ಪತ್ರಿಕಾಗೋಷ್ಠಿಯಿಂದ ಎರಡು ವಾಹಿನಿಗಳನ್ನು ನಿರ್ಬಂಧಿಸಿದ ಕೇರಳ ರಾಜ್ಯಪಾಲ
ಕೊಚ್ಚಿ: ಇಂದು ನಡೆದ ತಮ್ಮ ಪತ್ರಿಕಾಗೋಷ್ಠಿಯ ವರದಿ ಮಾಡುವುದರಿಂದ ಕೇರಳ ರಾಜ್ಯಪಾಲ (Kerala Governor) ಆರಿಫ್ ಮೊಹಮ್ಮದ್ ಖಾನ್ (Arif Mohammad Khan) ಅವರು ಎರಡು ಮಲಯಾಳಂ ವಾಹಿನಿಗಳನ್ನು (Malayalam channels) ನಿರ್ಬಂಧಿಸಿದ್ದಾರೆ.
ಪತ್ರಿಕಾಗೋಷ್ಠಿ ಸ್ಥಳದಿಂದ ನಿರ್ಗಮಿಸುವಂತೆ ಕೈರಾಳಿ ನ್ಯೂಸ್ (Kairali News) ಮತ್ತು ಮೀಡಿಯಾ ಒನ್ (Media One) ವಾಹಿನಿಗಳಿಗೆ ಸೂಚಿಸಿದ ರಾಜ್ಯಪಾಲರು ರಾಜಕಾರಣಿಗಳಂತೆ 'ಸೋಗು ಹಾಕಿರುವ' ಈ ಎರಡು ವಾಹಿನಿಗಳವರನ್ನು ಭೇಟಿಯಾಗಲು ತಾವು ಬಯಸುವುದಿಲ್ಲ ಎಂದಿದ್ದಾರೆ.
"ಮಾಧ್ಯಮ ಬಹಳ ಮುಖ್ಯ ಎಂದು ಪರಿಗಣಿಸುತ್ತೇವೆ. ಮಾಧ್ಯಮಕ್ಕೆ ಯಾವಾಗಲೂ ಪ್ರತಿಕ್ರಿಯೆ ನೀಡಿದ್ದೇನೆ ಆದರೆ ಮಾಧ್ಯಮದ ಸೋಗು ಹಾಕಿರುವವರ ಜೊತೆ ಸಂವಹನ ಇಷ್ಟವಿಲ್ಲ. ಅವರು ಮಾಧ್ಯಮವಲ್ಲ, ಅವರು ಮಾಧ್ಯಮದ ಸೋಗು ಹಾಕಿರುವವರು ಹಾಗೂ ಮೂಲತಃ ರಾಜಕೀಯದೊಂದಿಗೆ ನಂಟು ಹೊಂದಿರುವವರು,'' ಎಂದು ಖಾನ್ ಹೇಳಿದರು.
"ಅವರು ನಿಜವಾಗಿಯೂ ಪಕ್ಷವೊಂದರ ಸದಸ್ಯರು. ಆದುದರಿಂದ ಈ ವಾಹಿನಿಗಳ ಯಾರಾದರೂ ಇಲ್ಲಿದ್ದರೆ ದಯವಿಟ್ಟು ತೆರಳಿ. ಕೈರಾಳಿ ಮತ್ತು ಮೀಡಿಯಾ ಒನ್ನವರು ಇಲ್ಲಿದ್ದರೆ ನಾನು ಹೊರನಡೆಯುತ್ತೇನೆ. ಕೈರಾಳಿ ಹಾಗೂ ಮೀಡಿಯಾ ಒನ್ ಜೊತೆಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬಯಸುತ್ತೇನೆ'' ಎಂದರು.
ಕೊಚ್ಚಿಯ ಗೆಸ್ಟ್ ಹೌಸ್ ಒಂದರಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಲಾಗಿತ್ತು. ಈ ಹಿಂದೆ ಅಕ್ಟೋಬರ್ 24 ರಂದು ರಾಜ ಭವನದಿಂದ ಮೇಲಿನ ಎರಡು ವಾಹಿನಿಗಳ ಸಹಿತ ನಾಲ್ಕು ವಾಹಿನಿಗಳಿಗೆ ರಾಜ್ಯಪಾಲರ ಪತ್ರಿಕಾಗೋಷ್ಠಿಯಿಂದ ನಿರ್ಬಂಧ ಹೇರಲಾಗಿತ್ತು.
ಕೈರಾಳಿ ನ್ಯೂಸ್ ರಾಜ್ಯದ ಆಡಳಿತ ಸಿಪಿಐ(ಎಂ) ಪ್ರಾಯೋಜಿತ ವಾಹಿನಿಯಾಗಿದ್ದರೆ, ಮೀಡಿಯಾ ಒನ್ ಮಲಯಾಳಂ ಉಪಗ್ರಹ ಚಾನಲ್ ಕೆಲವೊಂದು ಅನುಮತಿಗಳಿಗೆ ಸಂಬಂಧಿಸಿದಂತೆ ಕೇಂದ್ರದಿಂದ ನಿರ್ಬಂಧ ಎದುರಿಸುತ್ತಿದೆ.
ಈ ನಿರ್ಬಂಧವನ್ನು ಪ್ರಶ್ನಿಸಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಕಾಯ್ದಿರಿಸಿದೆ. ಮಾರ್ಚ್ ತಿಂಗಳಿನಲ್ಲಿ ನೀಡಿದ್ದ ಮಧ್ಯಂತರ ಆದೇಶದಲ್ಲಿ ವಾಹಿನಿಗೆ ಕಾರ್ಯನಿರ್ವಹಿಸಲು ಸುಪ್ರೀಂ ಕೋರ್ಟ್ ಅನುಮತಿಸಿತ್ತು.