ಮಲೆಗಾಂವ್ ಸ್ಫೋಟ: ಎನ್ಐಎ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಟೀಕೆ
ಮುಂಬೈ: ಮಲೆಗಾಂವ್ ಸ್ಫೋಟ ಪ್ರಕರಣದ ಸಂಬಂಧ ಮಹತ್ವದ ದಾಖಲೆಗಳನ್ನು ಮರೆಮಾಚಿದ ಆರೋಪದಲ್ಲಿ ಎನ್ಐಎ ಕ್ರಮವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಕಟುವಾಗಿ ಟೀಕಿಸಿದೆ ಎಂದು hindustantimes.com ವರದಿ ಮಾಡಿದೆ.
2008ರಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು 13 ವರ್ಷ ಕಳೆದರೂ ನ್ಯಾಯಾಲಯಕ್ಕೆ ಸಲ್ಲಿಸದಿರುವ ಎನ್ಐಎಯನ್ನು ತರಾಟೆಗೆ ತೆಗೆದುಕೊಂಡಿದೆ.
ವಿಧಿವಿಜ್ಞಾನ ಪರೀಕ್ಷೆಗಳನ್ನು ನಡೆಸಿದ ತಜ್ಞರನ್ನು ಇತ್ತೀಚೆಗೆ ನ್ಯಾಯಾಲಯ ವಿಚಾರಣೆಗೆ ಗುರಿಪಡಿಸಿದಾಗ ಮಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಗಳ ಧ್ವನಿ ಮಾದರಿಗಳ ವಿಶ್ಲೇಷಣೆ ನ್ಯಾಯಾಲಯದ ಗಮನಕ್ಕೆ ಬಂದಿತ್ತು.
ಪ್ರಕರಣದ ತನಿಖೆ ವೇಳೆ ಎಟಿಎಸ್, ಈ ಕೃತ್ಯದ ಸಂಚು ರೂಪಿಸಿದ ಸಭೆಯ ಆಡಿಯೊ ಧ್ವನಿಮುದ್ರಿಕೆಯನ್ನು ವಶಪಡಿಸಿಕೊಂಡಿತ್ತು. ಇದನ್ನು 2009ರಲ್ಲಿ ಕಲಿನಾದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪರೀಕ್ಷೆ ನಡೆಸಿದ ವಿಧಿವಿಜ್ಞಾನ ತಜ್ಞರನು ಇತ್ತೀಚೆಗೆ ನ್ಯಾಯಾಲಯದ ಮುಂದೆ ಸಾಕ್ಷಿಯಾಗಿ ಹಾಜರುಪಡಿಸಲಾಗಿದೆ. ಅವರು ಈ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುವ ವೇಳೆ ವಿಶ್ಲೇಷಣಾ ವರದಿ ಸಿದ್ಧಪಡಿಸಿದ್ದರು. ಈ ಪ್ರಕರಣದ ಆರೋಪಿಗಳಾದ ರಮೇಶ್ ಉಪಾಧ್ಯಾಯ, ಸುಧಾಕರ ದ್ವಿವೇದಿ ಅಲಿಯಾಸ್ ದಯಾನಂದ ಪಾಂಡೆ ಹಾಗೂ ಪ್ರಸಾದ್ ಪುರೋಹಿತ್ ಅವರ ಧ್ವನಿಗೆ ಈ ಧ್ವನಿ ಹೋಲಿಕೆಯಾಗುತ್ತದೆ ಎಂದು ಅವರು ವರದಿ ನೀಡಿದ್ದರು. ಆದಾಗ್ಯೂ ಈ ವಿಶ್ಲೇಷಣಾ ವರದಿಯನ್ನು ಎಟಿಎಸ್, ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ.
ಮಲೇಗಾಂವ್ನಲ್ಲಿ 2008ರ ಸೆಪ್ಟೆಂಬರ್ 29ರಂದು ಮೋಟರ್ಸೈಕಲ್ನಲ್ಲಿ ಇರಿಸಿದ್ದ ಬಾಂಬ್ ಸ್ಫೋಟಗೊಂಡಿತ್ತು. ಇದರಲ್ಲಿ ಆರು ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣವನ್ನು ಮೊದಲು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಪಡೆ ತನಿಖೆ ನಡೆಸಿತ್ತು. ಬಳಿಕ 2011ರ ಏಪ್ರಿಲ್ನಲ್ಲಿ ಪ್ರಕರಣವನ್ನು ವಿಸ್ತೃತ ತನಿಖೆಗಾಗಿ ಎನ್ಐಎಗೆ ವಹಿಸಲಾಗಿತ್ತು ಎಂದು hindustantimes.com ವರದಿ ಮಾಡಿದೆ.