂ ವಿಧವೆ ತಾಯಿಗೆ ಹಕ್ಕಿದೆ: ಹೈಕೋರ್ಟ್ ಆದೇಶ
ಬೆಂಗಳೂರು, ಅ.27: ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 8ರ ಅಡಿ ಸಾವನ್ನಪ್ಪಿದ ಮಗನ ಆಸ್ತಿಯಲ್ಲಿ ವಿಧವೆ ತಾಯಿಗೂ ಹಕ್ಕಿದೆ ಎಂದು ಹೈಕೋರ್ಟ್ (High Court of Karnataka) ಮಹತ್ವದ ಆದೇಶ ನೀಡಿದೆ.
ಬೀದರ್ ಜಿಲ್ಲೆಯವರಾದ ಆಸ್ತಿಯ ಮೂಲ ವಾರಸುದಾರರಾದ ಮೃತಪಟ್ಟಿರುವ ಹನುಮಂತರೆಡ್ಡಿ ಅವರ ಪತ್ನಿ ಈರಮ್ಮ ಅವರು ಅಧೀನ ನ್ಯಾಯಾಲಯಗಳು ಆಸ್ತಿ ಹಂಚಿಕೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ.ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಮಕ್ಕಳು 6/75ನೆ ಭಾಗಕ್ಕೆ ಅರ್ಹರಾಗಿದ್ದು, ಈರಮ್ಮ ಅವರು 6/75ನೆ ಪಾಲು ಜೊತೆಗೆ 1/25ರಷ್ಟು ಭಾಗಕ್ಕೆ ಅರ್ಹರಾಗಿದ್ದಾರೆ. ಒಟ್ಟಾರೆ ಇದು 9/75ರಷ್ಟು ಆಸ್ತಿ ಆಗಲಿದೆ ಎಂದು ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಎರಡು ನ್ಯಾಯಾಲಯಗಳೂ ರೂಪಿಸಿರುವ ಪ್ರಾಥಮಿಕ ಡಿಕ್ರಿಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಹನುಮಂತರೆಡ್ಡಿ ಹಾಗೂ ಈರಮ್ಮ ದಂಪತಿಗೆ ಪೊರಸರೆಡ್ಡಿ, ಭೀಮರೆಡ್ಡಿ(ಮೃತಪಟ್ಟಿದ್ದಾರೆ), ರೇವಮ್ಮ ಮತ್ತು ಬಸವರೆಡ್ಡಿ ಎಂಬ ನಾಲ್ಕು ಮಕ್ಕಳಿದ್ದು, ಈತಮ್ಮನ ಪತಿ ಹನುಮಂತರೆಡ್ಡಿಯೂ ಮೃತಪಟ್ಟಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ತಾಯಿ, ಮಕ್ಕಳ ನಡುವೆ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ಈ ವಿಚಾರ ಬೀದರ್ ಜಿಲ್ಲೆಯ ಸ್ಥಳೀಯ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಅಲ್ಲಿ ಬಂದ ತೀರ್ಪು ಸಮಾಧಾನ ತರದ ಹಿನ್ನೆಲೆಯಲ್ಲಿ ಈರಮ್ಮ ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ನ್ಯಾಯಪೀಠವು ಈ ಕೇಸ್ನ ವಿಚಾರಣೆ ನಡೆಸಿದ್ದು, ಮಹಿಳೆಗೆ ತನ್ನ ಮೃತ ಗಂಡನ ಆಸ್ತಿಯಲ್ಲಿ ಮಾತ್ರವಲ್ಲ, ಮೃತ ಮಗನ ಆಸ್ತಿಯಲ್ಲೂ ಸಮಾನ ಪಾಲು ಪಡೆಯಲು ಅಧಿಕಾರವಿದೆ ಎಂದು ಆದೇಶದಲ್ಲಿ ಹೇಳಿದೆ. ಆದರೆ, ಈ ನಿಯಮ ವಿಧವೆ ತಾಯಂದಿರಿಗೆ ಮಾತ್ರ ಅನ್ವಯವಾಗುತ್ತದೆಯೇ ವಿನಹ ಪತಿ ಇರುವ ಮಹಿಳೆ ತನ್ನ ಮೃತ ಮಗನ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹಳಾಗಿರುವುದಿಲ್ಲ ಎಂದು ತಿಳಿಸಿದೆ.