ಕೋವಿಡ್ ಬಳಿಕ ಭಾರತೀಯರಲ್ಲಿ ದಿಡೀರ್ ಹೃದಯಾಘಾತಗಳಲ್ಲಿ ಆತಂಕಕಾರಿ ಏರಿಕೆ: ವೈದ್ಯರಲ್ಲಿ ಕಳವಳ
ಹೊಸದಿಲ್ಲಿ: ರಸ್ತೆಗಳಲ್ಲಿ, ನೃತ್ಯ ವೇದಿಕೆಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಮತ್ತು ಜಿಮ್ಗಳಲ್ಲಿ ಸದೃಢ ಯುವಜನರಲ್ಲಿ ಹೃದಯಾಘಾತ (heart attacks) ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಇಂತಹ ಕೆಲವು ಪ್ರಕರಣಗಳಿಗೆ ದೀರ್ಘಕಾಲೀನ ಕೋವಿಡ್ (Covid) ಕಾರಣವಾಗಿರುವ ಸಾಧ್ಯತೆಯಿದೆ ಮತ್ತು ಜನರು ತಮಗೆ ಅಭ್ಯಾಸವಿಲ್ಲದ ಭಾರೀ ವ್ಯಾಯಾಮಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ವೈದ್ಯರು ಪುನರುಚ್ಚರಿಸಿದ್ದಾರೆ.
ಕೆಲವು ದಿನಗಳಿಂದ #heartattack ಹ್ಯಾಷ್ಟ್ಯಾಗ್ ಕೂಡ ಟ್ರೆಂಡಿಂಗ್ ಆಗಿದ್ದು, ಆರೋಗ್ಯವಂತ ಮತ್ತು ಸದೃಢರಾಗಿದ್ದವರಲ್ಲಿ ದಿಢೀರ್ ಹೃದಯಾಘಾತದ ಹಲವಾರು ನಿದರ್ಶನಗಳನ್ನು ಉಲ್ಲೇಖಿಸಲಾಗಿದೆ. ‘23ರ ಹರೆಯದ ಜ್ಯೋತ್ಸ್ನಾ ಕೋಥಾ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ನರ್ತಿಸುತ್ತಿದ್ದಾಗ ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ’ಎಂದು ಟ್ವೀಟಿಸಿರುವ ಬಳಕೆದಾರನೋರ್ವ ವೀಡಿಯೊವನ್ನೂ ಪೋಸ್ಟ್ ಮಾಡಿದ್ದಾನೆ. ಯುವಕನೋರ್ವ ವಾಕಿಂಗ್ ಮಾಡುತ್ತಿರುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿರುವ ಇನ್ನೊಂದು ವೀಡಿಯೊ ತೋರಿಸಿದೆ.
ಹೃದಯತಜ್ಞರ ಪ್ರಕಾರ, ಜನರು ಅನಿರೀಕ್ಷಿತವಾಗಿ ಹೃದಯಘಾತದಿಂದ ಸಾವನ್ನಪ್ಪುವ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವುದು ಆತಂಕಾರಿಯಾಗಿದೆ.
‘ಇದು ಕೋವಿಡ್ ಪ್ರೇರಿತ ವಿದ್ಯಮಾನವಾಗಿದೆ ಎನ್ನುವುದಕ್ಕೆ ನಮ್ಮ ಬಳಿ ಸಾಕಷ್ಟು ಮಾಹಿತಿ ಮತ್ತು ಪುರಾವೆಗಳಿಲ್ಲವಾದರೂ ಖಂಡಿತವಾಗಿಯೂ ಕೋವಿಡ್ ನಂತರ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ದೀರ್ಘಕಾಲೀನ ಕೋವಿಡ್ನ ಪರಿಣಾಮ ಕೆಲವು ಹೃದಯಘಾತ ಪ್ರಕರಣಗಳಿಗೆ ಕಾರಣವಾಗಿರುವ ಸಾಧ್ಯತೆಯಿದೆ’ ಎಂದು ದಿಲ್ಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ನ ನಿರ್ದೇಶಕ (ಹೃದಯಶಾಸ್ತ್ರ) ಡಾ.ಸಮೀರ್ ಕುಬ್ಬಾ ಹೇಳಿದ್ದಾಗಿ IANS ವರದಿ ಮಾಡಿದೆ.
