ಪಿಎಂ-ಕಿಸಾನ್: ಮತ್ತೊಂದು ಸುಳ್ಳು ಭರವಸೆಯೆ?
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್) ಒಂದು ಸುಳ್ಳು ಭರವಸೆ ಮಾತ್ರವೇ? ಇಂಥದೊಂದು ಪ್ರಶ್ನೆ ಎದ್ದಿದೆ. ಫಲಾನುಭವಿಗಳಲ್ಲಿನ ದೊಡ್ಡ ಮಟ್ಟದ ಕುಸಿತ ಅಚ್ಚರಿ ಮೂಡಿಸಿದೆ.
ಕಳೆದೆರಡು ವರ್ಷಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್) ಫಲಾನುಭವಿಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಕುಸಿತವಾಗಿದೆ. ‘ಹಿಂದೂ’ ವರದಿಯ ಪ್ರಕಾರ, 2019ರ ಫೆಬ್ರವರಿಯ ಮೊದಲ ಕಂತಿನಿಂದ 2022ರ ಮೇ-ಜೂನ್ವರೆಗಿನ 11ನೇ ಕಂತಿನವರೆಗೆ ಯೋಜನೆಯ ಫಲಾನುಭವಿಗಳ ಸಂಖ್ಯೆ 11.84 ಕೋಟಿಯಿಂದ 3.87 ಕೋಟಿಗೆ ಇಳಿದಿದೆ. ಅಂದರೆ ಮೂರನೇ ಎರಡರಷ್ಟು ಕುಸಿತ ಇದು. ಈ ವಿಚಾರವನ್ನು ಕೇಂದ್ರ ಕೃಷಿ ಸಚಿವಾಲಯದ ಅಂಕಿಅಂಶಗಳೇ ದೃಢಪಡಿಸಿವೆ.
ಮಾಹಿತಿ ಹಕ್ಕು ಪ್ರಶ್ನೆಯಡಿಯಲ್ಲಿ ಪಡೆಯಲಾದ ಉತ್ತರದಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ನಿಧಿಯ 11ನೇ ಕಂತಿನ ಹಣವನ್ನು ಪಡೆದ ಫಲಾನುಭವಿಗಳ ಸಂಖ್ಯೆಯಲ್ಲಿ ಶೇ.67ರಷ್ಟು ಇಳಿಕೆ ಕಂಡಿದೆ. 2019ರಲ್ಲಿ ಪ್ರಾರಂಭವಾದ ಪ್ರಮುಖ ಕೇಂದ್ರ ಯೋಜನೆಯಾಗಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ಅರ್ಹ ರೈತ ಕುಟುಂಬಗಳಿಗೆ ಪ್ರತೀ ವರ್ಷಕ್ಕೆ 6,000 ರೂ.ಗಳನ್ನು ತಲಾ 2,000 ರೂ.ಗಳಂತೆ ಮೂರು ಕಂತುಗಳಲ್ಲಿ ಪಾವತಿಸಲಾಗುತ್ತಿತ್ತು. ಈ ಯೋಜನೆಯಡಿ ರೈತ ಕುಟುಂಬಗಳು ಇಲ್ಲಿಯವರೆಗೆ 2 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಪಡೆದಿವೆ ಎಂದು ಕೇಂದ್ರ ಸರಕಾರ ಹೇಳಿದೆ.
2019ರಲ್ಲಿ 11.84 ಕೋಟಿ ರೈತರಿಗೆ ಯೋಜನೆಯಡಿ ಮೊದಲ 2,000 ರೂ.ಗಳನ್ನು ವಿತರಿಸಿದ್ದರೆ, ಈ ವರ್ಷ 3.87 ಕೋಟಿ ರೈತರಿಗೆ ಮಾತ್ರ 11ನೇ ಕಂತು ಬಂದಿದೆ ಎಂಬುದನ್ನು ಕೇಂದ್ರ ಕೃಷಿ ಸಚಿವಾಲಯ ಒಪ್ಪಿಕೊಂಡಿದೆ. 2019ರ ಚುನಾವಣೆಯ ನಂತರ, ಈ ಯೋಜನೆಯನ್ನು ದೇಶದ ಎಲ್ಲಾ ರೈತರಿಗೆ ಅವರ ಜಮೀನಿನ ಗಾತ್ರವನ್ನು ಲೆಕ್ಕಿಸದೆ ವಿಸ್ತರಿಸಲಾಗಿತ್ತು.
