ಚಲಿಸುತ್ತಿದ್ದ ರೈಲಿನ ಕಿಟಕಿ ಮೂಲಕ ತೂರಿ ಬಂದ ಕಬ್ಬಿಣದ ರಾಡ್: ಪ್ರಯಾಣಿಕ ಮೃತ್ಯು
Photo credit: NDTV
ಹೊಸದಿಲ್ಲಿ: ಕಬ್ಬಿಣದ ರಾಡ್ (Iron Rod) ಒಂದು ಚಲಿಸುತ್ತಿರುವ ರೈಲಿನ (Train) ಕಿಟಿಕಿಯಿಂದ ತೂರಿ ಬಂದು ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನ ಕತ್ತು ಸೀಳಿ ಇನ್ನೊಂದು ಬದಿಯಿಂದ ಹೊರಬಂದ ಭಯಾನಕ ಘಟನೆ ವರದಿಯಾಗಿದೆ. ನಾರ್ತ್ ಸೆಂಟ್ರಲ್ ರೈಲ್ವೆಯ ಪ್ರಯಾಗರಾಜ್ ವಿಭಾಗದಲ್ಲಿ ದಿಲ್ಲಿಯಿಂದ ಕಾನ್ಪುರ್ಗೆ (Kanpur) ಸಂಚರಿಸುತ್ತಿದ್ದ ನಿಲಾಂಚಲ್ ಎಕ್ಸ್ಪ್ರೆಸ್ ರೈಲು ದನ್ವರ್ ಹಾಗೂ ಸೊಮ್ನಾ ನಡುವೆ ಸಂಚರಿಸುತ್ತಿದ್ದಾಗ ಇಂದು ಬೆಳಿಗ್ಗೆ ಸುಮಾರು 8.45 ಕ್ಕೆ ಈ ಘಟನೆ ನಡೆದಿದೆ.
ಪ್ರಯಾಣಿಕ ಹರಿಕೇಶ್ ಕುಮಾರ್ ದುಬೆ ಎಂಬವರು ಈ ದುರ್ಘಟನೆಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕಬ್ಬಣಿದ ರಾಡ್ ಅವರ ಕುತ್ತಿಗೆಯನ್ನು ಸೀಳಿದ ತಕ್ಷಣ ಅವರು ಮೃತರಾಗಿದ್ದರಿಂದ ಕಣ್ಣು ಮುಚ್ಚಿ ರಕ್ತದ ಮಡುವಿನಲ್ಲಿ ಅವರು ಕುಳಿತ ಸ್ಥಿತಿಯಲ್ಲಿದ್ದ ದೃಶ್ಯ ಎಂತಹವರನ್ನೂ ದಂಗುಬಡಿಸುವಂತಿತ್ತು.
ರೈಲ್ವೆ ಹಳಿ ಕಾಮಗಾರಿಯಲ್ಲಿ ಬಳಸಲಾಗುವ ಕಬ್ಬಿಣದ ರಾಡ್ ಕಿಟಿಕಿಯ ಮೂಲಕ ತೂರಿ ಬಂದಿತ್ತು. ಅವಘಡದ ನಂತರ ರೈಲನ್ನು ಆಲಿಘರ್ ಜಂಕ್ಷನ್ನಲ್ಲಿ ನಿಲ್ಲಿಸಲಾಯಿತಲ್ಲದೆ ಮೃತದೇಹವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.