ಕಳೆದ ತಿಂಗಳು ‘ಕುಸುಮ್ ’ಮತ್ತು ‘ಕಸೌಟಿ ಜಿಂದಗಿ ಕೆ’ಯಂತಹ ಜನಪ್ರಿಯ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದ ಟಿವಿ ನಟ ಸಿದ್ಧಾಂತ ವೀರ್ ಸೂರ್ಯವಂಶಿ ಅವರು ತನ್ನ 46ರ ಹರೆಯದಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ವರ್ಷದ ಪೂರ್ವಾರ್ಧದಲ್ಲಿ ಕಾಮಿಡಿಯನ್ ರಾಜು ಶ್ರೀವಾಸ್ತವ ಕೂಡ ಜಿಮ್ನಲ್ಲಿ ಟ್ರೆಡ್ಮಿಲ್ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ದಿಢೀರ್ ಹೃದಯಘಾತಕ್ಕೊಳಗಾಗಿ, ಕೆಲವು ವಾರಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. 2021ರಲ್ಲಿ ಸ್ಯಾಂಡಲ್ವುಡ್ನ ಸೂಪರ್ಸ್ಟಾರ್ ಪುನೀತ್ ರಾಜಕುಮಾರ್ (46) ಅವರೂ ಜಿಮ್ನಲ್ಲಿ ವ್ಯಾಯಾಮ ಮುಗಿಸಿಕೊಂಡು ಮರಳುತ್ತಿದ್ದಾಗ ಹೃದಯ ಸ್ತಂಭನದಿಂದಾಗಿ ನಿಧನರಾಗಿದ್ದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನೊಯ್ಡಾದ ಫೋರ್ಟಿಸ್ ಹಾಸ್ಪಿಟಲ್ನ ನಿರ್ದೇಶಕ ಮತ್ತು ಕಾರ್ಡಿಯಾಲಜಿ ಮುಖ್ಯಸ್ಥ ಡಾ.ಸಂಜೀವ್ ಗೇರಾ ಅವರು, ಕೋವಿಡ್ ಅಥವಾ ದೀರ್ಘಕಾಲೀನ ಕೋವಿಡ್ ಹೃದಯನಾಳಗಳಲ್ಲಿ ನಿರಂತರ ಉರಿಯೂತವನ್ನುಂಟು ಮಾಡಬಹುದು. ಇದರಿಂದ ವಿಶೇಷವಾಗಿ, ಅತಿಯಾದ ವೇಟ್ ಲಿಫ್ಟಿಂಗ್ ಅಥವಾ ಟ್ರೆಡ್ಮಿಲ್ನಲ್ಲಿ ನಡಿಗೆ ಅಥವಾ ಚಳಿಯ ವಾತಾವರಣದಲ್ಲಿ ಓಟದಂತಹ ಶರೀರಕ್ಕೆ ಒಗ್ಗದ ವ್ಯಾಯಾಮಗಳ ಬಳಿಕ ರಕ್ತನಾಳಗಳಲ್ಲಿಯ ಸೈಲಂಟ್ ಬ್ಲಾಕೇಜ್ಗಳು ಒಡೆಯಬಹುದು. ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಧೂಮಪಾನದ ಅಭ್ಯಾಸ ಅಥವಾ ಬೊಜ್ಜಿನಂತಹ ಹೃದ್ರೋಗಗಳಿಗೆ ತುತ್ತಾಗಿಸುವ ಅಂಶಗಳಿದ್ದಾಗ ಅಪಾಯವು ಹೆಚ್ಚುತ್ತದೆ ಎಂದು ಹೇಳಿದರು.
ಅದೇನೆ ಇದ್ದರೂ ಆಹಾರ ಕ್ರಮ, ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು, ಅಧಿಕ ರಕ್ತದೊತ್ತಡ, ಡಿಸ್ಲಿಪಿಡಿಮಿಯಾ(ಕೊಲೆಸ್ಟ್ರಾಲ್ ಅತಿಯಾದ ಮಟ್ಟದಲ್ಲಿರುವುದು), ಆನುವಂಶಿಕ ಅಂಶಗಳು, ಜಡ ಜೀವನಶೈಲಿ ಮತ್ತು ಧೂಮಪಾನದಿಂದಾಗಿ ಭಾರತೀಯರು, ಅದೂ ಪಾಶ್ಚಾತ್ಯರಿಗಿಂತ ಕಡಿಮೆ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಗುರಿಯಾಗುವ ಹೆಚ್ಚಿನ ಅಪಾಯದಲ್ಲಿದ್ದಾರೆ.