2020ರ ಕೊನೆಯಲ್ಲಿ ವಿತರಿಸಲಾದ ಯೋಜನೆಯಡಿಯಲ್ಲಿ ಆರನೇ ಕಂತಿನಿಂದ ಈ ಇಳಿಕೆ ಪ್ರಾರಂಭವಾಯಿತು. ಕೇವಲ 9.87 ಕೋಟಿ ರೈತರು ಮಾತ್ರ ಆರನೇ ಕಂತಿನ ಹಣವನ್ನು ಪಡೆದರು. ಆದರೆ 7ನೇ ಕಂತಿನ ಹಣ 9.30 ಕೋಟಿ ರೈತರಿಗೆ ತಲುಪಿತು. 8ನೇ ಕಂತಿನ ಹಣ ಪಡೆದವರು 8.59 ಕೋಟಿ ರೈತರು ಮಾತ್ರ. 9ನೇ ಕಂತಿನ ಹಣ 7.66 ಕೋಟಿ ರೈತರಿಗೆ ಸಿಕ್ಕಿದ್ದರೆ, 10ನೇ ಕಂತಿನ ಹಣ ಪಡೆದ ರೈತರು 6.34 ಕೋಟಿ ಮಾತ್ರ. ಈ ನಿಧಿ ಕುರಿತ ಪ್ರಚಾರ ಮತ್ತು ವಾಸ್ತವದ ನಡುವೆ ದೊಡ್ಡ ಅಂತರವಿದೆ ಎಂಬುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸಿವೆ.
ಫಲಾನುಭವಿಗಳ ಸಂಖ್ಯೆಯಲ್ಲಿ ದೊಡ್ಡ ಕುಸಿತ ಕಂಡ ರಾಜ್ಯಗಳ ಪೈಕಿ ಬಿಜೆಪಿಯದ್ದೇ ಸರಕಾರವಿರುವ ಮಧ್ಯಪ್ರದೇಶ ಮೊದಲನೆಯದು. ಈ ಸಂಖ್ಯೆ 88.63 ಲಕ್ಷದಿಂದ ಕೇವಲ 12,053 ಲಕ್ಷಕ್ಕೆ ಇಳಿದಿದೆ, ಹಾಗೆಯೇ ಮೇಘಾಲಯದಲ್ಲಿ ಮೊದಲ ಕಂತಿನಲ್ಲಿ 1.95 ಲಕ್ಷ ಇದ್ದದ್ದು ಕೇವಲ 0.0063 ಲಕ್ಷಕ್ಕೆ ಇಳಿದಿದೆ.
ಗಮನಾರ್ಹ 1.09 ಕೋಟಿ ಮೊದಲ ಕಂತಿನ ಫಲಾನುಭವಿಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 11ನೇ ಕಂತಿನ ವೇಳೆಗೆ ಕೇವಲ 37.51 ಲಕ್ಷ ಫಲಾನುಭವಿಗಳಷ್ಟೇ ಹಣ ಪಡೆದಿದ್ದು, ಶೇ.65.89ರಷ್ಟು ಕುಸಿತವಾಗಿದೆ. ಪಂಜಾಬ್ನಲ್ಲಿ ಫಲಾನುಭವಿಗಳ ಸಂಖ್ಯೆ 23.34 ಲಕ್ಷದಿಂದ 11.31 ಲಕ್ಷಕ್ಕೆ ಕುಸಿದಿದೆ.
ಡಿಸೆಂಬರ್ ಆರಂಭದಲ್ಲಿ ಚುನಾವಣೆ ನಡೆಯುವ ಗುಜರಾತ್ನಲ್ಲಿ ಮೊದಲ ಕಂತಿನಿಂದ 11ನೇ ಕಂತಿನವರೆಗೆ ಫಲಾನುಭವಿಗಳ ಸಂಖ್ಯೆ 63.13 ಲಕ್ಷದಿಂದ 28.41 ಲಕ್ಷಕ್ಕೆ ಅಂದರೆ ಶೇ.55ಕ್ಕೆ ಕುಸಿದಿದೆ.
ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವಾಲಯದ ಆರ್ಟಿಐ ಪ್ರತಿಕ್ರಿಯೆಯಲ್ಲಿನ ಮಾಹಿತಿಯು ಅಸ್ಪಷ್ಟವಾಗಿರುವುದು ಗಮನ ಸೆಳೆಯುತ್ತದೆ. ಯೋಜನೆಯ ಹಲವಾರು ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರಕಾರ ಮತ್ತು ಕೇಂದ್ರ ಸರಕಾರದ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪಶ್ಚಿಮ ಬಂಗಾಳದ ರೈತರು 2021ರ ಮೇ ತಿಂಗಳಲ್ಲಿ ಯೋಜನೆಯ ಎಂಟನೇ ಕಂತಿನವರೆಗೆ ಯಾವುದೇ ಹಣವನ್ನು ಸ್ವೀಕರಿಸಲಿಲ್ಲ ಎಂಬ ವರದಿಯಿದೆ. ಆದಾಗ್ಯೂ, ರಾಜ್ಯದಲ್ಲಿ ಮೊದಲ ಕಂತಿನ ಫಲಾನುಭವಿಗಳ ಸಂಖ್ಯೆ 45.63 ಲಕ್ಷ ಎಂದು ನಮೂದಾಗಿದ್ದು, ಆರನೇ ಕಂತಿನ ನಂತರ ಬಂಗಾಳದ ಯಾವುದೇ ರೈತರು ಯೋಜನೆಯ ಅಡಿಯಲ್ಲಿ ಹಣವನ್ನು ಪಡೆದಿಲ್ಲ ಎಂಬುದು ಗೊತ್ತಾಗುತ್ತದೆ. ಈ ಅಂಶವು, ಈ ವರ್ಷದ ಆರಂಭದಲ್ಲಿ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೀಡಿದ್ದ ಹೇಳಿಕೆಗೆ ಹೊಂದಿಕೆಯಾಗುತ್ತದೆ.
ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿನ ಕುಸಿತದ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಅಶೋಕ್ ಧಾವಲೆ, ಈ ಯೋಜನೆ ಮತ್ತೊಂದು ಸುಳ್ಳು ಭರವಸೆ ಮಾತ್ರ. ರೈತರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಇದು ನಿವಾರಿಸಲಾರದು ಎನ್ನುತ್ತಾರೆ. ಅಲ್ಲದೆ ಚುನಾವಣೆ ಗೆಲ್ಲುವಲ್ಲಿ ಬಿಜೆಪಿಗೆ ವರವಾದ ಯೋಜನೆ ಇದೆಂಬ ಮಾತುಗಳೂ ಇವೆ.
ಬಿಜೆಪಿಗೆ ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಲಾಭವಾದ ಪಿಎಂ-ಕಿಸಾನ್?
2018ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಮಧ್ಯಪ್ರದೇಶದ 230 ಸ್ಥಾನಗಳಲ್ಲಿ 114 ಮತ್ತು ರಾಜಸ್ಥಾನದ 199 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಗೆದ್ದಿತ್ತು. ಆ ರಾಜ್ಯಗಳಲ್ಲಿದ್ದ ಕ್ರಮವಾಗಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೆ ಅವರ ಸರಕಾರಗಳಿಗೆ ಆಘಾತ ಕೊಟ್ಟಿತ್ತು. ಬಿಜೆಪಿ ಮಧ್ಯಪ್ರದೇಶದಲ್ಲಿ 109 ಮತ್ತು ರಾಜಸ್ಥಾನದಲ್ಲಿ 73 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ 29 ಸ್ಥಾನಗಳಲ್ಲಿ ಕೇವಲ 1 ಸ್ಥಾನ ಪಡೆದರೆ, ರಾಜಸ್ಥಾನದಲ್ಲಿ ಸೊನ್ನೆ ಸಂಪಾದನೆ ಮಾಡಿತು. ರಾಜಸ್ಥಾನದ 25 ಸ್ಥಾನಗಳ ಪೈಕಿ 24 ಸ್ಥಾನಗಳು ಬಿಜೆಪಿ ಪಾಲಾಗಿದ್ದವು. ಇದು ಕಾಂಗ್ರೆಸ್ನ ಅತ್ಯಂತ ಕಳಪೆ ಪ್ರದರ್ಶನವಾಗಿತ್ತು.
ರೈತರ ಪರ ನಿಲುವು ತೆಗೆದುಕೊಳ್ಳುವಲ್ಲಿನ ಕಾಂಗ್ರೆಸ್ ವೈಫಲ್ಯವೇ ರೈತರು ತಿರುಗಿಬೀಳಲು ಕಾರಣ ಎನ್ನಲಾಯಿತು. ಕಾಂಗ್ರೆಸ್ನ ಈ ವೈಫಲ್ಯವನ್ನು ಬಿಜೆಪಿ ಸರಿಯಾಗಿಯೇ ಉಪಯೋಗಿಸಿಕೊಂಡಿತ್ತು. 2019ರಲ್ಲಿ ಪಿಎಂ-ಕಿಸಾನ್ ಯೋಜನೆ ಆರಂಭಿಸಿತ್ತು. 2,000 ರೂ. ನೀಡುವ ಆ ಯೋಜನೆ ಬಿಜೆಪಿಗೆ ಮತಗಳನ್ನು ತಂದುಕೊಡುವಲ್ಲಿ ನೆರವಾಯಿತೆಂದೇ ವಿಶ್ಲೇಷಿಸಲಾಗುತ್ತದೆ.