ಸಂತ್ರಸ್ತೆ ವಯಸ್ಸಿಗೆ ಬಂದ ಕೂಡಲೇ ಮದುವೆಯಾಗುವಂತೆ ಷರತ್ತು ವಿಧಿಸಿ ಆರೋಪಿಗೆ ಹೈಕೋರ್ಟ್ ನಿಂದ ಜಾಮೀನು
ಪೊಕ್ಸೊ ಪ್ರಕರಣ
ಬೆಂಗಳೂರು, ಅ.28: ಸಂತ್ರಸ್ತೆಯು ಪ್ರಾಪ್ತ ವಯಸ್ಕರಾದ ನಂತರ ತಕ್ಷಣ ಮದುವೆ ಆಗುವಂತೆ ಪೋಕ್ಸೊ ಕೇಸ್ನಲ್ಲಿನ ಆರೋಪಿಗೆ ಷರತ್ತು ವಿಧಿಸಿ, ಜಾಮೀನು ಮಂಜೂರು ಮಾಡಿ ಹೈಕೋರ್ಟ್ (High Court of Karnataka) ಆದೇಶಿಸಿದೆ.
ರಾಮನಗರ ಜಿಲ್ಲೆಯ ಯುವಕ(22 ವರ್ಷ) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠ, ಆರೋಪಿಗೆ ಷರತ್ತು ವಿಧಿಸಿ, ಜಾಮೀನು ಮಂಜೂರು ಮಾಡಿದೆ.
ಸಂತ್ರಸ್ತೆಯು ಪ್ರಾಪ್ತ ವಯಸ್ಕರಾದ ನಂತರ ತಕ್ಷಣ ಆರೋಪಿಯು ಆಕೆಯನ್ನು ಮದುವೆಯಾಗಬೇಕು. ವಿವಾಹ ನೋಂದಣಿ ಮಾಡಿಸಬೇಕು. ಆ ದಾಖಲೆಯನ್ನು ವಿಚಾರಣಾಧೀನ ಕೋರ್ಟ್ಗೆ ಸಲ್ಲಿಸಬೇಕೆಂದು ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ.
ಸಂತ್ರಸ್ತೆಯು, ಆರೋಪಿಯ ಜತೆಗೆ ಸಂಬಂಧ ಹೊಂದಿರುವುದಾಗಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾಳೆ. ಅಲ್ಲದೆ, ಸಂತ್ರಸ್ತೆಗೆ ಈಗಾಗಲೇ ಹದಿನೇಳು ವರ್ಷಗಳಾಗಿದ್ದು, ಆಕೆಗೆ ಸರಿ ಮತ್ತು ತಪ್ಪಿನ ಬಗ್ಗೆ ಅರ್ಥೈಸಿಕೊಳ್ಳುವ ಸಾಮಥ್ರ್ಯವಿದೆ ಎನ್ನುವುದನ್ನೂ ತೆಗೆದುಹಾಕುವಂತಿಲ್ಲ. ಸಂತ್ರಸ್ತೆಯು ವಯಸ್ಕರಾದ ನಂತರ ತಕ್ಷಣ ಮದುವೆ ಮಾಡಿಕೊಳ್ಳುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ ಎಂಬ ಕುರಿತಂತೆ ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ.
ಪ್ರಕರಣವೇನು?: ಸಂತ್ರಸ್ತೆಯ ತಂದೆ ನೀಡಿದ ದೂರನ್ನು ಆಧರಿಸಿ ರಾಮನಗರ ಮಹಿಳಾ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೊ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪೋಕ್ಸೋ ಕಾಯಿದೆ ಅಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಆರೋಪಿಯು ಸಂಬಂಧಿಯಾಗಿದ್ದು, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಇಬ್ಬರು ಭೇಟಿಯಾಗಿದ್ದರು. ಜತೆಗೆ ಆರೋಪಿ ಹಾಗೂ ಸಂತ್ರಸ್ತೆಯು ದೈಹಿಕ ಸಂಬಂಧ ಬೆಳೆಸಿದ್ದರು. ಬಾಲಕಿ ಗರ್ಭಿಣಿ ಆಗಿದ್ದರಿಂದ ಆಕೆಯ ತಂದೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣಾಧೀನ ಕೋರ್ಟ್ ಆರೋಪಿಗೆ ಜಾಮೀನು ನಿರಾಕರಿಸಿತ್ತು.