ಐವರು ಹೈಕೋರ್ಟ್ ನ್ಯಾಯಮೂರ್ತಿಗಳ ಪದೋನ್ನತಿಗೆ ಕೊಲಾಜಿಯಂ ಶಿಫಾರಸ್ಸು
ಹೊಸದಿಲ್ಲಿ: ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್, ಪಿ.ವಿ.ಸಂಜಯ್ ಕುಮಾರ್, ಅಹ್ಸನುದ್ದೀನ್ ಅಮಾನುಲ್ಲಾ, ಪಂಕಜ್ ಮಿತ್ತಲ್ ಮತ್ತು ಮನೋಜ್ ಮಿಶ್ರಾ ಅವರನ್ನು ದೇಶದ ಅತ್ಯುನ್ನತ ಕೋರ್ಟ್ಗೆ ನೇಮಕ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಕೊಲಾಜಿಯಂ ಶಿಫಾರಸ್ಸು ಮಾಡಿದೆ ಎಂದು timesofindia.com ವರದಿ ಮಾಡಿದೆ.
ಸಿಜೆಐ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಎಸ್.ಎ.ನಝೀರ್, ಕೆ.ಎಂ.ಜೋಸೆಫ್, ಎಂ.ಆರ್.ಶಾ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಕೊಲಾಜಿಯಂ ಈ ಶಿಫಾರಸ್ಸು ಮಾಡಿದೆ. ನ್ಯಾಯಮೂರ್ತಿ ಎನ್.ಕೋಟೀಶ್ವರ್ ಸಿಂಗ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ, ಸಂಜಯ್ ಮಿಶ್ರಾ ಅವರನ್ನು ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ, ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಅವರನ್ನು ಗುವಾಹತಿ ಹೈಕೋರ್ಟ್ಗೆ ನೇಮಕ ಮಾಡಲು ಕೂಡಾ ಕೊಲಾಜಿಯಂ ಶಿಫಾರಸ್ಸು ಮಾಡಿದೆ.
ನ್ಯಾಯಮೂರ್ತಿ ಕೋಟೀಶ್ವರ್ ಸಿಂಗ್ ಮೂಲತಃ ಮಣಿಪುರ ಹೈಕೋರ್ಟ್ನವರಾಗಿದ್ದು, ಪ್ರಸ್ತುತ ಗುವಾಹತಿ ಹೈಕೋರ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಜಮ್ಮು ಕಾಶ್ಮೀರ ಹೈಕೋರ್ಟ್ನ ಮುಖ್ಯಸ್ಥರಾಗುತ್ತಿರುವ ಮೊದಲ ಈಶಾನ್ಯ ಭಾರತದ ನ್ಯಾಯಮೂರ್ತಿ ಎನಿಸಲಿದ್ದಾರೆ. ನ್ಯಾಯಮೂರ್ತಿ ಸಂಜಯ್ ಮಿಶ್ರಾ ಅವರು ಮೂಲತಃ ಒರಿಸ್ಸಾ ಹೈಕೋರ್ಟ್ನವರಾಗಿದ್ದು, ಪ್ರಸ್ತುತ ಉತ್ತರಾಖಂಡ ಹೈಕೋರ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾಯಮೂರ್ತಿ ಚಂದ್ರನ್ ಅವರು ನ್ಯಾಯಮೂರ್ತಿ ರಶ್ಮಿನ್ ಮನ್ಹರ್ಭಿ ಛಾಯಾ ಜನವರಿ 11ರಂದು ನಿವೃತ್ತರಾದ ಬಳಿಕ ಗುವಾಹತಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.
ನ್ಯಾಯಮೂರ್ತಿ ಕರೋಲ್ ಅವರು ತ್ರಿಪುರಾ ಹೈಕೋರ್ಟ್ ಮತ್ತು ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಒಟ್ಟು ಮೂರು ವರ್ಷ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಮೂಲತಃ ಹಿಮಾಚಲ ಪ್ರದೇಶ ಹೈಕೋರ್ಟ್ನವರು. ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರು 2020ರ ಮೇ ತಿಂಗಳಲ್ಲಿ ನಿವೃತ್ತರಾದ ಬಳಿಕ ಈ ರಾಜ್ಯದ ಪ್ರಾತಿನಿಧ್ಯ ಸುಪ್ರೀಂಕೋರ್ಟ್ನಲ್ಲಿ ಇರಲಿಲ್ಲ ಎಂದು timesofindia.com ವರದಿ ಮಾಡಿದೆ.