ಎಳೆಯ ವಯಸ್ಸಿನಲ್ಲಿಯೇ ಪರಿಧಮನಿ ಅಪಧಮನಿಗಳನ್ನು ಪೆಡಸಾಗಿಸುವ ಪಾಚಿಯು ಉಂಟಾಗಬಲ್ಲದು ಮತ್ತು ವಿಶೇಷವಾಗಿ ಅಭ್ಯಾಸವಿಲ್ಲದ ವ್ಯಾಯಾಮಗಳನ್ನು ಸೂಕ್ತ ಮಾಗದರ್ಶನ ಮತ್ತು ಮೇಲ್ವಿಚಾರಣೆಯಿಲ್ಲದೆ ಮಾಡಿದಾಗ ಇದ್ದಕ್ಕಿದ್ದಂತೆ ಅಸ್ಥಿರಗೊಳ್ಳಬಹುದು ಎಂದು ಹೇಳಿದ ಡಾ.ಕುಬ್ಬಾ, ‘ದಿಢೀರ್ ಸಾವುಗಳಲ್ಲಿ ಹೆಚ್ಚಿನವು ಹೃದಯಾಘತದಿಂದ ಸಂಭವಿಸುತ್ತವೆ, ಆದರೆ ಪ್ರತಿಯೊಂದೂ ದಿಢೀರ್ ಸಾವಿಗೆ ಹೃದಯಾಘಾತ ಕಾರಣವಲ್ಲ. ಅರಿತ್ಮಿಯಾ (ಅನಿಯಮಿತ ಅಥವಾ ಅಸಾಮಾನ್ಯ ಹೃದಯಬಡಿತ)ದಿಂದಲೂ ದಿಢೀರ್ ಸಾವು ಸಂಭವಿಸಬಹುದು. ಅರಿತ್ಮಿಯಾಕ್ಕೆ ಮಾಯೊಕಾರ್ಡಿಟಿಸ್ (ಹೃದಯ ಸ್ನಾಯುವಿನ ಸೋಂಕು), ಸೈಲಂಟ್ ಕಾರ್ಡಿಯೊಮಯೊಪತಿ (ಹೃದಯ ಸ್ನಾಯುವಿನ ದೌರ್ಬಲ್ಯ) ಮತ್ತು ಕೆಲವೊಂದು ಆನುವಂಶಿಕ ಅಸ್ವಸ್ಥತೆಗಳು ಕಾರಣವಾಗಬಹುದು. ವಿಶೇಷವಾಗಿ ಹೆಚ್ಚಿನ ಅಪಾಯ ಗುಂಪಿನ ಜನರು (ಮಧುಮೇಹ, ಅಧಿಕ ರಕ್ತದೊತ್ತಡವಿರುವವರು, ಧೂಮಪಾನಿಗಳು, ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರು, ಜಡಜೀವನ ಶೈಲಿ, ಬೊಜ್ಜು) ಜಿಮ್ಗೆ ಹೋಗುವುದನ್ನು ಆರಂಭಿಸುವ ಅಥವಾ ಮ್ಯಾರಥಾನ್ಗಳಲ್ಲಿ ಪಾಲ್ಗೊಳ್ಳುವ ಅಥವಾ ತಮಗೆ ಅಭ್ಯಾಸವಿಲ್ಲದ ತೀವ್ರ ಶ್ರಮದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮುನ್ನ ತಪಾಸಣೆ ಮಾಡಿಸಿಕೊಳ್ಳುವಂತೆ ನಾವು ಜನರಿಗೆ ಸಲಹೆ ನೀಡುತ್ತೇವೆ’ ಎಂದರು.
ತಪಾಸಣೆಯು ಉತ್ತಮ ಕ್ಲಿನಿಕಲ್ ಪರೀಕ್ಷೆ, ಇಸಿಜಿ ಮತ್ತು ಪ್ರಾಯಶಃ ಎಕೋಕಾರ್ಡಿಯೊಗ್ರಾಮ್ ಅನ್ನು ಒಳಗೊಂಡಿರಬಹುದು. ಅಲ್ಲದೆ ಮೇಲ್ವಿಚಾರಣೆಯ ಅನುಪಸ್ಥಿತಿಯಲ್ಲಿ ವ್ಯಾಯಾಮ ಮಾಡುವ ಸಾಹಸಕ್ಕೆ ಹೋಗಬಾರದು. ಶಂಕಿತ ಹೃದಯಾಘಾತ ಪ್ರಕರಣದಲ್ಲಿ ಚೀಪಲು 300-325 ಎಂಜಿ ಆಸ್ಪಿರಿನ್ ಅನ್ನು ಜೇಬಿನಲ್ಲಿಟ್ಟುಕೊಳ್ಳುವುದು ಸಮಸ್ಯೆಯೇನಲ್ಲ ಎಂದರು.
ಕೋವಿಡ್ ನಂತರದ ಹೃದಯಾಘಾತ ಅಥವಾ ಹೃದಯ ವೈಫಲ್ಯದ ಅಪಾಯ ಸೋಂಕಿನ ಮೊದಲ 30 ದಿನಗಳಲ್ಲಿ ಅತ್ಯಂತ ಹೆಚ್ಚಿರುತ್ತದೆ, ಆದರೆ ನಂತರದ ಸ್ವಲ್ಪ ಸಮಯವೂ ಈ ಅಪಾಯವು ಹೆಚ್ಚೇ ಇರುತ್ತದೆ ಎಂದು ನೂತನ ಸಂಶೋಧನೆಯೊಂದು ಬಹಿರಂಗಗೊಳಿಸಿದೆ.
ಹಾರ್ಟ್ ಜರ್ನಲ್ನಲ್ಲಿ ಪ್ರಕಟವಾಗಿರುವ ಯುಕೆ ಬಯೊಬ್ಯಾಂಕ್ ಅಧ್ಯಯನವು, ವಿಶೇಷವಾಗಿ ತೀವ್ರ ಕೋವಿಡ್ನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಸೋಂಕಿಗೂ ಹೃದಯನಾಳಗಳ ಕಳಪೆ ಆರೋಗ್ಯ ಮತ್ತು ಸಾವಿಗೂ ನಂಟು ಕಲ್ಪಿಸಿದೆ.